ETV Bharat / state

ಉದ್ಘಾಟನೆಗಾಗಿ ಕಾಯಬೇಡಿ: ಆಂಬ್ಯುಲೆನ್ಸ್ ಸಿಬ್ಬಂದಿಗೆ ಆರೋಗ್ಯ ಸಚಿವರ ತುರ್ತು ಸ್ಪಂದನೆ ಪಾಠ

author img

By ETV Bharat Karnataka Team

Published : Sep 23, 2023, 4:11 PM IST

ಸಿಎಸ್​ಆರ್ ಯೋಜನೆಯಡಿ ಇನ್​ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್​​ಗೆ ನೀಡಿದ ಆಂಬ್ಯುಲೆನ್ಸ್​ ಇದಾಗಿದೆ.

Health Minister Emergency Response Lesson for Ambulance Staff
ಆಂಬ್ಯುಲೆನ್ಸ್ ಸಿಬ್ಬಂದಿಗೆ ಆರೋಗ್ಯ ಸಚಿವರ ತುರ್ತು ಸ್ಪಂದನೆ ಪಾಠ

ಚಾಮರಾಜನಗರ: ಉದ್ಘಾಟನೆಗಾಗಿ ಕಾಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ವ್ಯಕ್ತಿಯೊಬ್ಬರ ನೆರವಿಗಾಗಿ ಆರೋಗ್ಯ ಸಚಿವರು ತುರ್ತಾಗಿ ಕಳುಹಿಸಿದ ಘಟನೆ ಶುಕ್ರವಾರ ಕೊಳ್ಳೇಗಾಲದಲ್ಲಿ ನಡೆದಿದೆ. ಪ್ರತಿಯೊಂದಕ್ಕೂ ಸಚಿವರಿಂದ ಉದ್ಘಾನೆಯಾಗಲಿ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ವಿಶೇಷವಾಗಿ ಆರೋಗ್ಯ ವಿಚಾರಗಳಲ್ಲಿ ಉದ್ಘಾಟನೆಗಿಂತ ಜನರ ಸಂಕಷ್ಟಗಳಿಗೆ ಮೊದಲು ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿ, ಉದ್ಘಾಟಿಸಲು ತರುತ್ತಿದ್ದ ನೂತನ ಆಂಬ್ಯುಲೆನ್ಸ್ ಅನ್ನು ಮಾರ್ಗಮಧ್ಯದಲ್ಲಿಯೇ ವಾಪಸ್ ಕಳುಹಿಸಿದ್ದಾರೆ.

ಆದಿವಾಸಿಗಳ ಅನುಕೂಲಕ್ಕಾಗಿ ಸಿಎಸ್​ಆರ್ ಯೋಜನೆಯಡಿ ಆಕ್ಸಾ ಬಿಸಿನೆಸ್ ಸರ್ವೀಸ್​ನವರು ಆದಿವಾಸಿಗಳ ಆರೋಗ್ಯ ಸಂಶೋಧನಾ ಕೇಂದ್ರಕ್ಕೆ ಆಂಬ್ಯುಲೆನ್ಸ್ ಒದಗಿಸಿದ್ದರು. ಚಾಮರಾಜನಗರ ಪ್ರವಾಸದಲ್ಲಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೂತನ ಆಂಬ್ಯುಲೆನ್ಸ್ ಅನ್ನು ಇನ್​ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್​​ಗೆ ಹಸ್ತಾಂತರಿಸಬೇಕಿತ್ತು. ಸಚಿವರಿಂದ ಚಾಲನೆ ಕೊಡಿಸಲು ಆಂಬ್ಯುಲೆನ್ಸ್ ಅನ್ನು ಕೊಳ್ಳೇಗಾಲಕ್ಕೆ ತರಲಾಗುತ್ತಿತ್ತು. ಇದೇ ವೇಳೆ ಗೊಂಬೆಗಲ್ಲು ಭಾಗದಲ್ಲಿ ಆನೆ ದಾಳಿಯಾಗಿ ವ್ಯಕ್ತಿಯೋರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಕರೆ ಬಂದಿದೆ. ಇದರಿಂದಾಗಿ ಆಂಬ್ಯುಲೆನ್ಸ್ ಅನ್ನು ಆನೆ ದಾಳಿಯಾದ ಪ್ರದೇಶಕ್ಕೆ ಕಳುಹಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ಉದ್ಘಾಟನೆಗಾಗಿ ಕೊಳ್ಳೇಗಾಲಕ್ಕೆ ಬರುತ್ತಿದ್ದ ಆಂಬ್ಯುಲೆನ್ಸ್ ಅನ್ನು ಮಾರ್ಗಮಧ್ಯದಲ್ಲಿಯೇ ವಾಪಸ್ ಕಳುಹಿಸಿ, ಸಚಿವರಿಂದ ಉದ್ಘಾಟನೆಗಾಗಿ ತರುವ ಅಗತ್ಯವಿಲ್ಲ. ನೇರವಾಗಿ ಆನೆ ದಾಳಿ ನಡೆದ ಪ್ರದೇಶಕ್ಕೆ ಆಂಬ್ಯುಲೆನ್ಸ್ ಸೇವೆ ಒದಗಿಸಿ ಆ ಮೂಲಕವೇ ಚಾಲನೆ ನೀಡಿ ಎಂದು ಹೇಳುವ ಮೂಲಕ ಸಿಬ್ಬಂದಿಗೆ ತುರ್ತು ಸ್ಪಂದನೆ ಪಾಠ ಮಾಡಿ ಮಾದರಿಯಾಗಿದ್ದಾರೆ.

ಇದನ್ನೂ ಓದಿ: 'ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್​' ಸೇವೆ: ಪ್ರಕಾಶ್‌ ರಾಜ್‌ಗೆ ಸಾಥ್ ಕೊಟ್ಟ ಯಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.