ETV Bharat / state

ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ.. ಕಲಾಪ ನಾಳೆಗೆ ಮುಂದೂಡಿಕೆ

author img

By

Published : Dec 19, 2022, 2:54 PM IST

ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

assembly session
ಕಲಾಪ

ಬೆಳಗಾವಿ: ಅಗಲಿದ ಗಣ್ಯರಿಗೆ ಸುವರ್ಣಸೌಧದ ವಿಧಾನಸಭೆ ಕಲಾಪದಲ್ಲಿ ಸಂತಾಪ ಸೂಚಿಸಲಾಯಿತು. ವಿಧಾನಸಭೆಯ ಹಾಲಿ ಉಪಸಭಾಧ್ಯಕ್ಷರಾಗಿದ್ದ ಆನಂದ ಮಾಮನಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಕಿ, ಲೋಕಸಭೆ ಮಾಜಿ ಸದಸ್ಯ ಕೋಳೂರು ಬಸವನಗೌಡ, ಮಾಜಿ ಸಚಿವರಾಗಿದ್ದ ಜಬ್ಬಾರಖಾನ್ ಹೊನ್ನಳ್ಳಿ, ಸುಧೀಂದ್ರರಾವ್ ಕಸ್ಬೆ ಮತ್ತು ವಿಧಾನಸಭೆಯ ಮಾಜಿ ಸದಸ್ಯರುಗಳಾಗಿದ್ದ ಎನ್.ಟಿ.ಬೊಮ್ಮಣ್ಣ, ಶ್ರೀಶೈಲಪ್ಪ ಬಿದರೂರು, ಕುಂಬ್ಳೆ ಸುಂದರರಾವ್, ಶಂಕರಗೌಡ ಎನ್.ಪಾಟೀಲ್ ನಿಧನ ಹೊಂದಿರುವುದಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚನೆ ಮಂಡಿಸಿ, ನಿಧನ ಹೊಂದಿದ ಆನಂದ ಮಾಮನಿ ಸೇರಿದಂತೆ ಗಣ್ಯರ ಹೆಸರುಗಳನ್ನು ಪ್ರಸ್ತಾಪಿಸಿ ಅವರ ಜೀವನ, ಸಾಧನೆಗಳನ್ನು ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಇದೇ ಸದನದ ಸದಸ್ಯರಾಗಿ ಉಪಸಭಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರು ಸಣ್ಣ ವಯಸ್ಸಿನಲ್ಲಿಯೇ ಸಾರ್ವಜನಿಕ ಜೀವನಕ್ಕೆ ಬಂದು ಅಲ್ಪಕಾಲದಲ್ಲಿಯೇ ಸಾಕಷ್ಟು ಸಾಧನೆ ಮಾಡಿದ್ದರು. ಭವ್ಯ ಭವಿಷ್ಯ ಇವರಿಗೆ ಕಾದಿತ್ತು. ಆದ್ರೆ, ಅನಾರೋಗ್ಯ ಅವರನ್ನು ನಮ್ಮೊಂದಿಗೆ ಇಲ್ಲವಾಗಿಸಿತು ಎಂದರು.

assembly session
ಬೆಳಗಾವಿ ಚಳಿಗಾಲದ ಅಧಿವೇಶ

ಅವರ ತಂದೆಯೂ ಸಹ ಇದೇ ಸದನದ ಉಪಸಭಾಧ್ಯಕ್ಷರಾಗಿದ್ದರು. ರೈಲಿನಲ್ಲಿ ಪಯಣಿಸುವಾಗ ತೊಂದರೆಯಾಗಿ ದಾರಿ ಮಧ್ಯೆಯೇ ತೀರಿಕೊಂಡಿದ್ರು. ಮಾಮನಿ ಮತ್ತು ತಮ್ಮ ಕುಟುಂಬದ ಸಂಬಂಧ ಹಾಗೂ ಒಡನಾಟವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಮರಿಸಿದರು.

ಆನಂದ ಮಾಮನಿ ಅವರು ಅವರ ತಂದೆಯಂತೆ ಈ ಭಾಗದಲ್ಲಿ ಜನಪ್ರಿಯ ನಾಯಕರಾಗಿದ್ದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ನೀರಾವರಿಯ ಬಗ್ಗೆ ವಿಶೇಷ ಒತ್ತು ನೀಡಿದ್ದ ಅವರು ಪ್ರತಿಯೋಜನೆಗಳ ಬಗ್ಗೆ ಮತ್ತು ಸರ್ಕಾರದ ವ್ಯವಸ್ಥೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರು. ಓರ್ವ ಮಾದರಿ ಶಾಸಕರಾಗಿದ್ದ ಅವರು ಮತ್ತು ನಾನು 2008 ರಲ್ಲಿ ಒಂದೇ ಬಾರಿಗೆ ಬಿಜೆಪಿಗೆ ಸೇರ್ಪಡೆಯಾಗಿ ಸತತವಾಗಿ ಮೂರು ಬಾರಿ ಆಯ್ಕೆಯಾಗುತ್ತಾ ಬಂದಿರುವುದಾಗಿ ಹೇಳಿದರು.

assembly session
ಗಣ್ಯರ ಭಾವಚಿತ್ರ ಅನಾವರಣ

ರಾಮಮನೋಹರ್ ಲೋಹಿಯಾ ಅವರ ತತ್ವಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಅವರು ಐದೂವರೆ ದಶಕ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕೆಳ ಜಾತಿಗಳಿಗೆ ನೀಡಿದ ಮಹತ್ವ, ಅಲ್ಪಸಂಖ್ಯಾತರೆಡೆಗೆ ತೋರಿಸಿದ ಕಾಳಜಿಯಿಂದಾಗಿ ರಾಜಕೀಯ ವಲಯದಲ್ಲಿ ನೇತಾಜಿ ಎಂದೇ ಪ್ರಸಿದ್ಧರಾಗಿದ್ದರು.

10 ಬಾರಿ ಉತ್ತರ ಪ್ರದೇಶ ವಿಧಾನಸಭೆಗೆ, 1 ಬಾರಿ ವಿಧಾನ ಪರಿಷತ್, 07 ಬಾರಿ ಲೋಕಸಭೆಗೆ ಆಯ್ಕೆಯಾಗಿ, ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿ, ಮೂರು ಬಾರಿ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅದ್ಭುತ ವ್ಯಕ್ತಿತ್ವದ ದೇಶದ ಹಿರಿಯ ರಾಜಕಾರಣಿ ಮುಲಾಯಂಸಿಂಗ್ ಯಾದವ ನಿಧನ ತುಂಬಲಾರದ ನಷ್ಟ ಎಂದರು.

ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ: ಅಧಿವೇಶನ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

ರಾಜ್ಯಸಭೆ ಮಾಜಿ ಸದಸ್ಯರಾಗಿದ್ದ ಅಬ್ದುಲ್ ಸಮದ್ ಸಿದ್ದಿಕಿ, ಲೋಕಸಭೆ ಮಾಜಿ ಸದಸ್ಯ ಕೋಳೂರು ಬಸವನಗೌಡ, ಮಾಜಿ ಸಚಿವರಾಗಿದ್ದ ಜಬ್ಬಾರಖಾನ್ ಹೊನ್ನಳ್ಳಿ, ಸುಧೀಂದ್ರರಾವ್ ಕಸ್ಬೆ ಮತ್ತು ವಿಧಾನಸಭೆಯ ಮಾಜಿ ಸದಸ್ಯರುಗಳಾಗಿದ್ದ ಎನ್.ಟಿ.ಬೊಮ್ಮಣ್ಣ, ಶ್ರೀಶೈಲಪ್ಪ ಬಿದರೂರು, ಕುಂಬ್ಳೆ ಸುಂದರರಾವ್, ಶಂಕರಗೌಡ ಎನ್.ಪಾಟೀಲ್ ಅವರುಗಳು ನಾಡಿಗೆ ನೀಡಿದ ಕೊಡುಗೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಮರಿಸಿದರು.

ಸಚಿವರಾದ ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸದನದ ಸದಸ್ಯರಾದ ಬಂಡೆಪ್ಪ ಕಾಶೆಂಪೂರ, ಹೆಚ್.ಕೆ.ಪಾಟೀಲ್, ಯು.ಟಿ.ಖಾದರ್, ಜಿ.ಸೋಮಶೇಖರರೆಡ್ಡಿ, ವೆಂಕಟರಾವ್ ನಾಡಗೌಡ, ವಿ.ತುಕಾರಾಂ ಸೇರಿದಂತೆ ಅನೇಕರು ಅಗಲಿದ ಗಣ್ಯರ ಕುರಿತು ಮಾತನಾಡಿ, ಅವರ ಒಡನಾಟ ಮತ್ತು ಸಾಧನೆಗಳನ್ನು ಸ್ಮರಿಸಿದರು. ನಂತರ ಒಂದು ನಿಮಿಷ ಸದನದ ಸದಸ್ಯರು ಎದ್ದುನಿಂತು ಮೌನಾಚರಣೆ ಮಾಡುವುದರ ಮೂಲಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ನಂತರ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನವನ್ನು ಡಿ.20ರ ಬೆಳಗ್ಗೆ 11ಕ್ಕೆ ಮುಂದೂಡಿದರು.

ಇದನ್ನೂ ಓದಿ:ಕಾಂಗ್ರೆಸ್ ಪ್ರತಿಭಟನೆ ಮಧ್ಯೆ ಸುವರ್ಣಸೌಧದಲ್ಲಿ ಸಾವರ್ಕರ್ ಸೇರಿ ಏಳು ಮಹನೀಯರ ಭಾವಚಿತ್ರ ಅನಾವರಣ

ಭಾವಚಿತ್ರ ಅನಾವರಣ: ಇದಕ್ಕೂ ಮುನ್ನ ಬೆಳಗಾವಿಯ ಸುವರ್ಣಸೌಧದಲ್ಲಿ ಹಿರಿಯ ನಾಯಕರ ಭಾವಚಿತ್ರಗಳನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಜೆ.ಸಿ‌ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಬೈರತಿ ಬಸವರಾಜ್, ಪ್ರಭು ಚೌವ್ಹಾಣ್ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.