ETV Bharat / state

ರಮೇಶ ಜಾರಕಿಹೊಳಿಗೆ ಬೆಳಗಾವಿ ಸಾರಥ್ಯ.. ನಳಿನ್‍ಕುಮಾರ್ ಕಟೀಲ್ ತಂತ್ರವೇನು?

author img

By

Published : Oct 1, 2022, 11:28 AM IST

Updated : Oct 1, 2022, 7:55 PM IST

ಪಕ್ಷದ ನಾಯಕರ ಜೊತೆ ಮುನಿಸಿಕೊಂಡಿರುವ ರಮೇಶ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಬೆಳಗಾವಿಯಲ್ಲಿ ಪಕ್ಷ ಸಂಘಟಿಸಲು ಬಿಜೆಪಿ ಹೊಸ ತಂತ್ರ ಹೆಣೆದಿದೆ.

ರಮೇಶ ಜಾರಕಿಹೊಳಿಗೆ ಬೆಳಗಾವಿ ಸಾರಥ್ಯ
ರಮೇಶ ಜಾರಕಿಹೊಳಿಗೆ ಬೆಳಗಾವಿ ಸಾರಥ್ಯ

ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಇದೀಗ ಕಮಲ ಪಕ್ಷದ ಮುಖಂಡರ ಜೊತೆಗೆ ಮುನಿಸಿಕೊಂಡಿದ್ದಾರೆ. ಮರಳಿ ಸಚಿವ ಸ್ಥಾನ ನೀಡದಿರುವುದೇ ಅವರ ಸಿಟ್ಟಿಗೆ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿನಿಂದಲೂ ರಮೇಶ ಪಕ್ಷದ ಚಟುವಟಿಕೆಗಳಲ್ಲಿ ಅಷ್ಟೊಂದು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ರಮೇಶ ಜಾರಕಿಹೊಳಿ ಅವರ ಈ ನಡೆ ಬಿಜೆಪಿಗೆ ತಲೆನೋವಾಗಿ ಪರಿಣಿಸಿದೆ. ಈ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ರಮೇಶ ಜಾರಕಿಹೊಳಿ ಮನವೊಲಿಕೆಗೆ ಹೊಸ ತಂತ್ರ ಹೆಣೆದಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ಗೋಕಾಕಿನಲ್ಲಿ ಬೃಹತ್ ಕಾರ್ಯಕರ್ತರ ಸಭೆ ನಡೆದಿತ್ತು. ಗೋಕಾಕ್​ ಶಾಸಕ ರಮೇಶ ಜಾರಕಿಹೊಳಿಯವರೇ ಈ ಕಾರ್ಯಕ್ರಮ ಆಯೋಜಿಸಿದ್ದರು. ಸಿಡಿ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿ ಮರಳಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ನಡೆಸುತ್ತಿರುವ ಶತಪ್ರಯತ್ನಗಳಿಗೆ ಫಲ ಸಿಕ್ತಿಲ್ಲ. ಈ ಕಾರಣಕ್ಕೆ ರಮೇಶ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿನಿಂದಲೇ ಪಕ್ಷ ಸಂಘಟನೆಯಿಂದಲೂ ದೂರವಾಗಿದ್ದಾರೆ. ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆ ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಪ್ರಸ್ತುತ 18 ವಿಧಾನಸಭೆ ಕ್ಷೇತ್ರಗಳ ಪೈಕಿ ಇಲ್ಲಿ 13 ಬಿಜೆಪಿ ಶಾಸಕರಿದ್ದಾರೆ. ಉಮೇಶ ಕತ್ತಿ ನಿಧನದಿಂದ ಹುಕ್ಕೇರಿ ಕ್ಷೇತ್ರ ತೆರವಾಗಿದ್ದು, ಸದ್ಯ 12 ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್‍ನ ಐವರು ಶಾಸಕರಿದ್ದಾರೆ. ಬೆಳಗಾವಿಯಲ್ಲಿ ಅತಿಹೆಚ್ಚು ಸ್ಥಾನ ಪಡೆಯುವ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ ಎಂಬ ಮಾತುಗಳು ಇವೆ. ಈ ಕಾರಣಕ್ಕೆ ನಳಿನ್‍ಕುಮಾರ್ ಕಟೀಲ್ ಜಿಲ್ಲೆಯ ಮೇಲೆ ಕಣ್ಣಿಟ್ಟಿದ್ದು, ಮೂರು ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ತೆರಳಿದ್ದಾರೆ.

(ಓದಿ: ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗ ನೀಡಿ ಸರ್ಕಾರದ ಆದೇಶ)

ಕಟೀಲ್ ತಂತ್ರವೇನು? ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲೆಯ ಹಿರಿಯ ರಾಜಕಾರಣಿ ಉಮೇಶ ಕತ್ತಿ ತೀವ್ರ ಹೃದಯಘಾತದಿಂದ ವಿಧಿವಶರಾದರು. ಇದು ಜಿಲ್ಲಾ ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಉಮೇಶ ಕತ್ತಿಯಷ್ಟೇ ಪ್ರಬಲವಾಗಿರುವ ಮತ್ತೋರ್ವ ವ್ಯಕ್ತಿ ರಮೇಶ ಜಾರಕಿಹೊಳಿ ಆಗಿದ್ದರೂ ಅವರೀಗ ಸದ್ಯ ಸಚಿವರಲ್ಲ. ಸಚಿವ ಸಂಪುಟ ವಿಸ್ತರಣೆಯೂ ಅನುಮಾನ ಎನ್ನಲಾಗುತ್ತಿದೆ. ಸಚಿವ ಸ್ಥಾನ ಕೊಡದೇ ರಮೇಶ ಜಾರಕಿಹೊಳಿ ಸಮಾಧಾನ ಪಡಿಸಲು ನಳಿನ್‍ಕುಮಾರ್ ಕಟೀಲ್ ತಂತ್ರ ಹೆಣೆದಿದ್ದಾರೆ. ಉಮೇಶ ಕತ್ತಿ ನಿಧನದ ಬಳಿಕ ಜಿಲ್ಲೆಯ ಬಿಜೆಪಿ ಸಾರಥ್ಯ ಯಾರ ಹೆಗೆಲಿಗೆ ಎಂಬ ಚರ್ಚೆಯೂ ತೀವ್ರಗೊಳ್ಳುತ್ತಿವೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಆಗಿರುವ ಲಕ್ಷ್ಮಣ ಸವದಿ ಪಕ್ಷ ಸಂಘಟನೆ ವಿಚಾರದಲ್ಲಿ ಜಿಲ್ಲೆಯಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಇನ್ನು, ರಾಜ್ಯಸಭೆಯಲ್ಲಿ ಅವಕಾಶ ಸಿಗದಿದಕ್ಕೆ ಕೆಎಲ್‍ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಕೂಡ ಪಕ್ಷದ ಜೊತೆಗೆ ಅಷ್ಟೊಂದು ಗುರುತಿಸಿಕೊಳ್ಳುತ್ತಿಲ್ಲ. ಜೊಲ್ಲೆ ದಂಪತಿ ಮಾತ್ರ ಆಗಾಗ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಅಷ್ಟೇ. ಆದರೆ ಜಿಲ್ಲೆಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಅವರಿಂದಲೂ ಸಾಧ್ಯವಾಗ್ತಿಲ್ಲ. ಈ ಎಲ್ಲ ಬೆಳವಣಿಗೆಗಳು ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಈ ಕಾರಣಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಎದುರಿಸುತ್ತೇವೆ. ರಮೇಶ ಜಾರಕಿಹೊಳಿಗೆ ಬಿಜೆಪಿ ಸಾರಥ್ಯ ಕೊಡುತ್ತೇವೆ. ಅವರು ಸಾರಥ್ಯ ವಹಿಸಿಕೊಂಡರೆ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ಗೋಕಾಕ್​ ನಗರದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಕಟೀಲ್ ಘೋಷಣೆ ಮಾಡಿದರು.

(ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಧ್ವಜ ಹಿಡಿದ ವ್ಯಕ್ತಿ ವಿರುದ್ಧ FIR)

ಮಂತ್ರಿಗಿರಿಗೆ ಬೇಡಿಕೆ ಇಟ್ಟ ರಮೇಶ? ಜಿಲ್ಲಾ ಸಾರಥ್ಯವೇನು ಬೇಡ, ನನಗೆ ಮರಳಿ ಸಚಿವ ಸ್ಥಾನ ಕೊಡಬೇಕು. ಬೆಳಗಾವಿ ಉಸ್ತುವಾರಿ ಸಚಿವ ಸ್ಥಾನವನ್ನೇ ನೀಡಬೇಕು ಎಂದು ರಮೇಶ್​ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಎದುರು ಬೇಡಿಕೆ ಇಟ್ಟಿದ್ದಾರೆ. ಸಚಿವ ಸ್ಥಾನ ಕೊಟ್ಟರೆ ಜಿಲ್ಲೆಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಗೆ ಅನುಕೂಲ ಆಗುತ್ತದೆ ಎಂಬ ಸಂಗತಿಯನ್ನು ರಮೇಶ, ಬಿಜೆಪಿ ಅಧ್ಯಕ್ಷರ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಬಿಜೆಪಿ ಕಾರ್ಯಕರ್ತರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕಟೀಲ್, ಸಚಿವ ಸ್ಥಾನ ಕೊಡುವುದು, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು ಎಂದಿದ್ದರು. ಮರುದಿನ ರಮೇಶ ಜಾರಕಿಹೊಳಿ ಖಂಡಿತ ಸಚಿವ ಆಗಲಿದ್ದಾರೆ ಎಂದೂ ಹೇಳಿದ್ದರು. ಸಿಡಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಬಿಜೆಪಿ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಚಿವ ಸ್ಥಾನದ ಮೇಲೆ ಸವದಿ ಕಣ್ಣು! ಉಮೇಶ ಕತ್ತಿ ನಿಧನದಿಂದ ಜಿಲ್ಲೆಗೆ ಸಿಕ್ಕಿದ್ದ ಸಚಿವ ಸ್ಥಾನ ತೆರವಾಗಿದೆ. ಇತ್ತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಲಕ್ಷ್ಮಣ ಸವದಿ ಶಾಸಕರಲ್ಲದಿದ್ದರೂ ಡಿಸಿಎಂ ಆಗಿ ಅಚ್ಚರಿ ಮೂಡಿಸಿದ್ದರು. ರಾಷ್ಟ್ರಮಟ್ಟದ ಬಿಜೆಪಿ ನಾಯಕರ ಜೊತೆಗೆ ಸವದಿ ಅಷ್ಟು ಪ್ರಭಾವ ಹೊಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆದರೆ ನನ್ನನ್ನು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಲಕ್ಷ್ಮಣ ಸವದಿ ಇಟ್ಟಿದ್ದಾರೆ ಎನ್ನಲಾಗ್ತಿದೆ.

ವಿಧಾಸಭೆಯ ಚುನಾವಣೆಗೆ ಕೇವಲ 7 ತಿಂಗಳು ಉಳಿದಿದ್ದು, ಹೊಸಬರಾದ ಅಭಯ್ ಪಾಟೀಲ, ಪಿ.ರಾಜೀವ ಸಚಿವ ಸ್ಥಾನ ಅಲಂಕರಿಸಲು ಆಸಕ್ತಿ ತೋರುತ್ತಿಲ್ಲ. ಈ ಕಾರಣಕ್ಕೆ ಅನುಭವದ ದೃಷ್ಟಿಯಿಂದ ಒಂದು ಲಕ್ಷ್ಮಣ ಸವದಿ ಇಲ್ಲವೇ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು. ಸಚಿವ ಸಂಪುಟ ವಿಸ್ತರಣೆ ಆದರೆ ಇಬ್ಬರಲ್ಲಿ ಯಾರಿಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Last Updated : Oct 1, 2022, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.