ETV Bharat / state

'ಮೋದಿ ಅವರ ದಿಟ್ಟ ನಾಯಕತ್ವದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆ ಮಾಡುತ್ತಿದೆ'

author img

By

Published : Oct 7, 2021, 11:00 PM IST

ಮೋದಿ ಅವರ ದಿಟ್ಟ ನಾಯಕತ್ವದಿಂದ ಕೊರೊನಾ ಮಹಾಮಾರಿ ತಡೆಗಟ್ಟಲು ಸಾಧ್ಯವಾಗಿದೆ. ಭೀಕರ ಸಾಂಕ್ರಾಮಿಕ ರೋಗ ತಡೆಗೆ ಪ್ರಧಾನಿ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

sudhakar
ಆರೋಗ್ಯ ಸಚಿವ ಡಾ. ಸುಧಾಕರ್

ಚಾಮರಾಜನಗರ: ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆ ಮಾಡುತ್ತಿದೆ. 7 ವರ್ಷದಲ್ಲಿ ದೇಶಾದ್ಯಂತ 152 ಮೆಡಿಕಲ್ ಕಾಲೇಜು ತಲೆ ಎತ್ತಿವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಸಿಮ್ಸ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಿದ್ದರು. ಈ ವೇಳೆ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, 30 ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದು ಹೊರಹೊಮ್ಮುತ್ತಿದ್ದಾರೆ. ಶೇ.50 ರಷ್ಟು ವೈದ್ಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.

ಮೋದಿ ಅವರ ದಿಟ್ಟ ನಾಯಕತ್ವದಿಂದ ಕೊರೊನಾ ಮಹಾಮಾರಿ ತಡೆಗಟ್ಟಲು ಸಾಧ್ಯವಾಗಿದೆ. ಭೀಕರ ಸಾಂಕ್ರಾಮಿಕ ರೋಗ ತಡೆಗೆ ಪ್ರಧಾನಿಗಳು ಅವಿರತವಾಗಿ ಶ್ರಮಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅಭೂತಪೂರ್ವದಂತೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತಿದೆ. ವಿವಿಧತೆಯಲ್ಲಿ ಏಕತೆ ಇರುವ ಭಾರತದಲ್ಲಿ ಕೊರೊನಾ ಹೋರಾಟವನ್ನು ಒಗ್ಗಟ್ಟಾಗಿ ಎದುರಿಸಿ ಮಹಾಮಾರಿ ವಿರಮಿಸುವಂತೆ ಮಾಡಿದ್ದೇವೆ ಎಂದು ತಿಳಿಸಿದರು.

ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಮತ್ತು ಹಿಂದೆ ಬಿಎಸ್​ವೈ ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿ‌ನ‌ ಒತ್ತು ಕೊಟ್ಟಿದ್ದಾರೆ. ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಶಸ್ತಿಗೆ ರಾಜ್ಯ ಆಯ್ಕೆಯಾಗಿದೆ. ಇದಕ್ಕೆ ಕಾರಣ ಫ್ರಂಟ್ ಲೈನ್ ವಾರಿಯರ್ಸ್, ಮೆಡಿಕಲ್ ವಿದ್ಯಾರ್ಥಿಗಳು. ಅವರ ಕಾರ್ಯ ಸ್ಮರಣೀಯ ಎಂದರು.

ಲಸಿಕೆ ನೀಡಲಾಗುತ್ತಿಲ್ಲ. ವ್ಯಾಕ್ಸಿನ್ ಇಲ್ಲ. ಹೀಗೆ ಕೊಟ್ಟರೆ ಔಷಧ ವಿತರಣೆಗೆ 2024 ವರೆಗೆ ಸಮಯ ಬೇಕಾಗಲಿದೆ ಎಂದು ಕೆಲವರು ಟೀಕಿಸುತ್ತಿದ್ದರು. ಆದರೆ, ಇಂದು ಕೇಂದ್ರ ಸರ್ಕಾರದ ಸಹಕಾರದಿಂದಾಗಿ ಈಗಾಗಲೇ ಶೇ 85ರಷ್ಟು ಜನರಿಗೆ ಮೊದಲನೆ ಡೋಸ್ ನೀಡಲಾಗಿದ್ದು, 2ನೇ ಡೋಸ್ ಅನ್ನು ಶೇ.38 ರಷ್ಟು ಜನರಿಗೆ ವಿತರಿಸಲಾಗಿದೆ. ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಎಲ್ಲರೂ ವ್ಯಾಕ್ಸಿನ್ ಪಡೆಯಬೇಕೆಂಬ ಗುರಿ ಹೊಂದಲಾಗಿದೆ ಎಂದು ವಿಪಕ್ಷದವರ ಹೆಸರು ಹೇಳದೆ ಟಾಂಗ್ ಕೊಟ್ಟರು.‌

ಚಾಮರಾಜನಗರಕ್ಕೆ ಕಳಸ ಪ್ರಾಯ: ಚಾಮರಾಜನಗರ ಎಂದರೆ ಕಾಡು, ದೇಗುಲ, ವನ್ಯಜೀವಿ ಕಣ್ಣಮುಂದೆ ಬರಲಿವೆ. ಆದರೆ, ‌ಇನ್ಮುಂದೆ ಈ ಆಸ್ಪತ್ರೆಯು ನೆನಪಿಗೆ ಬರಲಿದ್ದು, ಚಾಮರಾಜನಗರಕ್ಕೆ ಈ ಆರೋಗ್ಯ ಕೇಂದ್ರ ಕಳಶಪ್ರಾಯವಾಗಲಿದೆ ಎಂದರು.

ಯಡಿಯೂರಪ್ಪ ಸೇರಿದಂತೆ ಸಾಕಷ್ಟು ಜನಪ್ರತಿನಿಧಿಗಳ‌ ಸಂಯಮ‌ ಹೋರಾಟದ ಫಲವಾಗಿ ಈ ಆಸ್ಪತ್ರೆ ತಲೆ ಎತ್ತಿದೆ.‌ ಬಲಹೀನ‌‌ ಜನರಿಗೆ ಉತ್ಕೃಷ್ಟ ಆರೋಗ್ಯ ಸೇವೆ ನೀಡುವುದಕ್ಕೆ ಈ ಸಂಸ್ಥೆ ನಾಂದಿ ಹಾಡಲಿದೆ ಎಂದು ತಿಳಿಸಿದರು.

ತಮ್ಮ ಭಾಷಣದಲ್ಲಿ ಚಾಮರಾಜ ಒಡೆಯರ್, ಮಂಟೆಲಿಂಗಸ್ವಾಮಿ, ಅಣ್ಣಾವ್ರು, ಜಿ.ಪಿ ರಾಜರತ್ನಂ ಅವರನ್ನು ನೆನೆದು ಕೆಲವೇ ದಿನಗಳಲ್ಲಿ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು ಎಂದು ಹೇಳಿದರು.

ಓದಿ: Video: ರಾಷ್ಟ್ರಪತಿಗೆ ಜೈಕಾರ - ಕಾರು ನಿಲ್ಲಿಸಿ ಹಾಡಿ ಮಕ್ಕಳತ್ತ ಕೈ ಬೀಸಿ, ನಗೆ ಚೆಲ್ಲಿದ ರಾಮನಾಥ್ ಕೋವಿಂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.