ಬಳ್ಳಾರಿ: ನಗರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಮುಖ್ಯಶಿಕ್ಷಕಿಯೊಬ್ಬರು ತಮ್ಮನ್ನು ಹರಸಿ ಆಶೀರ್ವದಿಸಲು ಚರ್ಚ್ ಫಾಸ್ಟರ್ ಅವರನ್ನು ಶಾಲೆಗೆ ಬರ ಮಾಡಿಕೊಂಡು ತಮ್ಮ ಖುರ್ಚಿ ನೀಡಿದ್ದಾರೆ ಎನ್ನಲಾದ ಘಟನೆ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಜಾಯ್ ಅವರನ್ನು ಪ್ರಭಾರ ಮುಖ್ಯಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಆದರೆ, ಅಧಿಕಾರ ಸ್ವೀಕರಿಸುವ ವೇಳೆ ಚರ್ಚ್ ಪಾಸ್ಟರ್ ಅವರನ್ನು ಕರೆಸಿದ್ದ ಜಾಯ್, ಫಾದರ್ ಅವರಿಂದ ಧರ್ಮ ಬೋಧನೆ ಮಾಡಿಸಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯಶಿಕ್ಷಕರ ಕುರ್ಚಿಯಲ್ಲಿ ಕುಳಿತ ಪಾಸ್ಟರ್ ಕುಮಾರ್ ಅವರು, ಪುಸ್ತಕವೊಂದನ್ನು ಹಿಡಿದುಕೊಂಡು ಸ್ಥಳದಲ್ಲಿದ್ದವರಿಗೆ ಧರ್ಮದ ಪಾಠ ಮಾಡಿದ್ದಾರೆಂದು ಹೇಳಲಾದ ಫೋಟೋಗಳು ವೈರಲ್ ಆಗಿವೆ.
ಘಟನೆಗೆ ಆಕ್ಷೇಪ, ದೂರು: ಈ ಘಟನೆಗೆ ಆಕ್ಷೇಪ ವ್ಯಕ್ತವಾಗಿದೆ. ಪಾಸ್ಟರ್ ಕರೆಯಿಸಿ ಅಧಿಕಾರ ಸ್ವೀಕಾರ ಸಮಾರಂಭ ಮಾಡಿದ್ದಕ್ಕೆ ಮುಖ್ಯಶಿಕ್ಷಕಿ ವಿರುದ್ದ ಕ್ರಮ ಕೈಗೊಳ್ಳುವಂತೆ ಕೆಲ ಶಿಕ್ಷಕರು ಹಾಗೂ ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಕೆಲವರು ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಡಿಸಿ ಮತ್ತು ಡಿಡಿಪಿಐಗೆ ದೂರು ನೀಡಿದ್ದಾರೆ.
'ಅಭಿನಂದಿಸಲು ಬಂದಿದ್ದರು ಅಷ್ಟೇ'- ಶಿಕ್ಷಕಿ: ಈ ವಿಚಾರವನ್ನು ಅಲ್ಲಗಳೆದ ಶಿಕ್ಷಕಿ ಜಾಯ್, 'ಅಧಿಕಾರ ಸ್ವೀಕಾರದ ನಂತರ ಪಾಸ್ಟರ್ ಶಾಲೆಗೆ ಬಂದಿದ್ದು ನಿಜ. ಅವರು ನಮಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದರು. ಯಾರಿಗೂ ಧರ್ಮ ಬೋಧನೆ ಮಾಡಿಲ್ಲ. ಪಾಸ್ಟರ್ ಕುಮಾರ್ ಅವರು ನಮ್ಮ ಸಹೋದರ. ಹೀಗಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕರೆಯಲಾಗಿತ್ತು. ನನ್ನ ಕೆಲ ವಿರೋಧಿಗಳು ವಿನಾಕಾರಣ ಆರೋಪ ಮಾಡುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ಡಿಡಿಪಿಐ ಪ್ರತಿಕ್ರಿಯೆ: 'ಈ ಕುರಿತು ಮುಖ್ಯಶಿಕ್ಷಕಿ ಅವರನ್ನು ವಿಚಾರಿಸಿದೆ. ಪಾಸ್ಟರ್ ನನ್ನನ್ನು ಹಾರೈಸಲು ಬಂದಿದ್ದರು ಎಂದಿದ್ದಾರೆ. ಹಾರೈಸಲು ಬಂದಿರುವುದು ಸರಿ. ಮುಖ್ಯಶಿಕ್ಷಕರ ಖುರ್ಚಿ ಮೇಲೆ ಕೂರಿಸಿದ್ದು ಯಾಕೆ? ಎಂದು ಪ್ರಶ್ನಿಸಿ, ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅದು ಸರ್ಕಾರಿ ಶಾಲೆ, ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದ್ದೇನೆ. ಘಟನೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಅನೇಕರು ಕರೆ ಮಾಡಿ ಕೇಳುತ್ತಿದ್ದಾರೆ. ಈ ಕುರಿತು ಯಾವುದೇ ಲಿಖಿತ ದೂರು ಬಂದಿಲ್ಲ. ಬಂದರೆ ನೋಟಿಸ್ ನೀಡುತ್ತೇವೆ' ಡಿಡಿಪಿಐ ಅಂದಾನಪ್ಪ ವಡಿಗೇರಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಶಾಲೆಗೆ ಮೊಬೈಲ್ ತಂದ ಕಾರಣಕ್ಕೆ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ನಡೆಸಿಕೊಂಡ ಮುಖ್ಯಶಿಕ್ಷಕಿ