ಬಳ್ಳಾರಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ ಅವರನ್ನ ಮರು ನೇಮಕಗೊಳಿಸಿ ಎಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಈಗ ಮತ್ತೆ ವಿವಾದ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.
ಈ ಹಿಂದೆ ರೆಡ್ಡಿ ಸಹೋದರರ ಪರಮಾಪ್ತರಾಗಿದ್ದ ದಮ್ಮೂರು ಶೇಖರ ಅವರನ್ನ ನೇಮಕಗೊಳಿಸಿದ್ದರಿಂದ ಜಿಲ್ಲೆಯ ಬಿಜೆಪಿಗರ ಪಾಳೆಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದಿಯಾಗಿ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ ಪ್ರಹಸನಕ್ಕೂ ಸಾಕ್ಷಿಯಾಗಿತ್ತು. ಇದರಿಂದ ಗಲಿಬಿಲಿಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೇ ಬುಡಾ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ ಆದೇಶವನ್ನ ರದ್ದು ಪಡಿಸಿದ್ದರು. ಇದೀಗ ಮತ್ತೊಮ್ಮೆ ದಮ್ಮೂರು ಶೇಖರ್ ನೇಮಕ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ. ದಮ್ಮೂರು ಶೇಖರ್ ಶ್ರೀರಾಮುಲು ಸೋಮಶೇಖರ ರೆಡ್ಡಿ ಪರಮಾಪ್ತರೆಂದು ಹೇಳಲಾಗುತ್ತೆ.
ಆದೇಶ ಹೀಗಿದೆ: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ, 1987ರ ಕಲಂ 3(3 X ಎ) ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಮ್ಮೂರು ಶೇಖರ ಅವರನ್ನ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 3 ವರ್ಷದ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.