ETV Bharat / state

ದೇವಾಲಯದ ಹುಂಡಿ ಎಣಿಕೆ: ಇಷ್ಟಾರ್ಥ ಸಿದ್ಧಿಗಾಗಿ ನಾರಾಯಣನಿಗೆ ವಿಚಿತ್ರ ಪತ್ರಗಳು!

author img

By

Published : Jan 18, 2023, 10:03 AM IST

Updated : Jan 18, 2023, 11:22 AM IST

ಕೆಲವು ಭಕ್ತರು ತಮ್ಮ ಬೇಡಿಕೆ ಈಡೇರಲೆಂದು ಹಣದ ರೂಪದಲ್ಲಿ ಅಥವಾ ಲೋಹದ ರೂಪದಲ್ಲಿ ಹುಂಡಿಗೆ ಕಾಣಿಕೆ ಅರ್ಪಿಸಿದರೆ, ಇನ್ನೂ ಕೆಲವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.

Hundi count of Lakshmi Narayan Temple
ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿ ಎಣಿಕೆ

ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿ ಎಣಿಕೆ

ಚಾಮರಾಜನಗರ: ದೇವರಿಗೆ ನಾನಾ ಬಗೆಯ ಕೋರಿಕೆ, ಪ್ರಾರ್ಥನೆ, ಬೇಡಿಕೆ ಪತ್ರಗಳನ್ನು ಸಲ್ಲಿಸುವುದು ಸಾಮಾನ್ಯ.‌ ಆದರೆ ಇಲ್ಲೋರ್ವ, ಒಂದು ಕುಟುಂಬ ಸರ್ವನಾಶ ಆಗಲೆಂಬ ವಿಚಿತ್ರ ಮತ್ತು ಆಘಾತಕಾರಿ ಬೇಡಿಕೆಯನ್ನು ದೇವರ ಮುಂದಿಟ್ಟಿದ್ದಾನೆ!. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆಯಿತು. ಈ ವೇಳೆ ಭಕ್ತರ ಕುತೂಹಲಕಾರಿ ಕೋರಿಕೆ ಪತ್ರಗಳು ಸಿಕ್ಕಿವೆ.

ಈ ಪೈಕಿ, ಬಳ್ಳಾರಿ ಜಿಲ್ಲೆ ಎಂದು ನಮೂದಿಸಿರುವ ಭಕ್ತನೋರ್ವ, 'ಹನುಮಾರ್ ರಾಮ ನಾಯಕ ಎಂಬಾತ ಬಾಯಲ್ಲಿ ರಕ್ತ ಬಿದ್ದು ಸಾಯಬೇಕು. ಇದನ್ನು ನೋಡಿ ನೀಲಾಬಾಯಿ ಕೊರಗಿ ಕೊರಗಿ ಸಾಯಲಿ. ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿಬಾಯಿ, ಇವರೆಲ್ಲರೂ ಕೂಡಾ ಅವರನ್ನು ನೋಡಿ ನರಳಿ ಸಾಯಬೇಕು. ಅವರುಗಳು ನಮ್ಮ ಮನೆಯ ಹತ್ತಿರವೇ ಬಾರದ ಹಾಗೆ ಮಾಡಬೇಕು. ಇವರೆಲ್ಲರೂ ಒಂದು ವರ್ಷದೊಳಗೆ ಸಾಯಬೇಕು' ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾನೆ. ಬಳ್ಳಾರಿ ಭಕ್ತನ ಕಾಗದ ಓದಿದ ಹುಂಡಿ ಎಣಿಕೆ ಸಿಬ್ಬಂದಿ ಅರೆಕ್ಷಣ ದಂಗಾಗಿದ್ದಾರೆ. ಈ‌ ರೀತಿಯೆಲ್ಲ ಬೇಡಿಕೆ ಇರುತ್ತವೆಯೇ?, ಸಾವನ್ನು ಬಯಸುವ ಮಟ್ಟಿಗೆ ಆತ ನೊಂದಿರುವವನೇ? ಎಂದು ಹೌಹಾರಿದ್ದಾರೆ.

Lakshmi Narayan Temple
ಲಕ್ಷ್ಮೀ ನಾರಾಯಣ ದೇವಸ್ಥಾನ

ಅಂತರ್‌ಧರ್ಮೀಯ ಪ್ರೀತಿ ಪತ್ರ: ದೇವರಿಗೆ ಒಂದು ಅಂತರ್‌ಧರ್ಮೀಯ ಪ್ರೀತಿ ಪತ್ರವೂ ಸಿಕ್ಕಿದೆ. ಅದರಲ್ಲಿ, ಯುವತಿಯೊಬ್ಬಳು ಶಾಹಿದ್ ಖಾನ್ ವರ್ಷಕ್ಕೆ ಒಂದು ಬಾರಿಯಾದರೂ ದಿಲ್ಲಿಯಿಂದ ಬರಬೇಕು. ನಾನು ಹಿಂದೂ ಅವನು ಬೇರೆ ಧರ್ಮದವನು. ಆದರೆ ನಾನು ತಪ್ಪು ಮಾಡುತ್ತಿಲ್ಲ. ನನಗೆ ಅವನಿಷ್ಟ. ಅವನಿಗೆ ನಾನು ಇಷ್ಟ. ನನ್ನ ಜೀವನವೇ ಅವನು. ಈ ಬೇಡಿಕೆ ಈಡೇರಿದರೆ ಪ್ರತಿ ತಿಂಗಳಿಗೊಮ್ಮೆ ನಿನ್ನ ಸನ್ನಿಧಿಗೆ ಬರುವೆ ಎಂದು ಕಾಗದದಲ್ಲಿ ಬರೆದು ಹರಕೆ ಕಟ್ಟಿಕೊಂಡಿದ್ದಾಳೆ.

ಮತ್ತೊಂದು ಕಾಗದದಲ್ಲಿ ಭಕ್ತನೋರ್ವ, 'ನರಸಿಂಹ ಸ್ವಾಮಿ ಈ ನಂಬರುಗಳಿಗೆ ಮೊದಲನೇ ಬಹುಮಾನ ಬರುವಂತೆ ಮಾಡು. ನಿನ್ನ ಹುಂಡಿಗೆ 101 ರೂ. ಕಾಣಿಕೆ ಹಾಕುವುದಾಗಿ ಲಾಟರಿ ಟಿಕೆಟ್ ನಂಬರುಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾನೆ. ಇನ್ನು, ದೇಗುಲದ ಹುಂಡಿ ಎಣಿಕೆಯ ವೇಳೆ 1,87,565 ಹಣ ಸಂಗ್ರಹವಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಸಿಕ್ಕಿದ ಭಕ್ತರ ಕೋರಿಕೆ ಪತ್ರಗಳು: ದೇವಾಲಯಗಳ ಹುಂಡಿ ಎಣಿಕೆ ಸಮಯದಲ್ಲಿ ಈ ರೀತಿಯ ವಿಶೇಷ ಬೇಡಿಕೆಗಳ ಪತ್ರಗಳು ಸಿಗುವುದು ಸಾಮಾನ್ಯ. ಕೆಲವು ದೇವಾಲಯಗಳ ಹುಂಡಿಗಳಲ್ಲಿ ವಿದೇಶಿ ಕರೆನ್ಸಿಗಳೂ ಸಿಕ್ಕಿದ್ದುಂಟು. ಕೊಳ್ಳೇಗಾಲದ ಶಿವನಸಮುದ್ರ ಸಮೂಹ ದೇವಾಲಯಗಳಲ್ಲಿ ಹುಂಡಿಯಲ್ಲಿ, 'ನನ್ನಿಂದ ಹಣ ಪಡೆದವರಿಂದ ಹಣ ಕೊಡಿಸು, ತಿಂಗಳಲ್ಲಿ ಅವರು ನನಗೆ ಹಣ ಹಿಂತಿರುಗಿಸುವಂತೆ ಬುದ್ಧಿ ಕೊಡು. ನನ್ನ ಹಣ ನನಗೆ ಕೊಡದಿದ್ದರೆ ಅವರಿಗೆ ಕಷ್ಟ ಕೊಡು' ಎಂದು ಬರೆದಿದ್ದ ಪತ್ರ ದೊರೆತಿತ್ತು. ಅಷ್ಟೇ ಅಲ್ಲ, ಇನ್ನೋರ್ವ ಭಕ್ತರು, 'ತನ್ನ ಗಂಡ ತನ್ನೊಟ್ಟಿಗೆ ಇರುವಂತೆ ಮಾಡು, ಆ ಮಹಿಳೆ ಜೊತೆ ಸಂಬಂಧ ಇಲ್ಲದಂತೆ ಮಾಡು, ನಾನು ನನ್ನ ಗಂಡ, ಮಕ್ಕಳು ಚೆನ್ನಾಗಿರಬೇಕು. ಇನ್ನೊಬ್ಬರು, ತನಗೆ ಇನ್ನೂ 20 ವರ್ಷ ಹೆಚ್ಚಿನ ಆಯಸ್ಸು ಕೊಡು, ಅಂಗನವಾಡಿ ಕೆಲಸ ಖಾಯಂ ಮಾಡು ಎಂದು ಕೇಳಿಕೊಂಡಿರುವ ಪತ್ರಗಳು ಗಮನ ಸೆಳೆದಿದ್ದವು. ಕನ್ನಡದಲ್ಲಿ ಬರೆದ ಪತ್ರಗಳು ಮಾತ್ರವಲ್ಲದೇ ಇಂಗ್ಲಿಷ್​ನಲ್ಲಿಯೂ ಪತ್ರ ಬರೆದು ಭಕ್ತರು ಬೇಡಿಕೆ ಸಲ್ಲಿಸಿದ್ದರು.

ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ: 85 ಲಕ್ಷ ರೂ ಸಂಗ್ರಹ

Last Updated :Jan 18, 2023, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.