ETV Bharat / state

25 ಸಾವಿರ ಸ್ಮಾರಕಗಳ ರಕ್ಷಣೆಗೆ ಕ್ರಮ, ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಹೆಚ್.ಕೆ.ಪಾಟೀಲ್

author img

By ETV Bharat Karnataka Team

Published : Dec 5, 2023, 5:59 PM IST

Govt will take care of monuments-H.K.Patil: ರಾಜ್ಯದ 25 ಸಾವಿರಕ್ಕೂ ಅಧಿಕ ಸ್ಮಾರಕಗಳ ರಕ್ಷಣೆಗೆ ಸರ್ಕಾರ ಕ್ರಮ ವಹಿಸಿದೆ ಎಂದು ವಿಧಾನಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್​ ತಿಳಿಸಿದರು.

Etv Bharat
Etv Bharat

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ವಿಧಾನಸಭೆ ಕಲಾಪ

ಬೆಳಗಾವಿ/ಬೆಂಗಳೂರು: ರಾಜ್ಯದಲ್ಲಿರುವ 25 ಸಾವಿರಕ್ಕೂ ಹೆಚ್ಚಿನ ಸ್ಮಾರಕಗಳ ರಕ್ಷಣೆಗೆ ಸರ್ಕಾರ ಕ್ರಮ ವಹಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಇಂದು ವಿಧಾನಸಭೆಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆ ಶಾಸಕರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಮಾರಕಗಳ ದತ್ತು ತೆಗೆದುಕೊಳ್ಳುವ ಯೋಜನೆ ಜಾರಿಯಲ್ಲಿದೆ. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕರ್ನಾಟಕ ಪ್ರವಾಸೋದ್ಯಮ ನೀತಿ 2020-26ರಡಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸಾಹಸ, ಕೃಷಿ, ಮನರಂಜನಾ, ಕ್ಯಾರವಾನ್, ಸಾಂಸ್ಕೃತಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಗ್ರಾಮ, ಪರಿಸರ, ಪಾರಂಪರಿಕ, ಹೋಂ ಸ್ಟೇ, ಹೋಟೆಲ್, ಹೌಸ್ ಬೋಟ್, ವಸ್ತು ಸಂಗ್ರಹಾಲಯ, ಗ್ಯಾಲರಿ, ರೋಪ್ ವೇ, ಧ್ವನಿ ಮತ್ತು ಬೆಳಕು, ಥೀಮ್ ಪಾರ್ಕ್ ಸೇರಿದಂತೆ 26 ರೀತಿಯ ಪ್ರವಾಸಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬರುವ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಸಹಾಯಧನ ಪ್ರೋತ್ಸಾಹಕಗಳು ಮತ್ತು ರಿಯಾಯಿತಿಗಳನ್ನು ನೀಡಲಾಗಿದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, 2012-13ರಲ್ಲಿ ಮೂಡುಬಿದರೆ ಕ್ಷೇತ್ರದ ಸಸಿಹಿತ್ಲು ಕಡಲ ತೀರದಲ್ಲಿ ಅಂತರರಾಷ್ಟ್ರೀಯ ಸರ್ಫಿಂಗ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಫಿಂಗ್‌ನಂತಹ ಸಾಹಸ ಕ್ರೀಡೆಯ ಉತ್ತೇಜನಕ್ಕೆ ಸರ್ಕಾರ ಮುಂದಾಗಬೇಕು. ಸಸಿಹಿತ್ಲು ಪ್ರದೇಶದಲ್ಲಿನ ಕುಡಿಯುವ ನೀರು ಹಾಗೂ ಬೀದಿ ದೀಪ ಅಳವಡಿಸುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿದರು.

ಜೈನಕಾಶಿ ಮೂಡುಬಿದಿರೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ: ಜೈನ ಕಾಶಿ ಮೂಡಬಿದಿರೆಯ ಯಾತ್ರಿ ನಿವಾಸಕ್ಕೆ 15 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 70 ಲಕ್ಷ ರೂ ಮಂಜೂರಾಗಿದ್ದು, ಸರ್ಕಾರದಿಂದ 52.50 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ. ಸಸಿಹಿತ್ಲು ಅಭಿವೃದ್ದಿ ಕಾಮಗಾರಿಗೆ 25 ಲಕ್ಷ ರೂ ಮೀಸಲಿರಿಸಿದ್ದು, ಆದ್ಯತೆಯ ಮೇರೆಗೆ ಶೀಘ್ರವೇ ಕೈಗೆತ್ತಿಕೊಂಡು ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ಉತ್ತರಿಸಿದರು.

ಮೂಡಬಿದರೆ ಕ್ಷೇತ್ರದ ಕಲಕಕೆರೆ ನಿಸರ್ಗಧಾಮ ಮತ್ತು ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮಕ್ಕೆ 1 ಕೋಟಿ ರೂ., ಶಿರ್ತಾಡಿ ಗ್ರಾಮದ ಪ್ರವಾಸಿ ತಾಣ ಕೊಣಜಿಕಲ್ಲು ಗುಡ್ಡವನ್ನು ಅಭಿವೃದ್ಧಿಪಡಿಸಲು 50 ಲಕ್ಷ ರೂ, ಹಾಗೂ ಮೂಡಬಿದಿರೆಯ ಸಾವಿರ ಕಂಬದ ಬಸದಿ ಹಾಗೂ ಇತರೆ ಜೈನ ಮಂದಿರಗಳ ಅಭಿವೃದ್ದಿಗೆ 50 ಲಕ್ಷ ರೂ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.

ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕಲೇಶಪುರ ತಾಲ್ಲೂಕಿನ ಮರಗುಂದ, ಮಂಜರಾಬಾದ್ ಕೋಟೆ, ಮೂಕನಮನೆ ಜಲಪಾತ, ಅಬ್ಬಿ ಜಲಪಾತ, ಬಿಸಿಲೆ ಘಾಟ್, ಪಾಂಡವರ ಬೆಟ್ಟ, ಮೂರ್ಕಣ್ ಬೆಟ್ಟ, ಜೇನುಕಲ್ಲು ಬೆಟ್ಟ, ಗುಡ್ಡ ಬಸವಣ್ಣ, ಪಾಟ್ಲೆಬೆಟ್ಟ ಪ್ರದೇಶಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ ಎಂದರು.

ಕೇಬಲ್ ಕಾರ್ ಪ್ರಾರಂಭಿಸಲು ಯೋಜನೆ: ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಚ್.ಕೆ.ಪಾಟೀಲ್, ಯಲ್ಲಮ್ಮನಗುಡ್ಡ, ಮಧುಗಿರಿ, ಅಂಜನಾದ್ರಿ, ನಂದಿಬೆಟ್ಟ ಹಾಗೂ ಗಗನ ಚುಕ್ಕಿಯಲ್ಲಿ ಕೇಬಲ್ ಕಾರ್ ಪ್ರಾರಂಭಿಸಲು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

2023-24ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸರ್ಕಾರದಿಂದ 339.54 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಪೈಕಿ 90 ಕೋಟಿ ರೂ.ವನ್ನು ಬಂಡವಾಳ ವೆಚ್ಚಗಳ ಲೆಕ್ಕ ಶೀರ್ಷಿಕೆಗಳಡಿ ಈಗಾಗಲೇ ಒದಗಿಸಲಾಗಿದೆ ಎಂದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಜಲ ಸಾಹಸ ಕ್ರೀಡೆಗಳನ್ನು ಕಲಿಯಲು ರಾಜ್ಯದಿಂದ ಹೊರ ರಾಷ್ಟ್ರಗಳಿಗೆ ಅನೇಕರು ತೆರಳುತ್ತಾರೆ. ರಾಜ್ಯದಲ್ಲಿ ಸುಮಾರು 300 ಕಿ.ಮೀ ಉದ್ದದ ಕರಾವಳಿ ತೀರವಿದೆ. ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಲಸಾಹಸ ಕ್ರೀಡೆಗಳ ಪ್ರವಾಸೋದ್ಯಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಕೋರಿದರು.

ರಾಜ್ಯದ ಕರಾವಳಿ ಜಿಲ್ಲೆಗಳ ಕಡಲ ಕಿನಾರೆ, ಧಾರ್ಮಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ಹೆಸರಾಗಿವೆ. ಈ ಮೂರು ಅಂಶಗಳನ್ನು ಮುಂದಿಟ್ಟುಕೊಂಡು, ಕರಾವಳಿ ಅಭಿವೃದ್ದಿ ಮಂಡಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆ ರೂಪಿಸುವಂತೆ ಸ್ಪೀಕರ್ ಯು.ಟಿ.ಖಾದರ್ ಸರ್ಕಾರಕ್ಕೆ ಸೂಚನೆ ನೀಡಿದರು.

ಇದನ್ನೂ ಓದಿ: ಆರ್ಥಿಕ ಇಲಾಖೆ ಅನುಮತಿ ಸಿಗುತ್ತಿದ್ದಂತೆ ಹಂಸಧ್ವನಿ ಕಿವುಡು, ಮೂಕ ಮಕ್ಕಳ ವಸತಿ ಶಾಲೆ ಪುನರಾರಂಭ: ಲಕ್ಷ್ಮಿ ಹೆಬ್ಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.