ಚಾಮರಾಜನಗರ: ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಮಂಗಳೂರಿನ ಓಂ ಶ್ರೀ ಮಠದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ರಾಮೇಶ್ವರ ತೀರ್ಥಯಾತ್ರೆಗೆ ತೆರಳುವಾಗ ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಶ್ರೀಗಳು, ಇಡೀ ವಿಶ್ವದಲ್ಲಿ ಹಿಂದೂ ಧರ್ಮ ಉಳಿದಿರುವುದು ಭಾರತದಲ್ಲಿ ಮಾತ್ರ. ನಮ್ಮಲ್ಲಿ ಮಾತ್ರ ಹಿಂದೂ ಸಂಸ್ಕೃತಿ ಉಳಿಸಲು ಸಾಧ್ಯ. ಹಿಂದುತ್ವ, ರಾಷ್ಟ್ರೀಯತೆ ಆಧಾರದಲ್ಲಿರುವ ಬಿಜೆಪಿ ಹಿಂದೂಗಳಿಗೆ ನೋವುಂಟಾಗುವ ವಿಚಾರಕ್ಕೆ ಕೈ ಹಾಕಬಾರದು. ಒಂದು ವೇಳೆ ನೋವುಂಟು ಮಾಡಿದಲ್ಲಿ ಚುನಾವಣೆಯಲ್ಲಿ ಅವರು ಒಂದೂ ಸ್ಥಾನವನ್ನೂ ಗೆಲ್ಲಲ್ಲ ಎಂದು ಅಭಿಪ್ರಾಯಪಟ್ಟರು.
ಆರ್ಟಿಸಿ ಹಿಡಿದು ದೇವಾಲಯ ಕಟ್ಟಲು ಸಾಧ್ಯವಿಲ್ಲ. ಚೈತನ್ಯ, ಶಕ್ತಿ, ಪ್ರಾಣ ಎಲ್ಲಿದೆಯೋ ಅಲ್ಲಿ ದೇವಾಸ್ಥಾನ ನಿರ್ಮಾಣವಾಗಲಿದೆ. ಹಿಂದೂ ಧರ್ಮದ ಹೆಸರಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ದೇವಾಲಯಗಳ ರಕ್ಷಣೆಗೆ ಮುಂದಾಗಬೇಕೇ ಹೊರತು, ತೆರವುಗೊಳಿಸುವುದಲ್ಲ. ನೆಲದ ಸಂಸ್ಕೃತಿ, ಮಹತ್ವ ಅರಿಯದ ಐಎಎಸ್ ಅಧಿಕಾರಿಗಳ ಮಾತನ್ನು ಕೇಳುವುದನ್ನು ಸರ್ಕಾರ ಮೊದಲು ಬಿಡಬೇಕು ಎಂದು ಸಲಹೆ ನೀಡಿದರು.
ಕೊಡಚಾದ್ರಿ ದೇವಾಲಯ ಅಭಿವೃದ್ಧಿಗೆ ಒತ್ತಾಯ:
ಜನರ ಕಲ್ಯಾಣಕ್ಕೆ ಕಾನೂನು ಮಾಡಬೇಕೇ ಹೊರತು, ತೊಂದರೆ ಕೊಡುವುದಕ್ಕಲ್ಲ ಎಂಬುದನ್ನು ಸರ್ಕಾರ ಅರಿಯಲಿ. ಕೊಡಚಾದ್ರಿಯಲ್ಲಿರುವ ಶ್ರೀಚಕ್ರದ ದೇವಾಲಯ ಅಭಿವೃದ್ಧಿ ಪಡಿಸಲು ಸರ್ಕಾರ ಸಮಿತಿ ರಚಿಸಬೇಕು. ಸಂಜೆ ನಂತರವೂ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಧಾರ್ಮಿಕ ವಿಧಿ-ವಿಧಾನಕ್ಕೆ ಸರ್ಕಾರ ಅಡ್ಡಿ ಮಾಡಬಾರದು ಎಂದು ಇದೇ ವೇಳೆ ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದರು.