ಬೆಳಗಾವಿ: ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿರುವ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಸತೀಶ್ ಜಾರಕಿಹೊಳಿ ನಾಲ್ಕನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸತೀಶ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಮಲ ಪಾಳೇಯ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
![Yemkanmardi Assembly Constituency Profile](https://etvbharatimages.akamaized.net/etvbharat/prod-images/battlefortheyamakanamaradititlesatishjarakiholisracetowincontinues_17042023093718_1704f_1681704438_78.jpg)
ಈ ಹಿಂದೆ ಯಮಕನಮರಡಿ ಸಂಕೇಶ್ವರ ಕ್ಷೇತ್ರದಲ್ಲಿತ್ತು. 2008ರಲ್ಲಿ ಪ್ರತ್ಯೇಕ ಕ್ಷೇತ್ರವಾಗಿ ರಚನೆಯಾಗಿದೆ. ಹುಕ್ಕೇರಿ ತಾಲೂಕಿನ ನಾಲ್ಕು ಮತ್ತು ಬೆಳಗಾವಿ ತಾಲೂಕಿನ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಇದು ಒಳಗೊಂಡಿದೆ. ಈವರೆಗೆ ನಡೆದ ಮೂರೂ ಚುನಾವಣೆಗಳಲ್ಲಿ ಗೆದ್ದು ಬೀಗಿರುವ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ ಪ್ರಚಾರ ಮಾಡದಿದ್ದರೂ ಸತೀಶ್ ಗೆಲುವು ಸಾಧಿಸಿದ್ದರು. ಕೇವಲ 2,850 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ವಿರುದ್ಧ ಗೆದ್ದಿದ್ದ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚೆತ್ತುಕೊಂಡಿರುವ ಸತೀಶ್ ಜಾರಕಿಹೊಳಿ ಈಗಾಗಲೇ ಪ್ರಚಾರ ಚುರುಕುಗೊಳಿಸಿದ್ದಾರೆ. ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ಕೂಡ ತಂದೆಯ ಪರವಾಗಿ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ.
![Yemkanmardi Assembly Constituency Profile](https://etvbharatimages.akamaized.net/etvbharat/prod-images/battlefortheyamakanamaradititlesatishjarakiholisracetowincontinues_17042023093718_1704f_1681704438_244.jpg)
ಕ್ಷೇತ್ರದ ವಿಶೇಷತೆ: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚನ್ನಮ್ಮಾಜಿ ಜನಿಸಿದ ಕಾಕತಿ ಇರುವುದು ಕೂಡ ಯಮಕನಮರಡಿ ಮತಕ್ಷೇತ್ರದಲ್ಲಿ. ಈ ಕ್ಷೇತ್ರವು ಕೃಷಿ ಆಧಾರಿತ ಕ್ಷೇತ್ರವಾಗಿದ್ದು, ಇಲ್ಲಿ ಅತೀ ಹೆಚ್ಚು ಜನ ಕೃಷಿ ಮತ್ತು ಕೃಷಿಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಬೆಳಗಾವಿಗೆ ಸಮೀಪವಿದ್ದರು, ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇನ್ನೂ ಮಹಾರಾಷ್ಟ್ರ ರಾಜ್ಯಕ್ಕೆ ಇದು ಗಡಿ ಹಂಚಿಕೊಂಡಿದ್ದು, ಮಹಾರಾಷ್ಟ್ರದ ಗಡಹಿಂಗ್ಲಜ, ಆಜರಾ ತಾಲೂಕಿನ ಸಮೀಪದಲ್ಲಿದೆ. ಕಿತ್ತೂರು - ಕರ್ನಾಟಕಕ್ಕೆ ಒಳಪಡುವ ಈ ಕ್ಷೇತ್ರವು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ 79.47% ಮತದಾನವಾಗಿದ್ದರೆ, 1702 ನೋಟಾ ಮತಗಳು ಚಲಾವಣೆಯಾಗಿವೆ.
![Yemkanmardi Assembly Constituency Profile](https://etvbharatimages.akamaized.net/etvbharat/prod-images/battlefortheyamakanamaradititlesatishjarakiholisracetowincontinues_17042023093718_1704f_1681704438_605.jpg)
ಹಾಲಿ ಶಾಸಕು ಸತೀಶ್ ಜಾರಕಿಹೊಳಿ ಅವರನ್ನು ಹೇಗಾದರೂ ಮಾಡಿ ಈ ಬಾರಿ ಮಣಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು ಮಾರುತಿ ಅಷ್ಟಗಿ ಬದಲು ಬಸವರಾಜ ಹುಂದ್ರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶಗೊಂಡಿರುವ ಅಷ್ಟಾಗಿ ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಒಂದು ವೇಳೆ ಅಷ್ಟಗಿ ಪಕ್ಷೇತರವಾಗಿ ಸ್ಪರ್ಧಿಸಿದರೆ ಸತೀಶ್ ಜಾರಕಿಹೊಳಿ ಗೆಲುವು ಮತ್ತಷ್ಟು ಸುಲಭವಾಗಲಿದೆ ಎನ್ನುತ್ತಾರೆ, ಇಲ್ಲಿನ ರಾಜಕೀಯ ಚಿಂತಕರು. ಇನ್ನು ಜೆಡಿಎಸ್ ಸೇರಿ ಇನ್ನಿತರ ಪಕ್ಷಗಳು ಇಲ್ಲಿ ಪ್ರಾಬಲ್ಯಕ್ಕಾಗಿ ಹೋರಾಟ ನಡೆಸಿದ್ದು ತಳ್ಳಿಹಾಕುವಂತಿಲ್ಲ. ಎಂಇಎಸ್ನಿಂದ ಮಾರುತಿ ನಾಯಿಕ್ ಸ್ಪರ್ಧಿಸುತ್ತಿದ್ದಾರೆ.
ಮತದಾರರ ವಿವರ: 99,721 ಪುರುಷ ಮತದಾರರು, 1,00,216 ಮಹಿಳಾ ಮತದಾರರು, 8 ಇತರ ಮತದಾರರು ಸೇರಿ ಒಟ್ಟು 1,99,945 ಮತದಾರರಿದ್ದಾರೆ. ಪರಿಶಿಷ್ಟ ಪಂಗಡ, ಮರಾಠರು, ಲಿಂಗಾಯತ ಸಮುದಾಯದವರೇ ಇಲ್ಲಿ ಹೆಚ್ಚಿದ್ದು, ಪ್ರತಿ ಚುನಾವಣೆಯಲ್ಲಿ ಈ ಸಮುದಾಯದವರೇ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದ್ದಾರೆ.
ಮೂರು ಚುನಾವಣೆಗಳ ಫಲಿತಾಂಶ: 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಾಳಗೌಡ ಮಲಗೌಡ ಪಾಟೀಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 16,781 ಮತಗಳ ಅಂತರದಿಂದ ಗೆದ್ದಿದ್ದರು. ಬಳಿಕ 2013ರಲ್ಲಿ ಬಿಜೆಪಿಯ ಮಾರುತಿ ಅಷ್ಟಗಿ ವಿರುದ್ಧ ಮತ್ತೆ ಸತೀಶ ಜಾರಕಿಹೊಳಿ 24,400 ಮತಗಳಿಂದ ಗೆದ್ದಿದ್ದರು. 2018ರಲ್ಲಿ ಮಾರುತಿ ಅಷ್ಟಗಿ ವಿರುದ್ಧ 285 ಮತಗಳಿಂದ ಗೆಲ್ಲುವ ಮೂಲಕ ಸತೀಶ್ ಜಾರಕಿಹೊಳಿ ಹ್ಯಾಟ್ರಿಕ್ ಗೆಲುವು ಕಂಡಿದ್ದರು. ಇದೀಗ ಮತ್ತೆ ಅದೃಷ್ಟ ಪರೀಕ್ಷೆಗೆ ಸತೀಶ ಜಾರಕಿಹೊಳಿ ಮುಂದಾಗಿದ್ದು, ಕ್ಷೇತ್ರದ ಮತದಾರರು ಈ ಬಾರಿ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಎಲ್ಲವೂ ಉತ್ತಮವಾಗಿದೆ.. ಪಕ್ಷವನ್ನು ಬೆಳೆಸಲು ಶ್ರಮಿಸುತ್ತೇನೆ: ಜಗದೀಶ್ ಶೆಟ್ಟರ್