ETV Bharat / state

ಇನ್ನೊಂದು ವಾರದಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಮಾಜಿ ಸಿಎಂ ಕುಮಾರಸ್ವಾಮಿ

author img

By

Published : Jan 31, 2023, 7:19 PM IST

Updated : Jan 31, 2023, 9:30 PM IST

ಹಾಸನ ಕ್ಷೇತ್ರಗಳ ಟಿಕೆಟ್​ಗಳ ಬಗ್ಗೆ ಯಾವುದೇ ಸಮಸ್ಯೆಗಳಿಲ್ಲ, ಫೆ. 3ಕ್ಕೆ ಎಲ್ಲವೂ ಬಗೆಹರಿಯಲಿದೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Former Minister H D Kumarswami
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಬಳ್ಳಾರಿ: ಇನ್ನೊಂದು ವಾರದಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್ ​​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಪಂಚರತ್ನ ಯೋಜನೆ ಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 76 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈಗ ಜೆಡಿಎಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧವಾಗುತ್ತಿದೆ ಎಂದರು.

ಹಾಸನದ ಟಿಕೆಟ್​ ಗೊಂದಲದ ವಿಷಯದ ಬಗ್ಗೆ ಮಾತನಾಡಿ, ಯಾವುದೇ ಕೋಲ್ಡ್​ ವಾರ್​, ಹಾಟ್​ ವಾರ್​ಗಳು ನಡೆಯುತ್ತಿಲ್ಲ. ಹಾಸನದ ಏಳು ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿ, ಫೆ.3 ರಂದು ಎಲ್ಲವೂ ಕ್ಲಿಯರ್​ ಆಗುತ್ತದೆ ಎಂದರು. ಬಳ್ಳಾರಿಯಲ್ಲಿ ಅಷ್ಟೇ ಅಲ್ಲ, ರಾಜ್ಯದ ಇತರೆ ಜಿಲ್ಲೆಗಳಲ್ಲೂ ನಮ್ಮ ಪಕ್ಷದ ನಾಯಕರನ್ನು ಬಿಜೆಪಿ ಮತ್ತು ಕಾಂಗ್ರೆಸ್​ನವರು ಹೈಜಾಕ್ ಮಾಡುತ್ತಾರೆ ಎಂದು ಆರೋಪಿಸಿದರು. ಅಲ್ಲದೆ, ಗಣಿಗಾರಿಕೆ ಹಗರಣ ಹೊರ ಬರಲು ಕುಮಾರಸ್ವಾಮಿಯೇ ಕಾರಣ. ಲೋಕಾಯುಕ್ತರಿಗೆ ದಾಖಲೆಗಳನ್ನು ನೀಡಿ ತನಿಖೆಗೆ ಅದೇಶ ಮಾಡಿದ್ದೆ ಎಂದು ಹೆಚ್​ಡಿಕೆ ಹೇಳಿದರು.

ನನ್ನ ವಿರುದ್ಧ 150 ಕೋಟಿ ಲಂಚದ ಆರೋಪದ ಸಿಡಿ ಗತಿ ಏನಾಯ್ತು ಎಂಬ ಬಗ್ಗೆ ಯಾರಿಗೂ ತಿಳಿಯುತ್ತಿಲ್ಲ. ರಾಜ್ಯದ ಉಪಮುಖ್ಯಮಂತ್ರಿಯಾಗಿ ನಂತರ ಮುಖ್ಯಮಂತ್ರಿಯಾಗಿ, 13 ಬಜೆಟ್ ನೀಡಿದವರು ಕ್ಷೇತ್ರ ಸಿಗದೆ ಒದ್ದಾಡುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಪ್ರತಿ ಪಕ್ಷಗಳಲ್ಲಿ ಅವರ ಪಕ್ಷಗಳ ಬೆಳವಣಿಗೆಗಿಂತ ಹೆಚ್ಚಾಗಿ ಅವರವರ ಕುಟುಂಬ ಹಾಗೂ ಮಕ್ಕಳ ಬೆಳವಣಿಗೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದರು.

ಸಿದ್ದರಾಮಯ್ಯ ಅವರು ಏಕೆ ವರುಣದಲ್ಲಿ ನಿಲ್ಲಲು ತಯಾರಾಗಿಲ್ಲ? ಯಾಕೆ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ? ವರುಣದಲ್ಲಿ ಅವರ ಮಗನ ಭವಿಷ್ಯ ನಿರ್ಮಾಣ ಮಾಡಲು ಹೊರಟಿದ್ದಾರೆ. ಈ ಚುನಾವಣೆಯಲ್ಲಿ ಅವರ ಮಗನ ಅಸ್ತಿತ್ವವನ್ನು ಮುಂದಿನ ರಾಜಕಾರಣಕ್ಕೆ ಯಾವ ರೀತಿ ತಯಾರಿ ಮಾಡಬೇಕು ಎಂಬುದರಲ್ಲಿ ಬ್ಯುಸಿ ಆಗಿದ್ದಾರೆ. ಅದಕ್ಕೆ ಮಗನನ್ನು ವರುಣದಲ್ಲಿ ನಿಲ್ಲಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಅವರಿಗಿದೆ. ಹೀಗೆ ಕ್ಷೇತ್ರಕ್ಕೆ ಹುಡುಕಾಟ ಮಾಡುವವರಿಗೆ, ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದರು.

ಖರ್ಗೆ ಅವರಿಗಿನ್ನು ಮುಖ್ಯಮಂತ್ರಿಯಾಗಿ ಬರಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಅವರ ಪರಿಸ್ಥಿತಿ ಅಲ್ಲಿ ಏನಿದೆ ಎಂಬುದು ನನಗೆ ಗೊತ್ತಿದೆ. ಅವರಿಗೀಗ, ನನ್ನದಂತು ಮುಗೀತು, ಕೊನೇಪಕ್ಷ ತಮ್ಮ ಮಗನಿಗಾದರೂ ಮುಂದಿನ ಸರ್ಕಾರದಲ್ಲಿ ಒಂದು ಶಕ್ತಿ ತುಂಬುವಂತಹ ವಾತಾವರಣ ನಿರ್ಮಾಣ ಮಾಡಿಕೊಳ್ಳುವ ಎನ್ನವ ಚಿಂತೆ. ಅದೇ ರೀತಿಯಲ್ಲಿ ಯಡಿಯೂರಪ್ಪ ಅವರಿಗೆ ಅವರ ಮಗನನ್ನು ಮುಂದೆ ರಾಜ್ಯದ ನಾಯಕನನ್ನಾಗಿ ಮಾಡುವುದು ಹೇಗೆ ಎನ್ನುವ ಚಿಂತೆ. ಈಶ್ವರಪ್ಪ ಅವರಿಗೆ ಅವರ ಮಗನ ಚಿಂತೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಗೆ ಮಕ್ಕಳ ಚಿಂತೆ, ಆದರೆ ನನ್ನ ಚಿಂತೆ ಆರು ಕೋಟಿ ಜನರ ಭವಿಷ್ಯದ ಬಗ್ಗೆ ಎಂದು ಹೆಚ್‌ ಡಿ ಕುಮಾರಸ್ವಾಮಿ ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೂ ಜೆಡಿಎಸ್​ ಹಾಗೂ ಹೆಚ್​ ಡಿ ಕೆ ಕುಮಾರಸ್ವಾಮಿ ಅವರ ಕುಟುಂಬವನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ನನ್ನನ್ನು ಟಾರ್ಗೆಟ್​ ಮಾಡುತ್ತಿರುವುದು ಇವತ್ತಿನ ವಿಷಯವಲ್ಲ. ಮೂವತ್ತು ವರ್ಷಗಳಿಂದ ನಡೆಯುತ್ತಿದೆ ಇದು. ನಾನು ರಾಜಕೀಯಕ್ಕೆ ಬರುವ ಮೊದಲೇ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ನಮ್ಮ ಪಕ್ಷಕ್ಕೆ ಈಗಾಗಲೇ ಆ ಲೇಬಲ್​ ಕೊಟ್ಟಾಗಿದೆ. ಅದರ ಬಗ್ಗೆ ಈಗ ಮಾತನಾಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಸೃಷ್ಟಿಸಿದ ಭವಾನಿ ರೇವಣ್ಣ ಹೇಳಿಕೆ: ಜೆಡಿಎಸ್ ವರಿಷ್ಠರ ನಡೆ ಏನು?

Last Updated : Jan 31, 2023, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.