ETV Bharat / state

ಹೈಕಮಾಂಡ್ ಅಂಗಳಕ್ಕೆ ಬೆಳಗಾವಿ ಬಿಜೆಪಿ ನಾಯಕರ ಭಿನ್ನಮತ: ಜೆ.ಪಿ.ನಡ್ಡಾ ಕೈ ಸೇರಿದ ವರದಿ

author img

By

Published : Apr 23, 2022, 5:26 PM IST

ಎರಡೂ ಬಣಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಭಿನ್ನಮತಕ್ಕೆ ಕಾರಣಗಳನ್ನು ಪಟ್ಟಿ ಮಾಡಿಕೊಂಡ ಅರುಣ್ ಸಿಂಗ್, ಇದರ ವರದಿಯನ್ನು ಪಕ್ಷದ ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೇ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಜೊತೆಗೂ ಚರ್ಚಿಸಿದ್ದಾರೆ.

ಬಿಜೆಪಿ  ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ.ನಡ್ಡಾ
ಬಿಜೆಪಿ ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ.ನಡ್ಡಾ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ನಾಯಕರ ನಡುವಿನ ರಾಜಕೀಯ ಸಂಘರ್ಷ ಇದೀಗ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಜಿಲ್ಲಾ ಪ್ರವಾಸದ ನಂತರ ರಾಜ್ಯ ಉಸ್ತುವಾರಿ ಅರುಣ್ ಸಿಂ‌ಗ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಕುರಿತ ವರದಿಯನ್ನು ಪಕ್ಷದ ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ನಾಯಕರ ಸಂಘರ್ಷ ತಾರಕಕ್ಕೇರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್ ರಾಜ್ಯದ ಹಿರಿಯ ‌ನಾಯಕ ಬಿಎಸ್‌ವೈ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ‌ಅವರನ್ನು ಬೆಳಗಾವಿಗೆ ಕಳಿಸಿಕೊಟ್ಟಿತ್ತು. ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಠಿಕಾಣಿ ಹೂಡಿದ್ದ ಇಬ್ಬರೂ ಭಿನ್ನಮತ ಶಮನಕ್ಕೆ‌ ಶತಪ್ರಯತ್ನ ನಡೆಸಿದ್ದರು.

ಎರಡೂ ಬಣಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಭಿನ್ನಮತಕ್ಕೆ ಕಾರಣಗಳನ್ನು ಪಟ್ಟಿ ಮಾಡಿಕೊಂಡಿದ್ದ ಅರುಣ್ ಸಿಂಗ್, ಇದರ ವರದಿಯನ್ನು ಪಕ್ಷದ ಅಧ್ಯಕ್ಷರಿಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೇ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಜೊತೆಗೂ ಚರ್ಚಿಸಿದ್ದಾರೆ ಎಂದು ಉನ್ನತ ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.

ದೂರು-ಪ್ರತಿದೂರು, ನಾಯಕರು ಹೈರಾಣು!: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿ ರಾಜಕಾರಣದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪ್ರಭಾವಳಿ ಹೆಚ್ಚಿದೆ. ಸಹಕಾರ ಕ್ಷೇತ್ರವೂ ಇಲ್ಲಿನ ರಾಜಕಾರಣ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಸದ್ಯ ರಾಜಕೀಯದಲ್ಲಿರುವ ಘಟಾನುಘಟಿ ನಾಯಕರೆಲ್ಲೂ ಸಹಕಾರ ‌ರಂಗದ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ‌ಚುನಾವಣೆ ನಂತರ ಲಿಂಗಾಯತ ನಾಯಕರೆಲ್ಲರೂ ಒಂದಾಗಿದ್ದು, ಜಾರಕಿಹೊಳಿ ಸಹೋದರರು ಒಂದು ಗುಂಪಿನನಲ್ಲಿದ್ದಾರೆ. ಕತ್ತಿ-ಸವದಿ-ಜೊಲ್ಲೆ ಹಾಗೂ ಕೋರೆ ಅವರದ್ದು ಮತ್ತೊಂದು ಬಣವಾಗಿದೆ.

ಆದರೆ, ಬಿಜೆಪಿ ಈಗ ವಿಧಾನಸಭೆ ಚುನಾವಣೆಗೆ ಸಜ್ಜಾಗಬೇಕಿದೆ. ಹೀಗಾಗಿ ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗದಂತೆ ‌ನೋಡಿಕೊಳ್ಳಬೇಕೆಂದು ಅರಣ್​ ಸಿಂಗ್​ ಸೂಚಿಸಿದ್ದಾರೆ. ಇತ್ತ, ಪ್ರತಿ ತಿಂಗಳಿಗೊಮ್ಮೆ ಬೆಳಗಾವಿ ‌ಬಂದು ಸ್ಥಳೀಯ ‌ನಾಯಕರ‌ ಮಧ್ಯೆ ಸಮನ್ವಯ ಸಾಧಿಸಲು ಪ್ರಯತ್ನಿಸುವುದಾಗಿ ಬಿಎಸ್‌ವೈ ಹೇಳಿದ್ಧಾರೆ. ಈ ನಡುವೆ ಭಿನ್ನಮತದ ವರದಿಯು ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಹೈಕಮಾಂಡ್​ ಏನು ನಿರ್ಧಾರ ಮಾಡುತ್ತದೆ ಮತ್ತು ಪಕ್ಷಕ್ಕಾಗಿ ನಾಯಕರು ಒಂದಾಗುತ್ತಾರಾ ಎಂಬುದೇ‌ ಸದ್ಯದ ಪ್ರಶ್ನೆ.

ಇದನ್ನೂ ಓದಿ: ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿ ಹಣವನ್ನು ಪೊಳಲಿ ದೇಗುಲದ ಅನ್ನದಾನಕ್ಕೆ ಅರ್ಪಿಸಿದ ವೃದ್ಧೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.