ಚಿಕ್ಕಬಳ್ಳಾಪುರ (ಚಿಂತಾಮಣಿ): ತಾಲೂಕಿನ ಅಂಬಾಜಿದುರ್ಗಾ ಹೋಬಳಿಯ ಉಪ್ಪಾರಪೇಟೆ ಗ್ರಾಮದ ಕಸದ ರಾಶಿಯಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಇದನ್ನು ಗ್ರಾಮಸ್ಥರು ರಕ್ಷಿಸಿ ಮಕ್ಕಳ ರಕ್ಷಣಾ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ.
ಗ್ರಾಮದ ಬಸವೇಶ್ವರ ದೇವಾಲಯದ ಪಕ್ಕದಲ್ಲಿ ನವಜಾತ ಹೆಣ್ಣು ಶಿಶುವನ್ನು ಪೋಷಕರು ಬಿಸಾಕಿ ಹೋಗಿದ್ದಾರೆ. ಇರುವೆಗಳು ಮಗುವನ್ನು ಕಚ್ಚಿದರಿಂದ ಅದು ಅತ್ತಿದೆ. ಆಗ ಅಕ್ಕಪಕ್ಕದವರು ಜಮಾಯಿಸಿ ಮಗುವನ್ನು ಪತ್ತೆ ಮಾಡಿದ್ದಾರೆ. ನಂತರ ಸಾಜೀದಾ ಮತ್ತು ಚಾನ್ ಎಂಬುವವರು ಕೂಡಲೇ ಮಗುವನ್ನು ಮನೆಗೆ ಕೊಂಡೊಯ್ದು ಸ್ನಾನ ಮಾಡಿಸಿ ರಕ್ಷಿಸಿದ್ದಾರೆ.
ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಸಾಂತ್ವನ ಕೇಂದ್ರಕ್ಕೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮಕ್ಕಳ ತಜ್ಞೆ ಡಾ. ದಾಕ್ಷಾಯಿಣಿ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ, ಮಗು ಚೇತರಿಸಿಕೊಂಡಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಚೇರಿಯ ಸಿಬ್ಬಂದಿ, ಸಾಂತ್ವನ ಕೇಂದ್ರದ ಸಿಬ್ಬಂದಿ ಆಗಮಿಸಿ ಮಗುವನ್ನು ಪಡೆದುಕೊಂಡಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಘಟಕಕ್ಕೆ ಒಪ್ಪಿಸಿದ್ದಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಅಂಬಿಕಾ, ಮಕ್ಕಳ ಸಹಾಯವಾಣಿ ತಂಡದ ಸುನೀತ, ಶಾಲಿನಿ, ಸಾಂತ್ವನಾ ಕೇಂದ್ರದ ಕಾಮಾಕ್ಷಿ, ಯಶೋದಾ ಮಗುವನ್ನು ಸುರಕ್ಷಿತವಾಗಿ ಮಕ್ಕಳ ಕಲ್ಯಾಣ ಘಟಕಕ್ಕೆ ಒಪ್ಪಿಸಿದ್ದಾರೆ.
ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಲಾಗುವುದು. ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಲಾಗುವುದು. ಮಕ್ಕಳ ಕಲ್ಯಾಣ ಸಮಿತಿಯ ಮಂದೆ ಮಗುವನ್ನು ಹಾಜರುಪಡಿಸಿ, ಇಲಾಖೆಯ ನಿಯಮಗಳಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಮಹೇಂದ್ರ ತಿಳಿಸಿದ್ದಾರೆ.