ETV Bharat / state

ಶಿಡ್ಲಘಟ್ಟ, ಹೊಸಕೋಟೆಯಲ್ಲಿ ಜೆ.ಪಿ ನಡ್ಡಾ ಮೆಗಾ ರೋಡ್ ಶೋ.. ಅಭ್ಯರ್ಥಿಗಳ ಪರ ಮತಬೇಟೆ

author img

By

Published : Apr 25, 2023, 1:08 PM IST

ರಾಜ್ಯ ಚುನಾವಣಾ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಎಂಟ್ರಿಕೊಟ್ಟಿದ್ದಾರೆ. ಸೋಮವಾರ ಶಿಡ್ಲಘಟ್ಟ ಹಾಗೂ ಹೊಸಕೋಟೆಯಲ್ಲಿ ಮೆಗಾ ರೋಡ್ ಶೋ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ.

JP Nadda Road Show
ಶಿಡ್ಲಘಟ್ಟ, ಹೊಸಕೋಟೆಯಲ್ಲಿ ಜೆ.ಪಿ ನಡ್ಡಾ ಮೆಗಾ ರೋಡ್ ಶೋ..

ಶಿಡ್ಲಘಟ್ಟ, ಹೊಸಕೋಟೆಯಲ್ಲಿ ಜೆ.ಪಿ ನಡ್ಡಾ ಮೆಗಾ ರೋಡ್ ಶೋ..

ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ನರೇಂದ್ರ ಮೋದಿ ಇರುವವರೆಗೆ ಕರ್ನಾಟಕದ ಅಭಿವೃದ್ಧಿ ಖಂಡಿತ ಸಾಧ್ಯ. ಹೀಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವನ್ನು ಡಬಲ್ ವೇಗದಿಂದ ಅಧಿಕಾರಕ್ಕೆ ತರಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕರೆ ನೀಡಿದರು. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ರೋಡ್‍ ಶೋ ನಡೆಸಿ ಮಾತನಾಡಿದ ಅವರು ಈ ಚುನಾವಣೆ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ನಿರ್ಣಯಿಸುವ ಚುನಾವಣೆ ಆಗಿದೆ ಎಂದರು.

ನಿನ್ನೆ(ಸೋಮವಾರ) ಸಂಜೆ 4 ಗಂಟೆಗೆ ಶಿಡ್ಲಘಟ್ಟದ ನೆಹರು ಕ್ರೀಡಾಂಗಣಕ್ಕೆ ಹೆಲಿಕಾಪ್ಟಾರ್ ಮೂಲಕ ಆಗಮಿಸಿದ ನಡ್ಡಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಚಿಕ್ಕಬಳ್ಳಾಪುರದ ಶಾಸಕರು ಮತ್ತು ಸಚಿವರಾದ ಸುಧಾಕರ್, ಸೀಕಲ್ ರಾಮಚಂದ್ರ ಗೌಡ ಮತ್ತು ಮಾಜಿ ಶಾಸಕರಾದ ಎಂ ರಾಜಣ್ಣ ಅವರು ಶಾಲು ಹೊದಿಸಿ ಹೂ ಗುಚ್ಛ ನೀಡಿ ಸ್ವಾಗತಿಸಿದರು. ನಗರದ ಬಿಜೆಪಿ ಕಚೇರಿ ಸೇವಾಸೌಧ ಬಳಿ ಬ್ಯಾಂಡ್, ತಮಟೆ, ಡೊಳ್ಳು, ವೀರಗಾಸೆ, ಪಟಾಕಿ ಸಿಡಿಸಿ ಮತ್ತು 1008 ಕಳಸಗಳನ್ನು ಹೊತ್ತ ಮಹಿಳೆಯರಿಂದ ನಡ್ಡಾ ಅವರನ್ನು ಕಚೇರಿಗೆ ಸಾಂಸ್ಕೃತಿಕವಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ನಡ್ಡಾ ಅವರು "ಸೀಕಲ್ ರಾಮಚಂದ್ರ ಗೌಡ ಮತ್ತು ಸುಧಾಕರ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಚುನಾವಣೆ, ನಂದಲ್ಲ, ರಾಮಚಂದ್ರ ಗೌಡರದ್ದು ಅಲ್ಲ. ನಿಮ್ಮದು, ನಿಮ್ಮ ವಿಕಾಸಕ್ಕೆ ನೀವೇ ಆರಿಸಿಕೊಳ್ಳುವಂತಹ, ಉಪಯೋಗ ಪಡೆದುಕೊಳ್ಳುವಂತಹ ಚುನಾವಣೆ ಇದು. ವಿಕಾಸದಲ್ಲಿ ತುಂಬಾ ದೂರ ನಾವು ಪ್ರಯಾಣಿಸಬೇಕಿದೆ. ನಮ್ಮ ಡಬ್ಬಲ್ ಎಂಜಿನ್ ಸರ್ಕಾರವನ್ನ ಡಬಲ್ ವೇಗದಿಂದ ಅಧಿಕಾರಕ್ಕೆ ತರಲು ಮತ ಚಲಾಯಿಸೋಣ. ನಮ್ಮ ಗುರಿ ಸ್ಪಷ್ಟ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ನಿಮ್ಮ ಅಭಿವೃದ್ಧಿಗೆ ಕೆಲಸ ಮಾಡಿದೆ. ಭಾರತೀಯ ಜನತಾ ಪಾರ್ಟಿಯ ಬೊಮ್ಮಾಯಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರೋಣ. ದೇಶ ವಿರೋಧಿ ಪಿಎಫ್ಐಯನ್ನು ಹೊಡೆದೋಡಿಸಿದ್ದು ನಮ್ಮ ಮೋದಿ ಸರ್ಕಾರ. ಭಯೋತ್ಪಾದಕರನ್ನು ಹೊಡೆದೋಡಿಸಲು ಕಮಲದ ಚಿನ್ಹೆಯನ್ನು ಮತ್ತೆ ಮೇ 10ಕ್ಕೆ ಒತ್ತಬೇಕು. ಸಬ್ ಕಾ ಸಾಥ್​, ಸಬ್ ಕಾ ವಿಕಾಸ್" ಎಂದು ಅವರು ಪುನರುಚ್ಚರಿಸಿದರು.

ಹೊಸಕೋಟೆಯಲ್ಲಿ ನಡ್ಡಾ ರೋಡ್​ ಶೋ: ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆಯಲ್ಲಿ‌ ಬಿಜೆಪಿ ಅಭ್ಯರ್ಥಿಗಳ ಪರ ನಡ್ಡಾ ರೋಡ್ ಶೋ ನಡೆಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ನಡ್ಡಾ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಪರ ಅಬ್ಬರದ ಪ್ರಚಾರ ನಡೆಸಿದರು. ಬಳಿಕ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ‌ ನಾಗರಾಜ್ ಪರ ರೋಡ್ ಶೋ‌ ನಡೆಸಿದರು.

ಸಂಜೆ 6 ಗಂಟೆ ಸುಮಾರಿಗೆ ಆಗಮಿಸಿದ ಜೆಪಿ‌ ನಡ್ಡಾ ಹೊಸಕೋಟೆ ಕೆಇಬಿ ಸರ್ಕಲ್​ನಿಂದ ಹೂ‌ ಮಂಡಿ ಸರ್ಕಲ್​ವರೆಗೆ ಎಂಟಿಬಿ ನಾಗರಾಜ್ ಪರ ಮತಯಾಚನೆ ಮಾಡಿದರು. ಅಲ್ಲಿ ‌ಕಾರ್ಯಕರ್ತರನ್ನ ಉದ್ದೇಶಿಸಿ‌ ಮಾತನಾಡಿದ ನಡ್ಡಾ ಕೇಂದ್ರ ಹಾಗೂ ರಾಜ್ಯದ ಡಬ್ಬಲ್‌ ಎಂಜಿನ್ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ದಿ ಮಾಡಿದೆ. ಮುಂದೆ ರಾಜ್ಯದಲ್ಲಿ ಮತ್ತೊಮ್ಮ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮತ್ತೆ ಡಬ್ಬಲ್ ಎಂಜಿನ್ ಸರ್ಕಾರ ಅಭಿವೃದ್ಧಿ ಕಾರ್ಯ‌ ಮುಂದುವರೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸೋಮವಾರ ಅಮಿತ್ ಶಾ, ಜೆ ಪಿ‌ ನಡ್ಡಾ ರಾಜ್ಯಕ್ಕೆ ಎಂಟ್ರಿ: ವಿವಿಧೆಡೆ ಪ್ರತ್ಯೇಕ ರೋಡ್ ಶೋ ನಡೆಸಿ ಮತಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.