ಚಾಮರಾಜನಗರ: 2015ರಲ್ಲಿ ಅಪ್ರಾಪ್ತೆ ಜೊತೆಗೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿ ಗರ್ಭವತಿ ಮಾಡಿದ್ದ ವಿವಾಹಿತನಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿದ್ದಾರೆ.
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಚಂದ್ರ(29) ಶಿಕ್ಷೆಗೊಳಗಾದ ಅಪರಾಧಿ. ಚಂದ್ರನಿಗೆ ಮದುವೆಯಾಗಿ ಮೂರು ಮಕ್ಕಳಿದ್ದರೂ ಅಪ್ರಾಪ್ತೆಯೊಬ್ಬಳನ್ನು ಪರಿಚಯಿಸಿಕೊಂಡು ಪುಸಲಾಯಿಸಿ ಬಲವಂತದ ಲೈಂಗಿಕ ಕ್ರಿಯೆ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷ ಸಜೆ ಹಾಗೂ ಇದರಲ್ಲಿ 1 ತಿಂಗಳು ಕಠಿಣ ಶಿಕ್ಷೆ, 25 ಸಾವಿರ ರೂ. ದಂಡವನ್ನು ನ್ಯಾಯಾಧೀಶರು ವಿಧಿಸಿದ್ದಾರೆ.
17 ವರ್ಷದ ಬಾಲಕಿ ಊರಿಗೆ ಚಂದ್ರ ಕೂಲಿ ಕೆಲಸಕ್ಕೆ ಹೋಗುವಾಗ, ಆಕೆಯನ್ನು ಪರಿಚಯಿಸಿಕೊಂಡಿದ್ದಾನೆ. ತನಗೆ ಮದುವೆಯಾಗಿರುವುದನ್ನು ಮುಚ್ಚಿಟ್ಟು ವಿವಿಧ ಆಮಿಷಗಳನ್ನು ತೋರಿಸಿ 2015ರ ನವೆಂಬರ್ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ. ಇಷ್ಟೇ ಅಲ್ಲದೇ ಆಕೆಯ ಕೊರಳಿಗೆ ಅರಿಶಿಣ ದಾರವೊಂದನ್ನು ಕಟ್ಟಿ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿ ಗರ್ಭಿಣಿಯನ್ನಾಗಿಸಿದ್ದರ ಬಗ್ಗೆ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಪ್ರಕರಣ ದಾಖಲಾಗಿ ಈತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಹಿಜಾಬ್ ವಿವಾದ : ಮಂಗಳೂರಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಿಗೆ ಕೊಲೆ ಬೆದರಿಕೆ
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೇಶ್ ವಾದ ಮಾಡಿದ್ದರು.