ಬೆಳಗಾವಿ: ಬೆಳಗಾವಿಯಿಂದಲೇ ಬಂಡಾಯ ಆರಂಭ ಆಗುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ತಿರುಗೇಟು ಕೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ, ಯಾರ ಬಗ್ಗೆಯೂ ಏನೂ ಇಲ್ಲ. 136 ಶಾಸಕರೆಲ್ಲರೂ ನಮ್ಮವರೆ.. ಬಿಜೆಪಿಯವರಿಗೆ ಒಂದು ನ್ಯೂಸ್ ಬೇಕು. ಅದಕ್ಕೆ ಈ ರೀತಿ ಏನೆನೋ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲರ ಭಾಷಣ ಕೇಳಿದ್ದೀರಾ.. ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಪಟೇಲರು ಮಾಡಿದ ಭಾಷಣದ ಡಾಕ್ಯುಮೆಂಟ್ ತೆಗೆದು ಓದಲಿ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು ಕೊಟ್ಟರು.
ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಶಾಸಕರು ತಮ್ಮ ಸ್ವಾಗತಕ್ಕೆ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, ಸತೀಶ್ ಅವರ ಜೊತೆಗೆ ನಿನ್ನೆ ಮೊನ್ನೆ ಎಲ್ಲಾ ಗಂಟೆಗಟ್ಟಲೆ ಕುಳಿತು ಮಾತನಾಡಿದ್ದು, ಅವರು ಮೈಸೂರಿನಲ್ಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಇದು ಪೂರ್ವ ನಿಯೋಜಿತ ಕಾರ್ಯಕ್ರಮ ಅಲ್ಲ. ನಿನ್ನೆ ರಾತ್ರಿ ಬೆಳಗಾವಿಗೆ ಬರಲು ನಿರ್ಧರಿಸಿದ್ದೇನೆ. ನಾನು ಬರುವ ಬಗ್ಗೆ ಯಾರಿಗೂ ಮಾಹಿತಿ ಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದರು.
ಹುಕ್ಕೇರಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಲು ಬಂದಿದ್ದೇನೆ. ಬಳಿಕ ಹುಕ್ಕೇರಿ ಹಿರೇಮಠಕ್ಕೆ ತೆರಳಲಿದ್ದೇನೆ. ಜಲಸಂಪನ್ಮೂಲ ಇಲಾಖೆಯ ಈ ಭಾಗದ ಕೆಲ ಯೋಜನೆಗಳ ಬಗ್ಗೆ ಪ್ರಗತಿಪರಿಶೀಲನೆ ಮಾಡಲಿದ್ದೇನೆ ಎಂದರು.
ಸತೀಶ್ ಜಾರಕಿಹೊಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಅವರ ಮತ್ತು ನನ್ನ ನಡುವೆ ಏನೂ ಇಲ್ಲ. ಇತ್ತೀಚೆಗೆ ಅವರು ನನ್ನನ್ನು ಭೇಟಿ ಮಾಡಿದ್ದರು. ಆದರೆ ಶಾಸಕರ ಜತೆಗೆ ಪ್ರವಾಸ ಹೋಗುವ ಕುರಿತು ನನ್ನ ಜತೆಗೆ ಚರ್ಚೆ ಮಾಡಿಲ್ಲ. ನನ್ನ ಭೇಟಿಯಾದಾಗಲೂ ಪ್ರವಾಸದ ಕುರಿತು ಮಾತನಾಡಿಲ್ಲ ಎಂದು ಹೇಳಿದರು.
ಓದಿ: ಬಿಜೆಪಿ- ಜೆಡಿಎಸ್ ಹತಾಶೆಗೆ ಮೇಜರ್ ಆಪರೇಶನ್ ಮಾಡಬೇಕು: ಡಿಸಿಎಂ ಡಿ ಕೆ ಶಿವಕುಮಾರ್