ETV Bharat / state

ಬೆಳಗಾವಿಯಲ್ಲಿ ರಾಜಕೀಯ ನಾಯಕರಿಂದ ಮತದಾನ; ಶೆಟ್ಟರ್​ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಂಗಳ ಅಂಗಡಿ

author img

By

Published : May 10, 2023, 10:50 AM IST

Updated : May 10, 2023, 11:37 AM IST

ಕಾದ್ರೊಳ್ಳಿ ಗ್ರಾಮದ ಮತಗಟ್ಟೆಯೊಂದರಲ್ಲಿ ತಾಂತ್ರಿಕ ದೋಷದಿಂದಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.

Lakshmi Hebbalkar came to vote with her family
ಕುಟುಂಬ ಸಮೇತ ಬಂದು ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ

ಬೆಳಗಾವಿಯಲ್ಲಿ ಮತ ಚಲಾಯಿಸಿದ ರಾಜಕೀಯ ನಾಯಕರು

ಬೆಳಗಾವಿ: ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಬೆಳಗಾವಿಯ ವಿಜಯನಗರದ ಮರಾಠಿ ಶಾಲೆಯ ಮತಗಟ್ಟೆಯಲ್ಲಿ ಸಹೋದರ ಎಂಎಲ್​ಸಿ ಚನ್ನರಾಜ್ ಹಟ್ಟಿಹೊಳಿ, ಪುತ್ರ ಮೃಣಾಲ್, ಸೊಸೆ ಹಿತಾ, ತಾಯಿ‌ ಸೇರಿ ಇನ್ನಿತರ ಕುಟುಂಬಸ್ಥರ ಜೊತೆಗೆ ಬಂದ ಹೆಬ್ಬಾಳ್ಕರ್ ಹಕ್ಕು ಚಲಾಯಿಸಿದರು.

ಮತದಾನ ಮಾಡಿದ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, "ಕಳೆದ ಬಾರಿ ನನಗೆ ಅನುಭವ ಇರಲಿಲ್ಲ. ಯಾವ ರೀತಿ ಸರ್ಕಾರದಿಂದ ಕೆಲಸ ತರಬೇಕು ಎಂಬುದು ಗೊತ್ತಿರಲಿಲ್ಲ. ಐದು ವರ್ಷ ಸತತವಾಗಿ ಜನರ ಸಂಪರ್ಕದಲ್ಲಿದ್ದೇನೆ. ಕೆಲಸ ಮಾಡಿದ್ದೇನೆ, ಹೀಗಾಗಿ ನನಗೆ ವಿಶ್ವಾಸ ಹೆಚ್ಚಾಗಿದೆ. ಕಳೆದ ಬಾರಿಗಿಂತ ಒಂದು ಸಾವಿರ ಜಾಸ್ತಿ ಅಂತರದಿಂದ ಗೆಲ್ಲುತ್ತೇನೆ. ಗೆದ್ದು ಮಂತ್ರಿಯೂ ಆಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಯ ಪಾಟೀಲ ವೋಟಿಂಗ್: ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ತಮ್ಮ ಪತ್ನಿ ಪ್ರೀತಿ ಪಾಟೀಲ ಜೊತೆಗೆ ಆಗಮಿಸಿ ಹೊಸೂರು-ಬಸವಣ್ಣ‌ಗಲ್ಲಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಾಟೀಲ್, "ಯಾರೋ ಸಾರಾಯಿ ಹಂಚಿದರೆ ಅದನ್ನು ಬಿಜೆಪಿಯವರು ಹಂಚುತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಯಾರು ಹತಾಶರಾಗಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಅಮಿತ್ ಶಾ ಅವರು ಬಂದಾಗ ಭರ್ಜರಿ ರೋಡ್ ಶೋ ಮಾಡಿದ್ದೆವು. ದೇಶದಲ್ಲಿ ಎಲ್ಲೂ ಆಗದ ರೀತಿ, ಅಷ್ಟು ಅದ್ಭುತವಾಗಿ ಬೈಕ್ ‌ರ‍್ಯಾಲಿ ಆಗಿದೆ. ಕಾಂಗ್ರೆಸ್ ಹಾಗೂ ಎಂಇಎಸ್​ನವರು ಸೇರಿ ನನ್ನನ್ನು ಸೋಲಿಸಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಸ್ವಿತ್ವವನ್ನೇ ಕಳೆದುಕೊಂಡಿದೆ. ಲಕ್ಷಾಂತರ ಜನ ನನ್ನ ಹಿಂದೆ ಇದ್ದಾರೆ. ಜನರೇ ಅವರಿಗೆ ಉತ್ತರ ನೀಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಶೆಟ್ಟರ್ ಗೆಲ್ತಾರೆ'- ಮಂಗಲ ಅಂಗಡಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರವೂ ಬರುತ್ತೆ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಕೂಡ ಗೆಲ್ಲುತ್ತಾರೆ ಎಂದು ಬೆಳಗಾವಿ ಸಂಸದೆ ಮಂಗಲ ಅಂಗಡಿ ಹೇಳಿಕೆ ನೀಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 13 ಸ್ಥಾನವನ್ನು ಬಿಜೆಪಿ ಗೆಲ್ಲುತ್ತದೆ. ಇನ್ನು ಜಗದೀಶ ಶೆಟ್ಟರ್ ಅವರೂ ಸಹ ಗೆಲ್ಲುತ್ತಾರೆ. ಅಲ್ಲಿ ಅವರು ಮೊದಲಿಂದಲೂ ಸಹ ಕೆಲಸ ಮಾಡುತ್ತಿದ್ದಾರೆ ಎಂದರು.

ಪಕ್ಷ ಬದಲಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಾನು ಪಾರ್ಟಿ ಚೇಂಜ್ ಮಾಡಲ್ಲ, ನಾನು ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ನಾನು ಮತದಾನ ಮಾಡಿದ್ದೇನೆ, ಒಳ್ಳೆಯ ರೆಸ್ಪಾನ್ಸ್ ಇದೆ. ಪ್ರತಿಯೊಬ್ಬರೂ ಸಹ ಮತದಾನ ಮಾಡಿ" ಎಂದು ಇದೇ ವೇಳೆ ಮಂಗಲ ಅಂಗಡಿ ಮನವಿ ಮಾಡಿಕೊಂಡರು.

ಎಲ್ಲೆಡೆ ಮತೋತ್ಸಾಹ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಾಗಿದ್ದು, ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾಯಿಸುತ್ತಿದ್ದಾರೆ. ಜಿಲ್ಲೆಯ 4434 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 9.20 ಗಂಟೆಯ ವೇಳೆಗೆ ಶೇ. 8.02ರಷ್ಟು‌ ಮತದಾನವಾಗಿದೆ. ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿರುವುದು ವಿಶೇಷವಾಗಿದೆ. ಬೆಳಗಾವಿಯ ಶಿವಬಸವ ನಗರ, ವೀರಭದ್ರ ನಗರ, ಶಿವಾಜಿ ನಗರ ಸೇರಿ ಹಲವು ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ವಾಯುವಿಹಾರಕ್ಕೆ ಬಂದವರು ಮತಗಟ್ಟೆಯತ್ತ ಆಗಮಿಸಿ ಮತ ಚಲಾಯಿಸುತ್ತಿರುವುದು ಸಾಮಾನ್ಯವಾಗಿದೆ.

ಕೆಲಕಾಲ ಮತದಾನ ಸ್ಥಗಿತ: ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಕಾದ್ರೊಳ್ಳಿ ಗ್ರಾಮದ ಮತಗಟ್ಟೆ ನಂ.139 ರಲ್ಲಿನ ವಿದ್ಯುನ್ಮಾನ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ತಾತ್ಕಾಲಿಕವಾಗಿ ಕೆಲಕಾಲ ಸ್ಥಗಿತಗೊಂಡಿತ್ತು. ಮತದಾನಕ್ಕಾಗಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಇದನ್ನು ಹೊರತು ಪಡಿಸಿದರೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಉತ್ತಮ ಮತದಾನ ಆಗುತ್ತಿದ್ದು, ಮತದಾನಕ್ಕೆ ಮತದಾರರು ಉತ್ಸಾಹ ತೋರುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ: ತುಮಕೂರು: ಕೊಪ್ಪ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ 300ಕ್ಕೂ ಹೆಚ್ಚು ಜನ

Last Updated :May 10, 2023, 11:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.