ಬೆಳಗಾವಿ: ಖಾನಾಪುರ ಪಟ್ಟಣದ ರೇಣುಕಾ ಹೋಟೆಲ್ ಮಾಲೀಕರು ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೀಗ ಆ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಹೆದ್ದಾರಿಗೆ ಹೊಂದಿಕೊಂಡಿರುವ ಹೋಟೆಲ್ನನ್ನು ಸೀಲ್ಡೌನ್ ಮಾಡಲಾಗಿದ್ದು, ಅಲ್ಲಿ ಉಪಹಾರ ಸೇವಿಸಿದ ಜನರು ಸ್ವಯಂ ಕ್ವಾರಂಟೈನ್ ಆಗಬೇಕೆಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಸೆಲ್ಫಿ ವಿಡಿಯೋದಲ್ಲಿ ಮಾತನಾಡಿದ ಅವರು, ರೇಣುಕಾ ಹೋಟೆಲ್ನಲ್ಲಿ ಚಹಾ, ಉಪಹಾರ, ತಿಂಡಿ ಸೇವಿಸಿರುವ ವ್ಯಕ್ತಿಗಳು ಸ್ವ-ಇಚ್ಛೆಯಿಂದ ಮುಂದೆ ಬಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಇದಲ್ಲದೇ ಸ್ವಯಂ ಕ್ವಾರಂಟೈನ್ ಆಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
![ಶಾಸಕಿ ಡಾ.ಅಂಜಲಿ ನಿಂಬ್ಬಾಳ್ಕರ್ ಮನವಿ](https://etvbharatimages.akamaized.net/etvbharat/prod-images/kn-bgm-07-17-covid-meeting-vsl-ka10029_17072020193318_1707f_1594994598_536.jpg)
ಇದಲ್ಲದೇ ಇಂದು ಖಾನಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಖಾನಾಪುರ ತಾಲೂಕಿನ ಸರ್ವ ವರ್ತಕರ ಸಭೆ ನಡೆಸಿ, ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ತಮ್ಮ ವ್ಯಾಪಾರ ವಹಿವಾಟು ನಡೆಸಿ, ಇನ್ನು ಹದಿನೈದು ದಿನಗಳ ಕಾಲ ಹೋಟೆಲ್ ಉದ್ಯಮಿಗಳು ಪಾರ್ಸೆಲ್ ಮಾತ್ರ ನೀಡಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು.
ಖಾನಾಪುರ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಹಮ್ಮಿಕೊಂಡ ಕೋವಿಡ್ ಸ್ಥಿತಿಗತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತಿ ಹೆಚ್ಚು ಜನರು ಕೋವಿಡ್ ತಪಾಸಣೆ ಮಾಡಿಸಿಕೊಂಡ ತಾಲೂಕು ನಮ್ಮದಾಗಿದೆ. ತಾಲೂಕಿನ ಜನರು ಭಯ ಪಡುವ ಅಗತ್ಯವಿಲ್ಲ. ಇದರ ಬಗ್ಗೆ ಜಾಗೃತಿ ವಹಿಸಬೇಕು. ಕೊರೊನಾ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದರು.
ಮುಂಬರುವ ಗಣೇಶ ಉತ್ಸವ ಕುರಿತು ಮಾತಾನಾಡಿ, ಎಲ್ಲರೂ ಒಮ್ಮತದಿಂದ ನಿರ್ಧಾರ ಕೈಗೊಳ್ಳೋಣ. ಇದರ ಬಗ್ಗೆ ಮಹಾಮಂಡಲದ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು. ಸದ್ಯಕ್ಕೆ ಭತ್ತ ನಾಟಿ ಮಾಡುವ ಸಮಯ ಇರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡುವುದು ಬೇಡ. ಮಧ್ಯಾಹ್ನದ ನಂತರ ಅರ್ಧ ಲಾಕ್ಡೌನ್ ಮಾಡೋಣ ಎಂಬ ನಿರ್ಧಾರಕ್ಕೆ ಬಂದರು.