ETV Bharat / state

ದೇಶದಲ್ಲಿ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ರಾಜಕೀಯ: ಪಂಜಾಬ್ ಸಿಎಂ

author img

By

Published : Apr 19, 2023, 7:42 PM IST

ಕರ್ನಾಟಕದಲ್ಲಿ ಕೆಲವೆಡೆ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ವಾತಾವರಣವಿದೆ ಎಂದು ಭಗವಂತ ಮಾನ್ ಹೇಳಿದರು.

Punjab CM Bhagwant  Maan
ಪಂಜಾಬ್ ಸಿಎಂ ಭಗವಂತ ಮಾನ್

ಬೆಳಗಾವಿ : ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದು, ಕರ್ನಾಟಕದಲ್ಲಿಯೂ ಅದನ್ನೇ ಮುಂದುವರಿಸಿವೆ.‌ ಇದರ ವಿರುದ್ಧ ಜನರು ಜಾಗೃತರಾಗಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದ್ದಾರೆ. ಇಂದು (ಬುಧವಾರ) ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕೆಲವೆಡೆ ಪ್ರಚಾರ ನಡೆಸಿದ್ದೇನೆ. ಆಮ್ ಆದ್ಮಿ ಪರವಾಗಿ ಉತ್ತಮ ವಾತಾವರಣ ಇದೆ. ಜನರು ಬದಲಾವಣೆ ಬಯಸಿದ್ದಾರೆ. ಮೇ.10ಕ್ಕೆ ಕರ್ನಾಟಕದಲ್ಲಿ ವಿಧಾನಭಾ ಚುನಾವಣೆ ನಡೆಯಲಿದೆ. ಅದೇ ದಿನ ಪಂಜಾಬ್​ನಲ್ಲಿ ಉಪಚುನಾವಣೆ ನಡೆಯಲಿದೆ. ಆಮ್ ಆದ್ಮಿ ರಾಷ್ಟ್ರೀಯ ಪಕ್ಷ ಘೋಷಣೆಯಾದ ಮೇಲೆ ಮೊದಲನೇ ಚುನಾವಣೆ ನಡೆಯುತ್ತಿದೆ. ಆಮ್ ಆದ್ಮಿ ಮರ್ಯಾದೆಯ ಪಕ್ಷ. ನಮ್ಮ ನಾಯಕ ಅರವಿಂದ ‌ಕ್ರೇಜಿವಾಲ್ ದೆಹಲಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಇದರ ಪರಿಣಾಮ ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತದಿಂದ ಸರಕಾರ ರಚನೆ ಮಾಡಲು ಸಾಧ್ಯವಾಯಿತು ಎಂದರು.

ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ: ನಮ್ಮ ಪಕ್ಷ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಇದನ್ನು ಸಹಿಸದ ಬಿಜೆಪಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಸಿಸೋಡಿಯಾ ಮನೆಯ ಮೇಲೆ ದಾಳಿ ಮಾಡಿದರು. ಶಾಲೆ ನಿರ್ಮಾಣ ಮಾಡುತ್ತಿರುವ ಕಾರಣಕ್ಕೆ ದುರುದ್ದೇಶದಿಂದ ನೂರಾರು ಅಧಿಕಾರಿಗಳಿಂದ ದಾಳಿ ಮಾಡಿಸಿದರು. ಅವರಿಗೆ ದಿನಕ್ಕೆ‌ ನೀಡುವ ಸಂಬಳದಷ್ಟು ಕೂಡ ಅಲ್ಲಿ ಹಣ ಸಿಗಲಿಲ್ಲ. ಅದೇ ರೀತಿ ಈಗ ಕರ್ನಾಟಕದಲ್ಲಿಯೂ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲೆಕ್ಟೆಡ್ ಜನ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಸೆಲೆಕ್ಟೆಡ್ ಜನ ಅಲ್ಲ ಎಂದು ಮಾನ್​ ಕಿಡಿಕಾರಿದರು.

ಕರ್ನಾಟಕದಲ್ಲಿ ಕಬ್ಬಿಗೆ ಬೆಂಬಲ ಬೆಲೆ‌ ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಬರುವ ಮುನ್ನ ಒಂದು ವರ್ಷದ ಹಿಂದೆ ಕಬ್ಬಿನ ದರದ ಸಮಸ್ಯೆ ಇತ್ತು. ಒಂದು ವರ್ಷಕ್ಕೆ ಅಥವಾ ಎರಡು ವರ್ಷಕ್ಕೆ ಬಿಲ್ ರೈತರಿಗೆ ಸಿಗುತ್ತಿತ್ತು. ನಮ್ಮ ಸರಕಾರ ರಚನೆಯಾದ ಮೇಲೆ 3 ಸಾವಿರ ಕೋಟಿ ರೂ. ಬಿಲ್ ಪಾಸ್ ಮಾಡಿ ಈಗ ರೈತರಿಗೆ ನಿಗದಿತ ಸಮಯದಲ್ಲಿ ಕಬ್ಬಿನ ಬಿಲ್ ಸಿಗುತ್ತಿದೆ ಎಂದರು.

ಮುನ್ಸಿಪಲ್ ಕಾರ್ಪೊರೇಶನ್ ದೆಹಲಿಯಲ್ಲಿ ಆಮ್ ಆದ್ಮಿಗೆ ಸ್ಪಷ್ಟ ಬಹುಮತ ಸಿಕ್ಕರೂ ಬಿಜೆಪಿಯವರಿಗೆ ಆ ಸೋಲನ್ನು ಸ್ವೀಕರಿಸುವ ಮನೋಭಾವ ಇಲ್ಲ. ಆದ್ದರಿಂದ ಬಿಜೆಪಿಯವರೇ ಮೇಯರ್, ಉಪಮೇಯರ್ ಮಾಡಬೇಕೆಂದು ನ್ಯಾಯಾಲಯಕ್ಕೆ ಹೋದರು. ನಾವು ಸಮರ್ಥವಾಗಿ ನ್ಯಾಯಾಲಯದಲ್ಲಿ ಹೋರಾಡಿ ಸ್ಪಷ್ಟ ಬಹುಮತ ಸಾಧಿಸಿದ್ದೇವೆ. ನಮಗೆ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಅನುಮತಿ ಕೊಡಿ ಎಂದಾಗ ನ್ಯಾಯಾಲಯ ಸಮ್ಮತಿ ಸೂಚಿಸಿತು. ಬಿಜೆಪಿಯವರಿಗೆ ಸೋಲನ್ನು ಅರಗಿಸಿಕೊಳ್ಳುವ ಶಕ್ತಿಯೂ ಇರಬೇಕೆಂದು ವಾಗ್ದಾಳಿ ನಡೆಸಿದರು‌.

ಇದಕ್ಕೂ ಮುನ್ನ ಪಂಜಾಬ್​ ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಬಸವೇಶ್ವರ, ಸಂಗೊಳ್ಳಿ ರಾಯಣ್ಣನವರ ಮೂರ್ತಿ ನೀಡಿ ಬೆಳಗಾವಿ ಉತ್ತರ ಮತಕ್ಷೇತ್ರದ ಆಪ್ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಗೌರವಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಜಿಲ್ಲಾಧ್ಯಕ್ಷ ಶಂಕರ ಹೆಗಡೆ, ಬೈಲಹೊಂಗಲ ಅಭ್ಯರ್ಥಿ ಬಸನಗೌಡ ಚಿಕ್ಕನಗೌಡರ, ಮುಖಂಡ ರವೀಂದ್ರ ಬೆಲ್ಲದ ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ : ಸ್ವರೂಪ್‌ ನನ್ನ ಮಗನಿದ್ದಂತೆ, ನಾನೇ ಕುಮಾರಸ್ವಾಮಿಯವರಿಗೆ ಹೇಳಿ ಟಿಕೆಟ್‌ ಕೊಡಿಸಿದೆ: ಭವಾನಿ ರೇವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.