ETV Bharat / state

ಕಾಂಗ್ರೆಸ್ ಪಕ್ಷ ರೈಲ್ವೆ ಇಲಾಖೆಯನ್ನು ತುಕ್ಕು ಹಿಡಿಯುವಂತೆ ಮಾಡಿತ್ತು: ಈರಣ್ಣ ಕಡಾಡಿ

author img

By

Published : Aug 6, 2023, 6:37 PM IST

ಬಜೆಟ್​ನಲ್ಲಿ ದಾಖಲೆಯ 2.40 ಲಕ್ಷ ಕೋಟಿ ರೂ. ನೀಡಿ ರೈಲ್ವೆ ಆಧುನೀಕರಣ ಮಾಡಿದ್ದರಿಂದಲೇ ಇಂದು ಭಾರತೀಯ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣದ ಸ್ವರೂಪದಲ್ಲಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭಾಷಣ

ಬೆಳಗಾವಿ : "150 ವರ್ಷಗಳ ಇತಿಹಾಸ ಹೊಂದಿರುವ ರೈಲ್ವೇ ಇಲಾಖೆಯನ್ನು ತುಕ್ಕು ಹಿಡಿಯುವಂತೆ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಇದರ ಮನ್ವಂತರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಾಯಿತು" ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಅಮೃತ್ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ಇಂದು ಜಿಲ್ಲೆಯ ಘಟಪ್ರಭಾ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ನಡೆದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಬೆಳಗಾವಿ ಜಿಲ್ಲೆಯ ಘಟಪ್ರಭಾ ಹಾಗೂ ಗೋಕಾಕ್​ ರೋಡ ರೈಲು ನಿಲ್ದಾಣಗಳು ಸೇರಿದಂತೆ ದೇಶದ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರಲ್ಲಿ ಕರ್ನಾಟಕ‌ದ 13 ನಿಲ್ದಾಣಗಳು ಆಯ್ಕೆಯಾಗಿದ್ದು, ಜಿಲ್ಲೆಯ ಎರಡು ನಿಲ್ದಾಣಗಳು ಸೇರಿವೆ" ಎಂದು ಹೇಳಿದರು.

"ರೈಲ್ವೆ ನಿಲ್ದಾಣ ಎಂದರೆ ಮೂಗು ಮುಚ್ಚಿಕೊಂಡು ಹತ್ತುವ ಒಂದು ಕಾಲವಿತ್ತು. ಗಬ್ಬು ನಾರುತ್ತಿದ್ದವು. ಆದರೆ ಈಗ ಮೊದಲಿನ ವಿಮಾನ ನಿಲ್ದಾಣಗಳಂತೆ ರೈಲ್ವೆ ನಿಲ್ದಾಣಗಳು ಅಭಿವೃದ್ಧಿ ಆಗಿವೆ. ಇನ್ನು ವಿಮಾನ ನಿಲ್ದಾಣಗಳು ಯಾವ ರೀತಿ ಅಭಿವೃದ್ಧಿ ಆಗಿರಬಹುದು ಎಂದು ನೀವೇ ಯೋಚಿಸಿ. ಇತ್ತೀಚಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಅಭಿವೃದ್ಧಿಗೂ ಹಣ ಬಿಡುಗಡೆಯಾಗಿದೆ. ‌ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಸೌಲಭ್ಯಗಳು ಇಲ್ಲಿ ಸಿಗುವಂತಹ ವ್ಯವಸ್ಥೆ ಈಗಿನಿಂದಲೇ ಪ್ರಾರಂಭವಾಗಿದೆ" ಎಂದು ಈರಣ್ಣ ಕಡಾಡಿ ಹೇಳಿದರು.

ಸಂಸದೆ ಮಂಗಲಾ ಅಂಗಡಿ, ಶಾಸಕರಾದ ದುರ್ಯೋಧನ ಐಹೊಳೆ, ವಿಠ್ಠಲರಾವ ಹಲಗೇಕರ, ಮಾಜಿ ಶಾಸಕ ಎಂ.ಎಲ್.‌ಮುತ್ತೆಣ್ಣವರ, ಹುಬ್ಬಳಿ ನೈರುತ್ಯ ರೈಲ್ವೆ ಇಲಾಖೆಯ ಮುಖ್ಯ ವಾಣಿಜ್ಯ ಪ್ರಬಂಧಕ ಅನುಪ ದಯಾನಂದ, ಸುರೇಶ ಪಾಟೀಲ, ಮಹಾಂತೇಶ ವಕ್ಕುಂದ ಸೇರಿದಂತೆ ಮತ್ತಿತರರು ಇದ್ದರು.

ಹಂತ ಹಂತವಾಗಿ ರೈಲ್ವೇ ಅಭಿವೃದ್ಧಿ ಕಾಮಗಾರಿ ಆರಂಭ: ಇನ್ನೊಂದೆಡೆ, "ಅಳ್ನಾವರ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಮಾಡಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಹಿಂದಿನ ಸರ್ಕಾರಗಳಲ್ಲಿ ಇದಕ್ಕಾಗಿ ಕಲ್ಪನೆಗಳನ್ನು ಕೊಟ್ಟಿದ್ದರೂ ಅಭಿವೃದ್ಧಿ ಆಗಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿ ಆರಂಭವಾಯಿತು. ಇವತ್ತು ಇಡೀ ದೇಶದಲ್ಲಿ ಸಣ್ಣ ಪಟ್ಟಣಗಳ 508 ರೈಲ್ವೇ ನಿಲ್ದಾಣ ನವೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಧಾರವಾಡದ ಅಳ್ನಾವರ ರೈಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ರೈಲ್ವೇ ಎಂದರೆ ಜನ ಬಂದೇ ಬರ್ತಾರೆಂದು ಭಾವಿಸಿ ಸ್ವಚ್ಛತೆ ಮಾಡುತ್ತಿರಲಿಲ್ಲ. ಮೋದಿ ಬಂದ ಮೇಲೆ ಸ್ವಚ್ಛತೆಗೆ ವೇಗ ಕೊಟ್ಟರು. ದೊಡ್ಡ ನಗರದ ರೈಲ್ವೇ ನಿಲ್ದಾಣಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡುತ್ತೇವೆ. ಇವುಗಳು ಜನಾಕರ್ಷಣೆಯ ಕೇಂದ್ರವಾಗಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: Prahlad Joshi: ಮೋದಿ ಸರ್ಕಾರ ಬಂದ ನಂತರ ಹಂತಹಂತವಾಗಿ ರೈಲ್ವೇ ಅಭಿವೃದ್ಧಿ ಕಾಮಗಾರಿ ಆರಂಭ- ಪ್ರಹ್ಲಾದ್​ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.