ETV Bharat / state

ಚಾಮರಾಜನಗರ ಆಸ್ಪತ್ರೆ ಉದ್ಘಾಟನೆಯಲ್ಲಿ ಅಂದು ಅಪ್ಪ ಇಂದು ಮಗ.. ಸಿದ್ದು - ಬೊಮ್ಮಾಯಿ ಭೇಟಿ ದಿನವೂ ಒಂದೇ

author img

By

Published : Oct 6, 2021, 5:45 PM IST

Updated : Oct 6, 2021, 6:31 PM IST

1988ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಚಾಮರಾಜನಗರಕ್ಕೆ ಭೇಟಿ ಕೊಟ್ಟು ತಾಲೂಕು ಕಚೇರಿ ಸಂಕೀರ್ಣ ಮತ್ತು‌ ತಾಲೂಕು ಆಸ್ಪತ್ರೆ ಉದ್ಘಾಟಿಸಿದ್ದರು. ಅದರಂತೆ, ಈಗ ಎಸ್.ಆರ್. ಬೊಮ್ಮಾಯಿಯ ಪುತ್ರ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

opening ceremony of Chamarajanagar Hospital by cm basavaraja bommai
ಚಾಮರಾಜನಗರ ಆಸ್ಪತ್ರೆ ಉದ್ಘಾಟನೆಯಲ್ಲಿ ಅಂದು ಅಪ್ಪ ಇಂದು ಮಗ

ಚಾಮರಾಜನಗರ: ಅಂದು ಮೌಢ್ಯ ಪ್ರಾರಂಭವಾಗುವ ಹೊತ್ತಿನಲ್ಲಿ ತಂದೆ ಭೇಟಿ ಕೊಟ್ಟಿದ್ದರೆ, ಮೌಢ್ಯ ಮಾಯವಾಗುತ್ತಿರುವ ಈ ಕಾಲದಲ್ಲಿ ಮಗ ಸಿಎಂ ಆಗಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾಕಷ್ಟು ಬಾರಿ ಬಂದು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸಿಎಂ ಬೊಮ್ಮಾಯಿ ಅವರ ‌ಈ ಭೇಟಿ ನಾಂದಿ ಹಾಡಲಿದೆ.

ಹೌದು, 1988ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಚಾಮರಾಜನಗರಕ್ಕೆ ಭೇಟಿ ಕೊಟ್ಟು ತಾಲೂಕು ಕಚೇರಿ ಸಂಕೀರ್ಣ ಮತ್ತು‌ ತಾಲೂಕು ಆಸ್ಪತ್ರೆ ಉದ್ಘಾಟಿಸಿದ್ದರು. ಅದರಂತೆ, ಈಗ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಅಕ್ಟೋಬರ್ 7ರ ವಿಶೇಷ:

ಮತ್ತೊಂದು ವಿಶೇಷ ಎಂಬಂತೆ, ಅಕ್ಟೋಬರ್ 7 ರಂದೇ ಸಿದ್ದರಾಮಯ್ಯ ಸಿಎಂ ಆದ ಬಳಿಕ ಗಡಿಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಈಗ ಬೊಮ್ಮಾಯಿಯೂ ಇದೇ ದಿನಾಂಕದಂದು ಚಾಮರಾಜನಗರಕ್ಕೆ ಭೇಟಿ ಕೊಡುತ್ತಿರುವುದು ವಿಶೇಷ. ಸಿದ್ದರಾಮಯ್ಯರ ರೀತಿ ಹತ್ತಾರು ಬಾರಿ ಬಂದು ನೂರಾರು ಕೋಟಿ ರೂ.‌ ಅನುದಾನ ಕೊಟ್ಟ ರೆಕಾರ್ಡ್ ಅನ್ನು ಸಿಎಂ ಬೊಮ್ಮಾಯಿ ಮುರಿಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಮೌಢ್ಯ ಆರಂಭವಾದದ್ದು ಹೀಗೆ:

ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಅಪವಾದ ಆರಂಭವಾಗಿದ್ದು ದೇವರಾಜ ಅರಸು ಅವರ ಕಾಲದಿಂದ. ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಅಧಿಕಾರ ಕಳೆದುಕೊಂಡಿರುವ ಕೆಲ ಉದಾಹರಣೆಗಳಾಗಿವೆ.‌

  • ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ವಿಶಿಷ್ಟ ಸಾಲಿನಲ್ಲಿ ನಿಲ್ಲುವ ದೇವರಾಜ ಅರಸು, ಐದು ವರ್ಷದ ಮೊದಲ ಅವಧಿ ಮುಗಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು. 1977ರ ಡಿಸೆಂಬರ್ 31 ರಂದು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಅರಸು 1980ರ ಜನವರಿ 7ರಂದು ಅಧಿಕಾರ ಕಳೆದುಕೊಂಡರು. ಇದಕ್ಕೂ ಮುನ್ನ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.
  • ಅರಸು ರಾಜೀನಾಮೆ ನಂತರ ಮುಖ್ಯಂಮತ್ರಿಯಾಗಿ ಆರ್. ಗುಂಡೂರಾವ್ ಪ್ರಮಾಣ ವಚನ ಸ್ವೀಕಾರ ಮಾಡಿದರು. 1980ರ ಜನವರಿ 12 ರಿಂದ 1983ರ ಜನವರಿ 6 ರವರೆಗೆ ಆಡಳಿತ ನಡೆಸಿದರಾದರೂ, ಮರು ಆಯ್ಕೆ ಆಗಲಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದ್ದನ್ನು ಇಲ್ಲಿಯೂ ಸ್ಮರಿಸಬಹುದಾಗಿದೆ.
  • ನಂತರ ರಾಮಕೃಷ್ಣ ಹೆಗಡೆ ಮೊದಲ ಕಾಂಗ್ರೆಸೇತರ ಮುಖ್ಯಂಮತ್ರಿಯಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರು. 1983ರ ಜನವರಿ 10 ರಿಂದ 1984ರ ಡಿಸೆಂಬರ್ 29, 1985ರ ಮಾರ್ಚ್ 8 ರಿಂದ 1986ರ ಫೆಬ್ರವರಿ 13 ಮತ್ತು 1986ರ ಫೆಬ್ರವರಿ 16 ರಿಂದ 1988ರ ಆಗಸ್ಟ್ 10ರವರೆಗೆ ಒಟ್ಟು ಮೂರು ಬಾರಿ ಮುಖ್ಯಮಂತ್ರಿಯಾದರೂ, ಒಮ್ಮೆಯೂ ಅವಧಿ ಮುಗಿಸಲಿಲ್ಲ. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಆರೋಪದಿಂದ ಅವರು ರಾಜೀನಾಮೆ ನೀಡಬೇಕಾಯಿತು. ರಾಜೀನಾಮೆಗೂ ಮುನ್ನ ಅವರೂ ಕೂಡ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು.
  • ರಾಮಕೃಷ್ಣ ಹೆಗಡೆ ರಾಜೀನಾಮೆ ನಂತರ ಮುಖ್ಯಮಂತ್ರಿಯಾದ ಎಸ್.ಆರ್. ಬೊಮ್ಮಾಯಿ 1988ರ ಆಗಸ್ಟ್ 13 ರಿಂದ 1989ರ ಏಪ್ರಿಲ್ 21ರವರೆಗೆ ಮಾತ್ರ ಆಡಳಿತ ನಡೆಸಿದರು. ರಾಜ್ಯದಲ್ಲಿ ಬೊಮ್ಮಾಯಿ ರಾಜೀನಾಮೆ ನಂತರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಯಿತು. ಬೊಮ್ಮಾಯಿ ಕೂಡ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದ್ದು, 1989ರ ನವೆಂಬರ್ 30 ರಂದು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
  • ಆದರೆ, 1990ರ ಅಕ್ಟೋಬರ್ 10 ರಂದು ಅವರು ಅಧಿಕಾರ ಕಳೆದುಕೊಂಡರು. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ವೀರೇಂದ್ರ ಪಾಟೀಲ್ ಕೂಡ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಇದು ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೌಢ್ಯ ಬೆಳೆಯಲು ಪೂರಕವಾಯಿತು.

ಇದನ್ನೂ ಓದಿ: 'ಆಸ್ಪತ್ರೆ ಸಿದ್ದರಾಮಯ್ಯ ಕೊಡುಗೆ, ರಾಷ್ಟ್ರಪ ತಿ ಆಗಮನದಿಂದ ಸಿಎಂ ಬೊಮ್ಮಾಯಿ ಬರುತ್ತಿದ್ದಾರಷ್ಟೇ'

Last Updated : Oct 6, 2021, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.