ETV Bharat / state

'ಬಿಜೆಪಿ ಬಿಟ್ಟು ಹೋಗಿ ದೊಡ್ಡವರಾದ ಉದಾಹರಣೆ ಇಲ್ಲ': ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ

author img

By

Published : Apr 16, 2023, 8:19 PM IST

ದೊಡ್ಡ ಪಕ್ಷದಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯ ಎಂದು ಸುಧಾಂಶು ತ್ರಿವೇದಿ ಹೇಳಿದರು.

Rajya Sabha Member Sudhanshu Trivedi
ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ

ಬೆಳಗಾವಿ : ರಾಜ್ಯದಲ್ಲಿ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಿದ್ದರಿಂದ ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂಬುದು ಸುಳ್ಳು. ಎಲ್ಲ ಸಮುದಾಯಗಳಿಗೂ ಬಿಜೆಪಿ ಅವಕಾಶ ನೀಡಿದೆ. ಲಿಂಗಾಯತ ಸಮುದಾಯದ ದೊಡ್ಡ ನಾಯಕರ ಪಡೆಯೇ ನಮ್ಮಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು.

ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರವನ್ನು (ಬೆಳಗಾವಿ, ಚಿಕ್ಕೋಡಿ, ವಿಜಯ‍ಪುರ ಹಾಗೂ ಬಾಗಲಕೋಟೆ ಜಿಲ್ಲೆ) ಇಂದು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೊಡ್ಡ ಪಕ್ಷದಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯವಾಗುತ್ತವೆ. ಅವುಗಳನ್ನು ಒ‍ಪ್ಪಿಕೊಂಡು ಪಕ್ಷ ಮುನ್ನಡೆಯುತ್ತದೆ. ಬೇಸತ್ತು ಬಿಜೆಪಿ ಬಿಟ್ಟು ಹೋದವರು ಯಾರೂ ದೊಡ್ಡವರಾದ ಉದಾಹರಣೆ ಇಲ್ಲ ಎಂದರು. ಈ ಮೂಲಕ ಪಕ್ಷ ಬಿಟ್ಟು ಹೋಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ತಿರುಗೇಟು ಕೊಟ್ಟರು.

ಒಂದೆಡೆ ದೇಶದ ಸುರಕ್ಷತೆ, ಇನ್ನೊಂದೆಡೆ ಜನ ಕಲ್ಯಾಣ. ಈ ಎರಡೂ ಸೂತ್ರಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದಾರೆ. ಅವರ ಆಶಯದಂತೆ ರಾಜ್ಯದಲ್ಲಿ ಕೂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ನಮ್ಮ ಕೆಲಸಗಳ ಕಾರಣದಿಂದಲೇ ಈ ಬಾರಿ ಮತ್ತೆ ಪಕ್ಷ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ಸುಧಾಂಶು ತ್ರಿವೇದಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಮಾತನಾಡಿ, ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಫ್ರಭುತ್ವ ರಾಷ್ಟ್ರ. ಅಷ್ಟೇ ಅಲ್ಲದೇ ಪ್ರಜಾಪ್ರಭುತ್ವದ ನಿರ್ಮಾತೃ ಎಂದು ಪ್ರಧಾನಿ ಮೋದಿ ಅವರು ಪದೇ ಪದೇ ಹೇಳುತ್ತಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲದಲ್ಲಿದ್ದ ಅನುಭವ ಮಂಟಪವೇ ಜಗತ್ತಿನ ಮೊದಲ ಪ್ರಜಾಪ್ರಭುತ್ವ. ಹೀಗಾಗಿ, ವಿಶ್ವಕ್ಕೆ ಪ್ರಜಾಪ್ರಭುತ್ವ ಮಾದರಿ ಕೊಟ್ಟ ನಾಡು ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದು ಹೇಳಿದರು.

ಬೆಂಗಳೂರು, ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಮಾರ್ಗ, ಬೆಳಗಾವಿ ರೈಲ್ವೆ ನಿಲ್ದಾಣ ಆಧುನೀಕರಣ ಸೇರಿದಂತೆ ಹಲವು ಬೃಹತ್‌ ಯೋಜನೆಗಳು ಪೂರ್ಣಗೊಂಡಿವೆ. ಹುಬ್ಬಳ್ಳಿಯಲ್ಲಿ ಎಲೆಕ್ಟ್ರಾನಿಕ್‌ ಹಬ್‌ ನಿರ್ಮಾಣ, ಕಳಸಾ–ಬಂಡೂರಿ ಯೋಜನೆ ಕಾರ್ಯಗತ, ಐಫೋನ್‌ ತಯಾರಿಕೆ ಘಟಕ ಸೇರಿ ತಂತ್ರಜ್ಞಾನದಲ್ಲೂ ಕರ್ನಾಟಕ ಮುಂದಿದೆ. ಬಿಜೆಪಿ ಸರ್ಕಾರ ನಿರೀಕ್ಷಿತ ಗುರಿ ಮುಟ್ಟಿದೆ ಎಂದು ಸುಧಾಂಶು ತ್ರಿವೇದಿ ಹೇಳಿದರು.

ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು, ಅಭ್ಯರ್ಥಿಗಳು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತರನ್ನು ಸ್ವಾರ್ಥಕ್ಕೆ ಬಳಸಿದ್ದೀರಿ, ಶಾಪ ತಟ್ಟದೇ ಇರಲ್ಲ: ಶೆಟ್ಟರ್​ ವಿರುದ್ಧ ಖೂಬಾ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.