ETV Bharat / state

ಡಿ.ಕೆ.ಶಿವಕುಮಾರ್ ಪ್ರಕರಣ: ಬಿಜೆಪಿಯಿಂದ ನಿಲುವಳಿ ಸೂಚನೆ, ಚರ್ಚೆಗೆ ಅವಕಾಶ ನಿರಾಕರಿಸಿದ ಸಭಾಪತಿ

author img

By ETV Bharat Karnataka Team

Published : Dec 15, 2023, 3:35 PM IST

Updated : Dec 15, 2023, 4:01 PM IST

ಡಿಕೆಶಿ ವಿರುದ್ಧದ ಪ್ರಕರಣದ ಸಿಬಿಐ ತನಿಖೆಯ ಅನುಮತಿ ವಾಪಸ್ ಪಡೆದ​ವಿಚಾರವಾಗಿ ಬಿಜೆಪಿ ಸದಸ್ಯರು ಪರಿಷತ್‌ನಲ್ಲಿ ಇಂದು ನಿಲುವಳಿ ಸೂಚನೆ ಮಂಡಿಸಿದರು. ಆದರೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಚರ್ಚೆಗೆ ಅವಕಾಶ ನಿರಾಕರಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ

ವಿಧಾನ ಪರಿಷತ್ ಕಲಾಪ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮದ ಕುರಿತು ಚರ್ಚಿಸಲು, ಅವಕಾಶ ಕೋರಿ ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿ ರೂಲಿಂಗ್ ನೀಡಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕಡೆಯ ದಿನವಾದ ಇಂದು ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಸಾರ್ವಜನಿಕ ಮಹತ್ವದ ವಿಷಯದಡಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ ಪಡೆದ ಸರ್ಕಾರದ ಕ್ರಮದ ಕುರಿತು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿ‌ದರು.

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ಸಿಬಿಐ ತನಿಖೆ ಈಗಾಗಲೇ ಶೇ.90ರಷ್ಟು ಪೂರ್ಣಗೊಂಡಿದೆ. ಈ ಹಂತದಲ್ಲಿ ಕಳೆದ ಸರ್ಕಾರ ನೀಡಿದ್ದ ಅನುಮತಿಯನ್ನು ಈ ಸರ್ಕಾರ ರದ್ದುಗೊಳಿಸಿದೆ. ಅತ್ಯಂತ ಪ್ರಭಾವಿ ವ್ಯಕ್ತಿಯ ವಿರುದ್ಧ ತನಿಖೆ ನಡೆಯುತ್ತಿತ್ತು. ಉಪಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧದ ಆರೋಪ ಇದು. ಹಾಗಾಗಿ ಈ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಈ ವಿಷಯವನ್ನು ನಿಲುವಳಿ ಸೂಚನೆ ಮೂಲಕ ತರುವ ಪ್ರಯತ್ನ ಆಶ್ಚರ್ಯ ತಂದಿದೆ. ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಪಕ್ಷದ ನಾಯಕರಾಗಿ, ಸಭಾ ನಾಯಕರಾಗಿ ಕೆಲಸ ಮಾಡಿದ್ದವರು. ಈ ವಿಷಯದಲ್ಲಿ ತಂದಿದ್ದು ಅಚ್ಚರಿಯಾಗಿದೆ. ಹಲವು ವಿಷಯಗಳನ್ನು ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಹಲವಾರು ವಿಚಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭಿನ್ನ ನಿಲುವುಗಳನ್ನು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರ ಹಲವಾರು ಸಂದರ್ಭದಲ್ಲಿ ಸಿಬಿಐ, ಇಡಿಗಳನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ ಎನ್ನುವ ಆಪಾದನೆಯನ್ನು ನಾವು ಮಾಡುತ್ತಿದ್ದೇವೆ. ಬಿಜೆಪಿಯವರೂ ಕೂಡ ರಾಜ್ಯ ಸರ್ಕಾರಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಹೊಸತೇನಲ್ಲ. ಆದರೆ ಈಗ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಡಿರುವ ಪ್ರಸ್ತಾಪ ನಮ್ಮ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡಾವಳಿಯ ಯಾವ ನಿಯಮದಲ್ಲಿ ಚರ್ಚೆಗೆ ಬರಲಿದೆ ಎಂದು ಪ್ರಶ್ನಿಸಿದರು.

ಯಾವ ವಿಚಾರ ಈಗಾಗಲೇ ಕೋರ್ಟ್​ನಲ್ಲಿ ಇದೆಯೋ ಅದನ್ನು ಚರ್ಚೆ ಮಾಡಲು ನಿಲುವಳಿ ಸೂಚನೆ ಮಂಡಿಸಿದ್ದಾರೆ. ಈಗ ಚರ್ಚೆಗೆ ತೆಗೆದುಕೊಂಡು ಬಂದರೆ ಒಂದು ಕಡೆ ನಿಮ್ಮ ಪಕ್ಷದವರೇ ಕೋರ್ಟಿಗೆ ಹೋಗಿದ್ದಾರೆ. ಹಾಗಿರುವಾಗ ನಿಮ್ಮ ಪಕ್ಷದ ವತಿಯಿಂದ ನಿಲುವಳಿ ಸೂಚನೆಯನ್ನು ಕೊಟ್ಟಿದ್ದೀರಿ. ಇದು ನೈತಿಕವಾಗಿಯೂ ತಾಂತ್ರಿಕವಾಗಿಯೂ ಕಾನೂನಾತ್ಮಕವಾಗಿಯೂ ಸರಿಯಲ್ಲ. ಇದು ನಮ್ಮ ನಡಾವಳಿಗಳ ವಿರುದ್ಧ ಆಗಲಿದೆ. ಹಾಗಾಗಿ ಈ ಪ್ರಸ್ತಾವನೆ ನಿಯಮಾತ್ಮಕವಾಗಿ ಆಗುವುದಿಲ್ಲ. ಹಾಗಾಗಿ, ಈ ನಿಲುವಳಿಯನ್ನು ಕೈಬಿಡಬೇಕು. ಇದು ಕಾನೂನಾತ್ಮಕವಾಗಿ ಬರುವುದಿಲ್ಲ. ಹಾಗಾಗಿ, ಪರಿಶೀಲಿಸಿ ಸೂಕ್ತ ನಡೆಯ ತೆಗೆದುಕೊಳ್ಳುವಂತೆ ಸಭಾಪತಿಗಳಿಗೆ ಮನವಿ ಮಾಡಿದರು.

ಸರ್ಕಾರದ ವಾದವನ್ನು ಒಪ್ಪಿದ ಸಭಾಪತಿ ಬಸವರಾಜ ಹೊರಟ್ಟಿ, ಈಗ ಅವಕಾಶ ನೀಡುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಲಿದೆ. ನ್ಯಾಯಾಂಗ ನಿಂದನೆ ಆಗಲಿದೆ. ಹಾಗಾಗಿ ಚರ್ಚೆಗೆ ಅವಕಾಶ ಕೊಡಲ್ಲ ಎಂದು ರೂಲಿಂಗ್ ನೀಡಿದರು. ಆದರೂ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಚರ್ಚೆಗೆ ಅವಕಾಶ ನೀಡಲು ಪಟ್ಟುಹಿಡಿದರು. ಇದಕ್ಕೆ ಕಾಂಗ್ರೆಸ್ ವಿಪ್ ಸಲೀಂ ಆಕ್ಷೇಪಿಸಿ, ಸಭಾಪತಿಗಳಿಗೆ ನಿರ್ದೇಶನ ನೀಡುವಂತೆ ಹೇಳಿದರು. ಇದಕ್ಕೆ ಸಭಾಪತಿ ಗರಂ ಆಗುತ್ತಾ, ನನಗೆ ಸಾಲಿ ಕಲಿಸೋಕ್ ಬರ್ತೀಯಾ? ಎಂದು ಗದರಿದರು. ಈಗಾಗಲೇ ರೂಲಿಂಗ್ ನೀಡಿದ್ದೇನೆ. ಇದು ಇಲ್ಲಿಗೆ ಮುಗಿಯಿತು ಎಂದು ಪ್ರಕಟಿಸಿದರು.

ಕಾಂಗ್ರೆಸ್-ಬಿಜೆಪಿ ಜಟಾಪಟಿ: ಆದರೂ ಪಟ್ಟುಬಿಡದ ರವಿಕುಮಾರ್, ವಿಷಯ ಕೋರ್ಟ್​ನಲ್ಲಿದ್ದರೆ ಸರ್ಕಾರ ಉತ್ತರ ಯಾಕೆ ಕೊಟ್ಟಿದೆ?. ಚರ್ಚೆಗೆ ಅವಕಾಶ ಕೊಡಿ ಎಂದರು. ಈ ವೇಳೆ ರೂಲಿಂಗ್ ನಂತರವೂ ಮಾತನಾಡಿ, ಸಭಾಪತಿಗಳಿಗೆ ಅಪಮಾನ ಮಾಡುತ್ತಿದ್ದೀರಿ ಎಂದು ಆಡಳಿತ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಕಿಡಿಕಾರಿದರು. ಮಾತು ವೈಯಕ್ತಿಕ ವಿಚಾರಗಳಿಗೆ ತಿರುಗಿ ಸದನದಲ್ಲಿ ಗದ್ದಲವೆದ್ದಿತು. ಕಾಂಗ್ರೆಸ್ ಬಿಜೆಪಿ ನಡುವೆ ಜಟಾಪಟಿ, ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಸಭಾಪತಿ ಬಸವರಾಜ ಹೊರಟ್ಟಿ ಈ ವಿಷಯ ಮುಗಿದಿದೆ ಎಂದು ಪ್ರಕಟಿಸಿ, ಗದ್ದಲದ ನಡುವೆಯೇ ಬಿಲ್ ಮಂಡಿಸಲು ಸೂಚಿಸಿ ಗದ್ದಲ ತಿಳಿಗೊಳಿಸಿದರು.

ಇದನ್ನೂ ಓದಿ: ಗಾಂಧಿ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿಗಾಗಿ ಶಾಸಕ ಅಭಯ ಪಾಟೀಲ್​ ಮಂಡಿಸಿದ ಖಾಸಗಿ ಬಿಲ್ ಅಂಗೀಕಾರ

Last Updated :Dec 15, 2023, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.