ಮನಸು ಮಾಡಿದರೆ ನಾನು ಕೂಡ ಸಿಎಂ ಆಗುತ್ತೇನೆ: ಜನಾರ್ದನ ರೆಡ್ಡಿ ವಿಶ್ವಾಸ

author img

By

Published : Jun 22, 2022, 7:46 AM IST

Updated : Jun 22, 2022, 2:07 PM IST

MLA G Somashekar Reddy birthday Celebration

ನನಗೆ ಅಧಿಕಾರ ಬೇಕಾಗಿಲ್ಲ, ಆದರೆ ಮನಸ್ಸು ಮಾಡಿದರೆ ನಾನು ಕೂಡ ಸಿಎಂ ಆಗುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿ: ಮುಂದಿನ ದಿನಗಳಲ್ಲಿ ನಾನು ಮಂತ್ರಿ ಆಗಬೇಕು, ಸಿಎಂ ಆಗಬೇಕೆಂಬ ಆಸೆಯಿಲ್ಲ. ಆದರೆ ಮನಸ್ಸು ಮಾಡಿದರೆ ಖಂಡಿತವಾಗಿ ನಾನು ಸಿಎಂ ಆಗಿಯೇ ಆಗುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಬಳ್ಳಾರಿ ನಗರದ ಹೊರ ವಲಯದಲ್ಲಿರುವ ಕ್ಲಾಸಿಕ್ ಫಂಕ್ಷನ್ ಹಾಲ್​​ನಲ್ಲಿ ಸಂಜೆ ಆಯೋಜಿಸಲಾಗಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಮನಸು ಮಾಡಿದರೆ ನಾನು ಕೂಡ ಸಿಎಂ ಆಗುತ್ತೇನೆ: ಜನಾರ್ದನ ರೆಡ್ಡಿ

ಅಣ್ಣ ಕರುಣಾಕರ ರೆಡ್ಡಿ ಬಳ್ಳಾರಿ ಸಾಮಾನ್ಯ ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದರು. ಸೋಮಶೇಖರರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷ ಆಗಿ ಕೆಲಸ ಮಾಡಿದರು. ನನಗೆ ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಅಂತಹ ವಿಶೇಷ ಆಶೀರ್ವಾದ ಶ್ರೀ ಕನಕದುರ್ಗಮ್ಮ ದೇವಿ ನನಗೆ ನೀಡಿದ್ದಾಳೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ. ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ ಎಂದು ನನ್ನ ಬಂಧನಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳೇ ಖುದ್ದು ಹೇಳಿದರು. ಆದರೆ, ಬಳ್ಳಾರಿಯ ಪ್ರತಿ ಸಾಮಾನ್ಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಹೇಳಿದ್ದರು ಎಂದು ಹಳೆಯ ವಿಚಾರಗಳನ್ನು ಮೆಲಕು ಹಾಕಿದರು.

ನಮ್ಮ ಕುಟುಂಬದಲ್ಲೇ ಅತಿ ಹೆಚ್ಚು ಜನರನ್ನು ಪ್ರೀತಿಯಿಂದ ಕಾಣುವ ಶಕ್ತಿ ಇರುವುದು ಸೋಮಶೇಖರರೆಡ್ಡಿ ಅವರಿಗಿದೆ. ಅವರು ಜನರ ಜೊತೆ ನಿತ್ಯ ಬೆರೆಯುತ್ತಾರೆ ಎಂದು ಸೋದರ, ಶಾಸಕ ಸೋಮಶೇಖರ ರೆಡ್ಡಿ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.

MLA G Somashekar Reddy birthday Celebration
ಶಾಸಕ ಜಿ ಸೋಮಶೇಖರ್ ರೆಡ್ಡಿ ಜನ್ಮದಿನಾಚರಣೆ

ಈ ಹಿಂದೆ ಇಲ್ಲಿನ ಅದಿರಿಗೆ ಪ್ರತ್ಯೇಕ ತೆರಿಗೆ ವಿಧಿಸುವಂತೆ ನಾನು ಹೇಳಿದಾಗ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿ ತೆರಿಗೆ ವಿಧಿಸಿದರು. ಆದರೆ ಕೆಲವರು ನ್ಯಾಯಾಲಯಕ್ಕೆ ಹೋದರು. ಆದರೆ ನ್ಯಾಯಾಲಯ ನನ್ನ ವಾದವನ್ನು ಒಪ್ಪಿ ತೆರಿಗೆ ವಿಧಿಸಿದ್ದನ್ನು ಎತ್ತಿ ಹಿಡಿಯಿತು. ಹೀಗಾಗಿ ಕಳೆದ 13 ವರ್ಷಗಳಲ್ಲಿ 25 ಸಾವಿರ ಕೋಟಿ ತೆರಿಗೆ ಸಂಗ್ರಹ ಆಗಿದೆ. ಇದರಿಂದಾಗಿ ಬಳ್ಳಾರಿ ವಿಜಯನಗರ ಎರಡೂ ಜಿಲ್ಲೆಗಳು ಅಭಿವೃದ್ಧಿ ಆಗಲಿವೆ. ಈ ಎರಡೂ ಜಿಲ್ಲೆಗಳು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಕರುಣಾಕರ ರೆಡ್ಡಿ, ಬುಡಾ ಅಧ್ಯಕ್ಷ ಪಿ.ಪಾಲನ್ನ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಇದನ್ನೂ ಓದಿ: ಮುನ್ನೆಲೆಗೆ ಬಂದ ಗಡಿ ವಿವಾದ: ಜನಾರ್ದನ ರೆಡ್ಡಿಗೆ ಮತ್ತೆ ಶುರುವಾಗುತ್ತಾ ಸಂಕಷ್ಟ?

Last Updated :Jun 22, 2022, 2:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.