ETV Bharat / state

ಕಾಶಿ, ಮಥುರಾದಲ್ಲೂ ದೇಗುಲ ನಿರ್ಮಾಣ: ಕೆ ಎಸ್​ ಈಶ್ವರಪ್ಪ

author img

By

Published : Mar 2, 2023, 8:34 PM IST

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Former Minister K S Eshwarappa
ಮಾಜಿ ಸಚಿಚ ಕೆ ಎಸ್​ ಈಶ್ವರಪ್ಪ

ಮಾಜಿ ಸಚಿಚ ಕೆ ಎಸ್​ ಈಶ್ವರಪ್ಪ

ಚಾಮರಾಜನಗರ: 2024ಕ್ಕೆ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಕಾಶಿ, ಮಥುರಾದಲ್ಲಿ ಸಂಪೂರ್ಣ ಮಂದಿರ ಕಟ್ಟುತ್ತೇವೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ಗುಂಡ್ಲುಪೇಟೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಮಾತನಾಡಿ, 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಆಯ್ಕೆ ಆಗಲಿದ್ದಾರೆ, ಆಗ ಕಾಶಿ, ಮಥುರಾ ಮತ್ತಷ್ಟು ಅಭಿವೃದ್ಧಿ ಕಾಣಲಿವೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ, ಉದ್ಘಾಟನೆಯಾದ ಬಳಿಕ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೋಗಿ ಬರಲಿ, ಅವರ ಪಾಪವಾದರೂ ಕಡಿಮೆಯಾಗಲಿದೆ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.

ಆಣೆ - ಪ್ರಮಾಣ ಸವಾಲು: ತಮ್ಮ ಪದವಿಗೆ ಆಕಾಂಕ್ಷಿ ಎಂದು ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿದರು. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಪರಮೇಶ್ವರ್ ಶಿಷ್ಯರು, ಅಭಿಮಾನಿಗಳು ಬಂದು ಸಿದ್ದರಾಮಯ್ಯರನ್ನು ಸೋಲಿಸಿದರು. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ..! ಅವರು ಹೇಳಿದ ಹಾಗೆ ಕೇಳುತ್ತೇನೆ ಎಂದು ಆಣೆ-ಪ್ರಮಾಣದ ಸವಾಲೆಸೆದರು.

ದಲಿತರ ಶಾಪದಿಂದಲೇ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು, ಸಿದ್ದರಾಮಯ್ಯಗೆ ಇನ್ನೂ ಕ್ಷೇತ್ರವೇ ಗೊತ್ತಾಗಿಲ್ಲ. ಅವರು ಕೋಲಾರಕ್ಕೆ ಹೋದರೆ ಬ್ರಹ್ಮ ಬಂದರೂ ಗೆಲ್ಲುವುದಿಲ್ಲ. ಕೋಲಾರದಲ್ಲಿ ಎಲ್ಲ ಸಮುದಾಯದವರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಕಾಂಗ್ರೆಸ್​ನವರು ಜಾತಿವಾದಿಗಳು, ನಾವು ರಾಷ್ಟ್ರೀಯ ವಾದಿಗಳು. ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಇವರಿಬ್ಬರು ಜಿನ್ನಾ ಸಂತತಿಯವರು ಎಂದು ಕಟುವಾಗಿ ಟೀಕಿಸಿದರು.

ಇನ್ನೊಬ್ಬರ ಕಾಲೆಳೆಯುವುದೇ ಕಾಂಗ್ರೆಸ್ ಕೆಲಸವಾಗಿದೆ. ಚುನಾವಣೆಯಾಗದೇ ಅವರವರೇ ಸಿಎಂ ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿಯಲ್ಲಿ ಅಮಿತ್ ಷಾ, ವಿಶ್ವನಾಯಕ ಮೋದಿ ಇದ್ದಾರೆ. ಅದಕ್ಕಾಗಿ ಅವರನ್ನು ನಾವು ರಾಜ್ಯಕ್ಕೆ ಕರೆದುಕೊಂಡು ಬಂದಿದ್ದೇವೆ. ನೀವು ನಿಮ್ಮ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬನ್ನಿ, ರಾಗಾ, ಸೋನಿಯಾ ಹೋದ ಕಡೆಯಲೆಲ್ಲಾ ಅವರ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಈ ಬಾರಿ ಚಾಮರಾಜನಗರದ 4 ಕ್ಷೇತ್ರಗಳಲ್ಲಿ ಕಮಲ ಅರಳಲಿದೆ ಎನ್ನುವ ಭರವಸೆ ನನಗಿದೆ. ಈ ಬಾರಿ ನಿರಂಜನ ಕುಮಾರ್ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾತಿ ಮಧ್ಯೆ ಒಡೆದಾಳುವ ಪಕ್ಷ: ಕಾಂಗ್ರೆಸ್ ಅಂದರೆ ಜಾತಿ ಹಾಗೂ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ಪಕ್ಷ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಕೇವಲ ಒಂದು ಸಮುದಾಯಕ್ಕೆ ಮಾತ್ರ ಶಾದಿ ಭಾಗ್ಯ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು 10 ಕೆಜಿ ಅಕ್ಕಿ ನೀಡಿದರೆ ಅದಕ್ಕೆ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಎನ್ನುವ ಸ್ಟಿಕರ್ ಹಾಕಿಕೊಂಡು ಅನ್ನಭಾಗ್ಯ ಕಾಂಗ್ರೆಸ್ ಯೋಜನೆ ಎಂದು ಹೇಳಿಕೊಂಡರು ಎಂದು ವಾಗ್ದಾಳಿ ಆಕ್ರೋಶ ಹೊರಹಾಕಿದರು.

ಹಿಂದಿನ ಪ್ರಧಾನಿಯ ಸಮಯದಲ್ಲಿ ಭಾರತೀಯರನ್ನು ವಿದೇಶಗಳಲ್ಲಿ ಬಿಕ್ಷುಕರಂತೆ ಕಾಣುತ್ತಿದ್ದರು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಮ್ಮ ದೇಶ ಅಗ್ರಮಾನ್ಯವಾಗಿದೆ. ನಮ್ಮ ದೇಶದ ಪ್ರಧಾನಿ ಬೇರೆ ದೇಶಗಳಿಗೆ ತೆರಳಿದರೆ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ. ಮೋದಿ ಅವರ ಮಾತನ್ನು ಇಡೀ ವಿಶ್ವ ಕೇಳಿಸಿಕೊಳ್ಳುತ್ತದೆ. ಇದು ಬಿಜೆಪಿ ಬಂದ ನಂತರದ ಬದಲಾವಣೆ. ಮೋದಿ ಅವರನ್ನು ಬಿಡಿ ಅವರ ಸಂಪುಟದ ಸಹೋದ್ಯೋಗಿಗಳ ವಿರುದ್ಧವೂ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಕೇಳಿಬಂದಿಲ್ಲ ಎಂದರು.

ಈ ಬಾರಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ನಿರಂಜನ್ ಕುಮಾರ್ ಅವರನ್ನು ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಜೊತೆಗೆ ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲೂ ಕಮಲ ಅರಳಿಸಿ ಎಂದು ಮನವಿ ಮಾಡಿದರು.

ಡಿವಿಎಸ್ ಕಿಡಿ: ಮಾಜಿ ಸಿಎಂ ಡಿ.ವಿ‌. ಸದಾನಂದಗೌಡ ಮಾತನಾಡಿ, ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಪಂಚರ್ ರತ್ನಯಾತ್ರೆ ಎಂದು ಲೇವಡಿ ಮಾಡಿ ಅವರ ಮನೆಯ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳದವರು ರಾಜ್ಯದ ಸಮಸ್ಯೆಗೆ ಹೇಗೆ ಪರಿಹಾರ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಯಡಿಯೂರಪ್ಪ ಕರ್ನಾಟಕಕ್ಕೆ ಮಾಡಿದ ಸೇವೆ ಬಿಜೆಪಿ ಎಂದಿಗೂ ಮರೆಯಲ್ಲ: ರಾಜನಾಥ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.