ETV Bharat / state

ಭಾರತ ಜಗತ್ತಿನ ದೊಡ್ಡಣ್ಣನಾಗುವ ಬದಲು ಹಿರಿಯಣ್ಣನಾಗಬೇಕಿದೆ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

author img

By ETV Bharat Karnataka Team

Published : Dec 24, 2023, 9:25 AM IST

Updated : Dec 24, 2023, 10:12 AM IST

ಭಾರತವು ಜಗತ್ತಿನ ದೊಡ್ಡಣ್ಣನಾಗುವ ಬದಲು ಹಿರಿಯಣ್ಣ ಆಗುವ ಸಂಸ್ಕಾರ ಬೆಳೆಸುವ ಅವಶ್ಯಕತೆಯಿದೆ ಎಂದು ಸಚಿವ ಪ್ರಲ್ಹಾದ್​ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

Pralhad Joshi
ಸಚಿವ ಪ್ರಲ್ಹಾದ್​ ಜೋಶಿ

ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮ

ಬೆಳಗಾವಿ : ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಭಗವದ್ಗೀತೆ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು. ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಭಗವದ್ಗೀತಾ ಅಭಿಯಾನ ಹಾಗೂ ಜನಕಲ್ಯಾಣ ಟ್ರಸ್ಟ್ ಬೆಳಗಾವಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Bhagavad Gita Campaign
ಭಗವದ್ಗೀತೆ ಅಭಿಯಾನ

2008-2014ರವರೆಗೆ ಜಗತ್ತಿನ 5 ದುರ್ಬಲ ದೇಶಗಳ ಆರ್ಥಿಕತೆಯಲ್ಲಿ ಭಾರತವೂ ಒಂದಾಗಿತ್ತು. ಆದರೆ, ಇಂದು ವಿಶ್ವದ 5 ದೊಡ್ಡ ಆರ್ಥಿಕತೆಯಲ್ಲಿ ಭಾರತ ಸ್ಥಾನ ಪಡೆದಿದೆ. ತಂತ್ರಜ್ಞಾನ, ಸೇವಾವಲಯ ಸೇರಿದಂತೆ ಜಗತ್ತಿನ ಅತ್ಯಂತ ಒಳ್ಳೆಯ ಹೂಡಿಕೆಯ ಸ್ಥಾನವಾಗಿ ಭಾರತ ಬದಲಾಗಿದೆ. ಇನ್ನೊಂದೆಡೆ, ಸಂಸ್ಕಾರದ ಕೊರತೆಯಿಂದ ಕ್ಷೋಭೆ ಜಾಸ್ತಿಯಾಗುತ್ತಿದೆ. ಜಗತ್ತಿನಲ್ಲಿ ಏಕಾಂಗಿತನ ಅತ್ಯಂತ ದೊಡ್ಡ ಸಮಸ್ಯೆಯಾಗುತ್ತಿದೆ. ಅದು ಭಾರತದಲ್ಲಿ ಬರುವುದು ಬೇಡ. ಸಂಸ್ಕಾರವನ್ನು ಕಲಿಸಲು ಇಂತಹ ಕಾರ್ಯಕ್ರಮದ ಅಗತ್ಯವಿದೆ. ಭಾರತ ಜಗತ್ತಿನ ದೊಡ್ಡಣ್ಣನಾಗುವ ಬದಲು ಜಗತ್ತಿನ‌ ಹಿರಿಯಣ್ಣ ಆಗುವ ಸಂಸ್ಕಾರ ಬೆಳೆಸುವ ಅವಶ್ಯಕತೆಯಿದೆ ಎಂದರು.

Bhagavad Gita Campaign
ಭಗವದ್ಗೀತೆ ಅಭಿಯಾನ

ರಾಜ್ಯಸಭಾ ಸದಸ್ಯ ಡಾ.ಸುಧಾಂಶು ತ್ರಿವೇದಿ ಮಾತನಾಡಿ, ಸಂವಿಧಾನ ನಿರ್ಮಾಣವಾದಾಗ ಸಂವಿಧಾನದ ಮೂಲ ಪ್ರತಿಯಲ್ಲಿ ಹತ್ತು ಹನ್ನೆರೆಡು ಚಿತ್ರಗಳ ಸಹಿತ ಭಗವದ್ಗೀತೆಯನ್ನು ಉಲ್ಲೇಖಿಸಲಾಗಿದೆ. ಇದು ಸದಾಕಾಲ ಭಾರತಕ್ಕೆ ಪ್ರೇರಣೆ ನೀಡುತ್ತಾ ಸಾಗಿದೆ. ಸಂವಿಧಾನದ ನೀತಿ, ನಿರ್ದೇಶನ ತತ್ವಗಳು ಏನಿವೆಯೋ ಅದರ ಮೇಲೆ ಗೀತೋಪದೇಶದ ಚಿತ್ರವಿದೆ. ಇದರರ್ಥ ಬಹಳ ಸ್ಪಷ್ಟವಿದೆ. ಭಾರತದ ನೀತಿಗಳ ನಿದರ್ಶನ ಗೀತೆಯ ವಿಚಾರದಂತೆ ಪ್ರತಿರೂಪವಾಗಿರಬೇಕು ಎಂಬುದು ಸಂವಿಧಾನದ ನಿರ್ಮಾತೃಗಳ ಭಾವನೆಯಾಗಿತ್ತು ಎಂದು ಹೇಳಿದರು.

ಆಶೀರ್ವಚನ ನೀಡಿದ ರ್ಣವಲ್ಲಿ ಮಹಾಸಂಸ್ಥಾನ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು, ಬೆಳಗಾವಿ ಜಿಲ್ಲೆಯ ಕಿತ್ತೂರು ಎಂಬ ಹೆಸರಿನಲ್ಲಿ ಭಗವಂತನ ತತ್ವ ಅಡಗಿದೆ. ದುರ್ಭಾವನೆಗಳನ್ನು ಕಿತ್ತು ಸದ್ಭಾವನೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಇದರ ಅರ್ಥ. ನಕಾರಾತ್ಮಕ ಚಿಂತನೆಗಳನ್ನು ಬಿಡಬೇಕು, ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂಬ ತತ್ವವನ್ನು ಭಗವದ್ಗೀತೆ ಕೊಡುತ್ತದೆ. ಕಲಿತ ಭಗವದ್ಗೀತೆಯನ್ನು ಕೃಷ್ಣನಿಗೆ ಅರ್ಪಿಸುವ ಕಾರ್ಯಕ್ರಮವೇ ಮಹಾಸಮರ್ಪಣೆ. ಅರ್ಪಣೆ ಮಾಡುವುದರಿಂದ ಅಹಂಕಾರ ಕಡಿಮೆಯಾಗುತ್ತದೆ.‌ ಭಾರತದ ಅಗತ್ಯತೆಯಲ್ಲಿ ಎಲ್ಲ ಮಠಗಳು ಒಂದಾಗುವುದು ಅತ್ಯಂತ ಮಹತ್ವದ್ದು, ಧರ್ಮದ ಉಳಿವಿಗೆ, ರಾಷ್ಟ್ರದ ಹಿತಕ್ಕೆ ಈ ನಡೆ ಮಹತ್ವದ್ದು ಎಂದರು.

ಇದನ್ನೂ ಓದಿ : ಭಗವದ್ಗೀತೆ ಜೀವನದ ಧರ್ಮ ಯೋಗವಾಗಿದೆ: ಅಭಿನವನ ಶಂಕರ ಭಾರತಿ ಸ್ವಾಮೀಜಿ

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಂದೇಶ ಭಗವದ್ಗೀತೆ. ವೃತ್ತಿಯೇ ದೇವರ ಪೂಜೆ. ವೃತ್ತಿಯ ಮೂಲಕ ದೇವರ ಆರಾಧಿಸಬೇಕು. ವೃತ್ತಿಯಲ್ಲಿ ಮೋಸ, ವಂಚನೆ, ಅವ್ಯವಹಾರಕ್ಕೆ ಎಡೆ ಇಲ್ಲ.‌ ವೃತ್ತಿ ಕೇವಲ ದುಡ್ಡು, ಸಂಪತ್ತಿನ‌ ಸಂಗ್ರಹಕ್ಕಾಗಿ ಅಲ್ಲ.‌ ಆಧ್ಯಾತ್ಮಿಕ ಸಾಧನೆ. ವೃತ್ತಿ ಮತ್ತು ಜೀವನ ಬೇರೆ ಬೇರೆ ಇಲ್ಲ, ಎರಡೂ ಒಂದೇ. ಅರ್ಧ ಗಂಟೆ ಮಾಡುವ ಪೂಜೆ ದಿನಪೂರ್ತಿ ಸ್ಫೂರ್ತಿ ನೀಡುತ್ತದೆ. ವೃತ್ತಿ ಮೂಲಕ ಆರಾಧನೆ ಮಾಡಿ ನನ್ನ ಸಿದ್ದಿಸಿಕೋ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಹಾಗಾಗಿ, ಸಮಾಜದಿಂದ ಎಲ್ಲವನ್ನು ಪಡೆದಿರುವ ನಾವು ಮರಳಿ ಸಮಾಜಕ್ಕೆ ಏನಾದರೂ ಕೊಡುವತ್ತ ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.

ಮಹಿಳೆಯರಿಂದ ಭಗವದ್ಗೀತೆ 10ನೇ ಅಧ್ಯಾಯದ ಮಹಾಸಮರ್ಪಣೆ ನಡೆಯಿತು. ರಾಜ್ಯಮಟ್ಟದ ಭಗವದ್ಗೀತೆ ಕಂಠಪಾಟ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಈ ವೇಳೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಂಗಳಾ ಅಂಗಡಿ, ವಿಧಾನಸಭೆ ಮಾಜಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರು ಇದ್ದರು.

Last Updated :Dec 24, 2023, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.