ಬಸವಕಲ್ಯಾಣ : ಮಹಾಮಾರಿ ಕೊರೊನಾ ಸೋಂಕಿನಿಂದ ಇತ್ತೀಚಿಗೆ ಮೃತಪಟ್ಟ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ನಾರಾಯಣರಾವ ಅವರ ಮನೆಗೆ ಸಂಸದ ಭಗವಂತ ಖೂಬಾ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಸಸ್ತಾಪೂರ ಬಂಗ್ಲಾದ ಸಮಿಪದ ಕೈಗಾರಿಕಾ ಪ್ರದೇಶದ ಬಳಿಯ ನಿಜ ಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದಲ್ಲಿ ವಾಸ್ತವ್ಯ ಮಾಡಿರುವ ಬಿ.ನಾರಾಯಣರಾವ ಅವರ ಪತ್ನಿ ಮಲ್ಲಮ್ಮ ನಾರಾಯಣರಾವ ಹಾಗೂ ಪುತ್ರರಾದ ಗೌತಮ್ ಹಾಗೂ ರಾಹುಲ್ ಅವರನ್ನು ಭೇಟಿ ಮಾಡಿದ ಸಂಸದ ಖೂಬಾ, ಶಾಸಕ ನಾರಾಯಣರಾವ ಅವರ ನಿಧನದಿಂದಾಗಿ ಬೀದರ್ ಜಿಲ್ಲೆಗೆ ಭರಿಸಲಾಗದ ನಷ್ಟವಾಗಿದೆ ಎಂದರು.
ದಲಿತ, ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಸುಮಾರು 40 ವರ್ಷಗಳ ಕಾಲ ಸತತ ಹೋರಾಟಮಯ ಜೀವನ ನಡೆಸಿದ ನಾರಾಯಣರಾವ ಅವರು, ಇತ್ತೀಚಿಗೆ ಶಾಸಕರಾಗಿ ಆಯ್ಕೆಯಾಗಿ, ಶರಣರ ನಾಡು ಬಸವಕಲ್ಯಾಣ ಕ್ಷೇತ್ರದ ಸಮಗ್ರ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ತಮ್ಮ ಬಳಿ ಬರುವ ಬಡ ಜನರಿಗೆ ಜಾತಿ, ಪಕ್ಷ ಅಂತಾ ನೋಡದೆ ಉದಾರ ಮನಸ್ಸಿನಿಂದ ಸಹಾಯ ಮಾಡುತ್ತಿದ್ದರು. ನಿಷ್ಕಲ್ಮಶ ಹೃದಯವಂತನನ್ನು ನಾವು ಇಂದು ಕಳೆದುಕೊಂಡಿದ್ದೇವೆ ಎಂದರು.
ಕೊರೊನಾ ನಿಯಂತ್ರಣಕ್ಕಾಗಿ ಕ್ಷೇತ್ರದಲ್ಲಿ ಹಗಲಿರಳು ಶ್ರಮಿಸಿದ ಬಿ.ನಾರಾಯಣರಾವ ಅವರು ಭೇಟಿಯಾದಾಗಲೊಮ್ಮೆ ನಾನು ಅವರಿಗೆ ಕೊರೊನಾದಿಂದ ಜಾಗೃತ ವಹಿಸುವಂತೆ ಸಲಹೆ ನೀಡುತಿದ್ದೆ. ಆದರೆ, ನಿಷ್ಕಾಳಜಿವಹಿಸುವ ಮೂಲಕ ತಮ್ಮ ಪ್ರಾಣವನ್ನೇ ಬಲಿಕೊಟ್ಟರು ಎಂದು ಸಂಸದ ಖೂಬಾ ಕಳವಳ ವ್ಯಕ್ತಪಡಿಸಿದರು.