ETV Bharat / state

ಸಿದ್ಧರಾಮಯ್ಯ ಸಲಹೆಯಿಂದ ನಾನು ವಿಧಾನಪರಿಷತ್​ ಸ್ಥಾನಕ್ಕೆ ಆಯ್ಕೆಯಾದೆ: ಲಕ್ಷ್ಮಣ್​ ಸವದಿ

author img

By

Published : Apr 13, 2023, 10:58 PM IST

Updated : Apr 13, 2023, 11:04 PM IST

ನಾಳೆ ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ. ಕೊನೆಯದಾಗಿ ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ

ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ

ಚಿಕ್ಕೋಡಿ (ಬೆಳಗಾವಿ) : ಇವತ್ತು ನಾನು ಯಾರ ಹಂಗಿನಲ್ಲೂ ಇಲ್ಲ. ಕಳೆದ ಬಾರಿ ಸಿದ್ದರಾಮಯ್ಯನವರ ಸಹಾಯದಿಂದ ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದೆ ಎಂದು ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ. ಅಥಣಿ ಪಟ್ಟಣದಲ್ಲಿ ಬೆಂಬಲಿಗರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ಕುರಿತ ಸಭೆಯಲ್ಲಿ ನಾನು, ಸಿದ್ದರಾಮಯ್ಯ ಇಬ್ಬರೂ ಕುಳಿತು ಚರ್ಚೆ ಮಾಡುತ್ತಿದ್ದಾಗ, ಸೋಮವಾರ ಮತದಾನ ಇದೆ. ಏನು ತಯಾರಿ ಮಾಡಿದ್ದಿಯಾ ಎಂದು ನನ್ನನ್ನು ಕೇಳಿದರು. ನಾನು ನಮ್ಮ ಬಿಜೆಪಿಯ 120 ಶಾಸಕರಿದ್ದಾರೆ, ಆಯ್ಕೆ ಆಗುತ್ತೇನೆ ಎಂದು ಹೇಳಿದೆ. ಆದರೆ, ಸಿದ್ದರಾಮಯ್ಯ ಹೇ ನೀನು ಭ್ರಮೆಯಲ್ಲಿದ್ದಿ. ನಿನ್ನ ವಿರುದ್ಧ ಸಂಚು ಮಾಡಿದ್ದಾರೆ‌. ನಿಮ್ಮವರು ನಿನಗೆ ಹತ್ತು ಮತ ಕೂಡಾ ಹಾಕುವುದಿಲ್ಲ. ಹತ್ತು ಜನ ನಿನ್ನ ವಿರುದ್ಧ ಅಡ್ಡ ಮತ ಮಾಡುತ್ತಿದ್ದಾರೆ. ಇದರಿಂದ ನೀನು ಆಯ್ಕೆ ಆಗುವುದಿಲ್ಲ ಎಂದರು.

ಇದಕ್ಕೆ ಏನು ಮಾಡಬೇಕು ಎಂದು ಕೇಳಿದೆ. ಅದಕ್ಕವರು ನಾವು ಯಾರೂ ಮತ ಹಾಕಲ್ಲ. ನೀನು ಇದರಿಂದ ಆಯ್ಕೆ ಆಗುತ್ತಿ ಎಂದರು. ಸಿದ್ದರಾಮಯ್ಯ ಸೇರಿ ಅಂದು ಕಾಂಗ್ರೆಸ್‌ನ 79 ಶಾಸಕರು ಗೈರಾದರು. ಇದರಿಂದಾಗಿ ಚುನಾವಣೆಯಲ್ಲಿ ನಾನು ಆಯ್ಕೆಯಾದೆ. ಇದನ್ನು ತಿಳಿದು ಕುಮಾರಸ್ವಾಮಿ ಸಹಾಯ ಮಾಡಿದರು. ಜಿ.ಟಿ.ದೇವೇಗೌಡ ನನಗೆ ಮತ ನೀಡಿ ನನ್ನ ಗೆಲುವಿಗೆ ಕಾರಣರಾದರು. ಇನ್ನೊಂದು ಮತ ಹಾಕಿ ಶರತ್​ ಬಚ್ಚೇಗೌಡ ಸಹಾಯ ಮಾಡಿದ್ದಾರೆ. ಅವರ ತಂದೆ ಬಚ್ಚೇಗೌಡ ಅವರಿಗೆ ನಾನು ಕರೆ ಮಾಡಿ ಮತ ಕೇಳಿದ್ದೆ. ಅವರೂ ನನ್ನ ನೆರವಿಗೆ ಬಂದರು. ಇದರಿಂದಾಗಿ ನಾನು 124 ಮತಗಳಿಂದ ಆಯ್ಕೆಯಾದೆ. ಇದರಲ್ಲಿ ಆರು ಜನ ನಮ್ಮವರೇ ಮೋಸ ಮಾಡಿದರು ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ಬಿಜೆಪಿ ಪಕ್ಷವನ್ನು ನಾಳೆ ಬಿಡುತ್ತೇನೆ. ಈ ಬಾರಿ ನನಗೆ ಅವಕಾಶ ಮಾಡಿ ಕೊಡಿ. ನಾಳೆ ನಾನು ಬೆಂಗಳೂರಿಗೆ ಹೋಗುತ್ತೇನೆ. ರಾಜಕೀಯವಾಗಿ ಕಷ್ಟದಲ್ಲಿದ್ದೇನೆ, ಕೆಲವರು ಸಹಾಯ ಮಾಡಿದ್ದಾರೆ. ನನ್ನನ್ನು ಕಾಂಗ್ರೆಸ್‌, ಜೆಡಿಎಸ್‌ನವರು ಸಂಪರ್ಕ ಮಾಡುತ್ತಿದ್ದಾರೆ. ಯಾವ ಪಕ್ಷ ಸೇರ್ಪಡೆ ಆಗಬೇಕು ಎಂದು ನಿಮ್ಮ ಅಭಿಪ್ರಾಯ ಕೇಳುತ್ತಿದ್ದೇನೆ ಎಂದು ಹೇಳಿದರು.

ಸವದಿ ಶಪಥ: ಇವತ್ತಿನಿಂದ ನಾನು ಹಾರ, ಶಾಲು ಸ್ವೀಕಾರ ಮಾಡುವುದಿಲ್ಲ. ಗೆದ್ದ ನಂತರವೇ ನೀವು ನನಗೆ ಸನ್ಮಾನ ಮಾಡಬೇಕು. ಇಲ್ಲವೇ ನನ್ನ ಹೆಣದ ಮೇಲೆ ಹಾರ ಹಾಕಬೇಕು ಎಂದರು.

2019 ಉಪಚುನಾವಣೆ ಸಮಯದಲ್ಲಿ ಯಡಿಯೂರಪ್ಪ ನನ್ನ ಮನೆಗೆ ಬಂದರು. ಉಪಹಾರ ವ್ಯವಸ್ಥೆ ಮಾಡಿದೆ. ಅವರು ಉಪಹಾರ ಮಾಡ್ಲಿಲ್ಲ. ನಾನು ಯಾಕೆ ಸೇವನೆ ಮಾಡುತ್ತಿಲ್ಲ ಸರ್ ಎಂದು ಕೇಳಿದೆ. ಅವರು ನನ್ನ ಪಕ್ಕಕ್ಕೆ ಕರೆದರು. ಬಾ ಇಲ್ಲಿ ಅಂದ್ರು. ಕಾಗವಾಡ ಅಥಣಿ ನೀನು ಗೆಲ್ಲಿಸಿ ಕೊಡಬೇಕು ಎಂದು ಹೇಳಿದರು. ನಾನು ಸರಿ ಸರ್ ಎಂದೆ . ಆ ಸಂದರ್ಭದಲ್ಲಿ ಯಡಿಯೂರಪ್ಪ 2023 ಚುನಾವಣೆಯಲ್ಲಿ ನಿನಗೆ ಟಿಕೆಟ್ ಎಂದು ಮಾತು ನೀಡಿದರು. ಅವರು ಮಾತು ನೀಡಿಲ್ಲ ಎಂದು ಹೇಳಿದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ನಾನು ಸುಳ್ಳು ಹೇಳುತ್ತೇನೆ ಎಂದರೆ ಬನ್ನಿ ಮಂಜುನಾಥನ ಸನ್ನಿಧಿಗೆ ಎಂದರು.

ಇದನ್ನೂ ಓದಿ: ಅರಸೀಕೆರೆಯಲ್ಲಿ ಎನ್.ಆರ್.ಸಂತೋಷ್​ಗೆ ಬಿಜೆಪಿ ಟಿಕೆಟ್​ ಮಿಸ್​: ಪತ್ನಿ, ಹಸುಗೂಸಿನೊಂದಿಗೆ ಮತಬೇಟೆ

Last Updated :Apr 13, 2023, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.