ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡೇ ನೂತನ ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಹೀಗಾಗಿ ಈ ನಿರ್ಧಾರವನ್ನು ವಿರೋಧಿಸದೇ ಸಹಕರಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆಯು ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಅದರ ಸರ್ವಾಂಗೀಣ ಅಭಿವೃದ್ಧಿಗೋಸ್ಕರವೇ ಈ ವಿಜಯನಗರ ಜಿಲ್ಲೆ ರಚನೆಯಾಗಿದೆ. ಜಿಲ್ಲೆಯ ಶಾಸಕರ, ಸಚಿವರ ಪರ- ವಿರೋಧದ ನಡುವೆಯೇ ವಿಜಯನಗರ ಜಿಲ್ಲೆಯು ಅಧಿಕೃತ ಘೋಷಣೆಯಾಗಿದೆ. ಹೀಗಾಗಿ ಅದನ್ನು ನಾವೆಲ್ಲರೂ ಸ್ವಾಗತಿಸೋಣ. ವಿರೋಧಿಸುವುದರಿಂದ ಏನೂ ಪ್ರಯೋಜನ ಅಗಲ್ಲ ಎಂದು ಸಚಿವ ಬಿ. ಶ್ರೀರಾಮುಲು ಅವರು ಮಾಧ್ಯಮಗಳ ಮೂಲಕ ಜಿಲ್ಲೆಯ ಜನರಿಗೆ ಕೋರಿದ್ದಾರೆ.
ಇದನ್ನೂ ಓದಿ:ವಿಜಯನಗರ ಜಿಲ್ಲೆ ರಚಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ : ಆನಂದ ಸಿಂಗ್ ಮುನಿಸಿಗೆ ಮುಲಾಮು
ನೂತನ ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆ ಕುರಿತು ಕಾನೂನಾತ್ಮಕ ಹೋರಾಟ ನಡೆಸುವವರಿಗೂ ಕೂಡ ನನ್ನದೊಂದು ಮನವಿ ಇದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಅನಿವಾರ್ಯ ಆಗಿದೆ. ತೆಲುಗು ಭಾಷಿಕರ ದಬ್ಬಾಳಿಕೆ ಹೆಚ್ಚಾಗಲಿದೆಯೆಂಬ ಊಹಾಪೋಹದ ಸುದ್ದಿಗೆ ಕಿವಿಗೊಡಬಾರದು. ಅಖಂಡ ಬಳ್ಳಾರಿ ಜಿಲ್ಲೆಯು ಕನ್ನಡ, ನೆಲ, ಜಲದ ನೆಲದಲ್ಲಿದೆ. ಅದನ್ನು ಯಾರೊಬ್ಬರೂ ಕೂಡ ಮರೆಯಬಾರದೆಂದು ಸಚಿವ ಶ್ರೀರಾಮುಲು ಹೇಳಿದರು.