ETV Bharat / state

ಹೊಸಪೇಟೆ: ಒಳಚರಂಡಿ ಅವ್ಯವಸ್ಥೆ... ಕ್ರಮಕೈಗೊಳ್ಳದ ನಗರಸಭೆ ಅಧಿಕಾರಿಗಳು

author img

By

Published : Sep 3, 2020, 7:47 PM IST

ಹೊಸಪೇಟೆ ಮುಖ್ಯರಸ್ತೆ ಹಾಗೂ ಉಪರಸ್ತೆಗಳ ಒಳಚರಂಡಿ ಓವರ್ ಫ್ಲೋ ಆಗಲು ಕಾರಣಿಕರ್ತರಾದ ಮನೆ ಮಾಲೀಕರ ವಿರುದ್ಧ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ, ಕೇವಲ ನೋಟಿಸ್​ ನೀಡಿ ಕೈತೊಳೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಒಳಚರಂಡಿ ಅವ್ಯವಸ್ಥೆ
ಒಳಚರಂಡಿ ಅವ್ಯವಸ್ಥೆ

ಹೊಸಪೇಟೆ (ಬಳ್ಳಾರಿ): ಹೊಸಪೇಟೆ ಮುಖ್ಯರಸ್ತೆ ಹಾಗೂ ಉಪರಸ್ತೆಗಳ ಒಳಚರಂಡಿ (ಯುಜಿಡಿ) ಓವರ್ ಫ್ಲೋ ಆಗಲು ಸ್ಯಾನಿಟರಿ ನ್ಯಾಪಕಿನ್, ನಿರುಪಯುಕ್ತ ಬಟ್ಟೆಗಳನ್ನು ಶೌಚಗೃಹ ಮತ್ತು ಸ್ನಾನಗೃಹ ಪೈಪುಗಳ ಮೂಲಕ ಬಿಸಾಡುವುದು ಮುಖ್ಯ ಕಾರಣವಾಗಿತ್ತು. ಓವರ್ ಫ್ಲೋ ಆಗಲು ಕಾರಣಿಕರ್ತರಾದ ಮನೆ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಂಗಳ ಹಿಂದೆ ನಗರಸಭೆಯ ಪೌರಾಯುಕ್ತೆ ಜಯಲಕ್ಷ್ಮಿ ಅವರು ಹೇಳಿದ್ದರು.‌ ಆದರೆ, ಇಲ್ಲಿವರೆಗೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ, ಮನೆ ಮಾಲೀಕರಿಗೆ ಕೇವಲ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ.

ಜುಲೈ 20 ರಂದು ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ, ಇಲ್ಲಿವರೆಗೂ ಎಂಟು ಜನರಿಗೆ ನೋಟಿಸ್ ನೀಡಿದ್ದಾರೆ. ಒಂದೂವರೆ ತಿಂಗಳು ಕಳೆದರೂ ಒಂದೇ ಒಂದು ದೂರು ದಾಖಲಾಗಿಲ್ಲ. ನಗರದ ನೆಹರು ಕಾಲೋನಿ, ಎಂ.ಜಿ.ನಗರ, ಜೆ.ಪಿ.ನಗರ, ಕೌಲ್ ಪೇಟೆ, ಚಿತ್ತವಾಡ್ಗಿ, ವಿಜಯನಗರ ಕಾಲೇಜಿನಲ್ಲಿ ವಸ್ತುಗಳನ್ನು ಹಾಗೂ ಬಟ್ಟೆಗಳನ್ನು ಬಿಸಾಡುವ ಪ್ರಕರಣಗಳು ಕಂಡು ಬಂದಿವೆ ಎಂದು ಖುದ್ದು ಪೌರಾಯುಕ್ತೆ ಜಯಲಕ್ಷ್ಮಿ ಅವರು ಹೇಳಿಕೊಂಡಿದ್ದರು.‌ ಆದರೆ, ಇಲ್ಲಿವರೆಗೂ ಪರಿಣಾಮಕಾರಿ ಕ್ರಮಗೊಳ್ಳದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಒಳಚರಂಡಿ ಅವ್ಯವಸ್ಥೆ ಕ್ರಮಕೈಗೊಳ್ಳದ ನಗರಸಭೆ ಅಧಿಕಾರಿಗಳು

ನಗರದಲ್ಲಿ ಈ ಮುಂಚೆ ಒಳಚರಂಡಿ(ಯುಜಿಡಿ) ಓವರ್ ಫ್ಲೋ ಪ್ರಕರಣಗಳು ಕಂಡು ಬಂದಿದ್ದವು. ಆದರೆ, ಮನೆ ಮಾಲೀಕರ ವಿರುದ್ಧ ಮಾಧ್ಯಮದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಭಿತ್ತರಿಸಿದಾಗ ಜನರು ಜಾಗೃತಗೊಂಡಿದ್ದಾರೆ ಎಂದು ಪೌರಾಯುಕ್ತೆ ಜಯಲಕ್ಷ್ಮಿ ಅವರು ಹೇಳುತ್ತಿದ್ದಾರೆ.

ದೂರು ದಾಖಲಿಸಲು ಹಿಂದೇಟು:

ಸ್ಥಳೀಯ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾಕೆಂದರೆ ದೂರು ದಾಖಲಿಸಿಕೊಂಡು ವಿರೋಧವನ್ನು ಕಟ್ಟಿಕೊಳ್ಳುವ ಮನಸ್ಸು ಅವರಿಗಿಲ್ಲ. ಅಲ್ಲದೇ, ಸಾಕ್ಷಾಧಾರಗಳನ್ನು ಸಂಗ್ರಹಿಸುವಲ್ಲಿ ಅಧಿಕಾರಿಗಳು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.‌ ಆದರೆ, ಒಳಚರಂಡಿ(ಯುಜಿಡಿ) ಓವರ್ ಫ್ಲೋದಿಂದ ನಗರದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ.

ಒಳಚರಂಡಿ ಅವ್ಯವಸ್ಥೆ
ಒಳಚರಂಡಿ ಅವ್ಯವಸ್ಥೆ

ಹುದ್ದೆಗಳು ಖಾಲಿ:

ನಗರಸಭೆಯಲ್ಲಿ ಮೂರು ಸಿನೀಯರ್ ಹೆಲ್ತ್ ಇನ್​ಸ್ಪೆಕ್ಟರ್ ಹಾಗೂ ಮೂರು ಜೂನಿಯರ್ ಹೆಲ್ತ್ ಇನ್​ಸ್ಪೆಕ್ಟರ್ ಹುದ್ದೆಗಳು ಖಾಲಿ ಇವೆ. ಈಗ ಒಬ್ಬರು ಸಿನೀಯರ್ ಹೆಲ್ತ್ ಇನ್​ಸ್ಪೆಕ್ಟರ್ ಹಾಗೂ ಒಬ್ಬರು ಜೂನಿಯರ್ ಇನ್​ಸ್ಪೆಕ್ಟರ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇರುವ ಒಬ್ಬ ಸೀನಿಯರ್ ಹೆಲ್ತ್ ಇನ್​ಸ್ಪೆಕ್ಟರ್​​ನನ್ನು ಕಮಲಾಪುರಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ಪರಿಣಾಕಾರಿ ದೂರು ದಾಖಲಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ನಗರಸಭೆಯ ಅಧಿಕಾರಿಗಳ ಮಾತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.