ಬಳ್ಳಾರಿ: ನಾನು ಯಾವತ್ತೂ ಕೂಡ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೆ ಅಷ್ಟೇ. ಹೀಗಾಗಿ ಪಕ್ಷ ನನಗೆ ಸೂಕ್ತ ಸ್ಥಾನಮಾನವನ್ನ ಕಲ್ಪಿಸಿದೆ ಎಂದು ಹಾಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ರಾಮಲಿಂಗಪ್ಪ ಹೇಳಿದ್ದಾರೆ.
ನಗರದ ಹೊರವಲಯದ ಅಲ್ಲೀಪುರ ಬಳಿ ಶುರುವಾದ ಕಿಯಾ ಮೋಟರ್ಸ್ ಕಾರ್ ಷೋ ರೂಮ್ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೆ. ಹೀಗಾಗಿ ನನ್ನ ಅವಿರತ ಸೇವೆ ಗುರುತಿಸಿದ ಬಿಜೆಪಿ ಪಕ್ಷವು ನನಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನನ್ನಾಗಿಸಿದೆ. ಪಕ್ಷದಲ್ಲಿ ಯಾರು ನಿಷ್ಠೆಯಿಂದ ಇರುತ್ತಾರೋ ಅವರಿಗೆ ಸೂಕ್ತ ಸ್ಥಾನಮಾನ ಲಭಿಸಲಿದೆ ಎಂಬುದಕ್ಕೆ ನಿನ್ನೆಯ ದಿನ ನಡೆದ ಘಟನೆಯೇ ಸಾಕ್ಷಿ ಎಂದರು.
ನಾನಂತೂ ಯಾವತ್ತೂ ಕೂಡ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಅತ್ತಕಡೆ ಮುಖವನ್ನೂ ಮಾಡಿರಲಿಲ್ಲ. ಬಿಜೆಪಿಗೆ ಸೇರಿದ್ದು 1984ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನನ್ನ ರಾಜಕಾರಣದ ಜರ್ನಿ ಬಿಜೆಪಿಯಲ್ಲೇ. ಹೀಗಾಗಿ ಸಾಮಾನ್ಯ ಕಾರ್ಯಕರ್ತರು ನಿಷ್ಠೆಯಿಂದ ಇದ್ದರೆ ಸಾಕು. ಬಿಜೆಪಿ ಪಕ್ಷ ಅವರನ್ನ ಗುರುತಿಸಲಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರದ ನಿಯಮ ಮೀರಿ ಹಸಿರು ಗೂಟದ ಕಾರಿನಲ್ಲಿ ರೈತ ಮುಖಂಡನ ಸುತ್ತಾಟ
ಬಿಜೆಪಿ ಗೆಲುವಷ್ಟೇ ಮೂಲ
ಪಕ್ಷದಲ್ಲಿ ವಲಸಿಗ-ಮೂಲ ಎಂಬ ತಾರತಮ್ಯ ಏನೂ ಇಲ್ಲ. ಒಟ್ಟಿನಲ್ಲಿ ಇದು ಬಿಜೆಪಿ ಗೆಲುವಷ್ಟೇ. ನಾನೂ ಈ ಹಿಂದೆ ಕೂಡ ದಮ್ಮೂರು ಶೇಖರ ಅವರಿಗೆ ಬುಡಾ ಅಧ್ಯಕ್ಷಗಿರಿ ನೀಡಿದ್ದಕ್ಕೆ ವಿರೋಧಿಸಿದ್ದೆ. ಅದರಂತೆಯೇ ಹೋರಾಟ ಮಾಡಿದ್ದೆ. ಆದರೆ ಪಕ್ಷದ ತೀರ್ಮಾನದಂತೆ ಬದ್ಧನಾದೆ. ನಿನ್ನೆಯ ದಿನ ನನಗೆ ಕೇಂದ್ರ ಕಚೇರಿಯಿಂದ ಕರೆ ಮಾಡಿ ಬುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಎಂದಾಗ ನನ್ನ ಕಣ್ಣಾಲಿಗಳು ಒದ್ದೆಯಾದವು. ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೀಡೋ ಗೌರವ ಎಂದುಕೊಂಡೆ ಎಂದು ಹರ್ಷ ವ್ಯಕ್ತಪಡಿಸಿದರು.