ETV Bharat / state

ಸಿಗದ ಗೌರವ, ಸಾಮಾನ್ಯರಂತೆ ಬದುಕುತ್ತಿದ್ದಾರೆ ರಾಣಿ ಚೆನ್ನಮ್ಮ ವಂಶಸ್ಥರು: ಸರ್ಕಾರ ನೀಡಬೇಕಿದೆ ಮಾನ್ಯತೆ

author img

By ETV Bharat Karnataka Team

Published : Oct 22, 2023, 12:35 PM IST

Updated : Oct 22, 2023, 2:29 PM IST

'ಈಟಿವಿ ಭಾರತ'ದ ವಿಶೇಷ ವರದಿ: ತೀರಾ ಸಾಮಾನ್ಯರಂತೆ ಬದುಕುತ್ತಿರುವ ಕಿತ್ತೂರು ಚೆನ್ನಮ್ಮಾಜಿ ವಂಶಜರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಮಾಡಬೇಕಿದೆ.

Chennammas descendants
ಕಿತ್ತೂರು ಉತ್ಸವದಲ್ಲಿ ಸಿಗದ ಗೌರವ, ಸಾಮಾನ್ಯರಂತೆ ಬದುಕುತ್ತಿದ್ದಾರೆ ಚೆನ್ನಮ್ಮ ವಂಶಸ್ಥರು: ಸರ್ಕಾರ ನೀಡಬೇಕಿದೆ ಮಾನ್ಯತೆ

ಸಿಗದ ಗೌರವ, ಸಾಮಾನ್ಯರಂತೆ ಬದುಕುತ್ತಿದ್ದಾರೆ ರಾಣಿ ಚೆನ್ನಮ್ಮ ವಂಶಸ್ಥರು: ಸರ್ಕಾರ ನೀಡಬೇಕಿದೆ ಮಾನ್ಯತೆ

ಬೆಳಗಾವಿ: ಬ್ರಿಟಿಷರ ವಿರುದ್ಧ ಮೊದಲ ದಿಗ್ವಿಜಯ ಸಾಧಿಸಿದ ಕಿತ್ತೂರು ಸಂಸ್ಥಾನದ ಕುಡಿಗಳಿವರು. ನಾಡಿನ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದವರು.‌ ರಾಜ ದರ್ಬಾರ್​ನಲ್ಲಿ ಮೆರೆಯಬೇಕಾದವರು ಇಂದು ಕಿರಾಣಿ ಅಂಗಡಿ ನಡೆಸಿ, ಬದುಕಿನ‌ ಬಂಡಿ ಸಾಗಿಸುತ್ತಿದ್ದಾರೆ. ಸಾಮಾನ್ಯರಂತೆ ಜೀವಿಸುತ್ತಿದ್ದಾರೆ. ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಇವರು, ನಮಗೆ ವಿಶೇಷ ಅನುದಾನ ಕೊಡಿ, ಇಲ್ಲವೇ ನಮ್ಮ ಕೋಟೆಯನ್ನು ನಮಗೆ ಬಿಟ್ಟು ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.

Chennammas descendants need to get government recognition
ಚೆನ್ನಮ್ಮನ ಹೆಸರಿನ ಜನರಲ್ ಸ್ಟೋರ್ಸ್

ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಸೋಲುಣಿಸಿದ ಕೆಚ್ಚೆದೆಯ ರಾಣಿ ಕಿತ್ತೂರು ಚೆನ್ನಮ್ಮನ ಸಂಸ್ಥಾನದ ವಂಶಜರ ವ್ಯಥೆಯ ಕಥೆ‌ ಈಟಿವಿ ಭಾರತದ ವಿಶೇಷ ವರದಿಯಾಗಿದೆ. ಮಲ್ಲಸರ್ಜ ದೇಸಾಯಿ ಅವರ ಪುತ್ರ ಶಿವಲಿಂಗ ರುದ್ರಸರ್ಜರ ದತ್ತು ಪುತ್ರ ರಾಜಾ ಶಿವಲಿಂಗಪ್ಪ ಅವರ ಸಂತತಿಯ ಏಳನೇ ತಲೆಮಾರಿನ ಬಾಳಾಸಾಹೇಬ ಶಂಕರ ದೇಸಾಯಿ, ಸೋಮಶೇಖರ ವಿಶ್ವನಾಥ ದೇಸಾಯಿ, ಅಶೋಕ ಚಂದ್ರಶೇಖರ ದೇಸಾಯಿ ಮತ್ತು ಅವರ ಮಕ್ಕಳು ಬೆಳಗಾವಿ, ಖಾನಾಪುರ, ತೋಲಗಿ, ಕಿತ್ತೂರು, ಪಕ್ಕದ ಮಹಾರಾಷ್ಟ್ರದ ಗಡಿಂಗ್ಲಜ ಸೇರಿ ಮತ್ತಿತರ ಕಡೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ.

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಚೆನ್ನಮ್ಮನ ಹೆಸರಿನ ಜನರಲ್ ಸ್ಟೋರ್ಸ್ ನಡೆಸುತ್ತಿರುವ ಚೆನ್ನಮ್ಮಾಜಿ ವಂಶಜ ಅಶೋಕ‌ ದೇಸಾಯಿ ಅವರ ಪುತ್ರ ಚಂದ್ರಶೇಖರ ದೇಸಾಯಿ‌ ಮತ್ತು ಸೋಮಶೇಖರ ದೇಸಾಯಿ ಜೊತೆಗೆ ಈಟಿವಿ ಭಾರತ ಮಾತಿಗಿಳಿದಾಗ, ಕಿತ್ತೂರು ಸಂಸ್ಥಾನದ ಕರುಳಬಳ್ಳಿಗಳು ಈ ರೀತಿ ಸಾಮಾನ್ಯ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿತು.‌ ಅರಮನೆಯಲ್ಲಿರಬೇಕಾದವರು ಈ ರೀತಿ ಕಷ್ಟ ಪಡುತ್ತಿರುವುದು ಕಂಡು ಅಚ್ಚರಿ ಎನಿಸಿತು.

Chennammas descendants need to get government recognition
ಸಾಮಾನ್ಯರಂತೆ ಬದುಕುತ್ತಿದ್ದಾರೆ ಚೆನ್ನಮ್ಮ ವಂಶಸ್ಥರು

ಮೂರು ದಿನ ನಡೆಯುವ ಚೆನ್ನಮ್ಮನ ಕಿತ್ತೂರು ಉತ್ಸವಕ್ಕೆ ಪ್ರತಿ ವರ್ಷವೂ ಬೆಳಗಾವಿ ಜಿಲ್ಲಾಡಳಿತ ಕಾಟಾಚಾರಕ್ಕೆ ಎಂಬಂತೆ ಆಹ್ವಾನಿಸುತ್ತಿದೆ ಎಂದು ಬೇಸರ ಹೊರಹಾಕಿದ ಚಂದ್ರಶೇಖರ ಅವರು, "ಶಿಕ್ಷಣ ಇಲಾಖೆ ಅಧಿಕಾರಿಗಳು ಫೋನ್ ಮಾಡಿ ನಿಮ್ಮ ಸತ್ಕಾರವಿದೆ ಉತ್ಸವಕ್ಕೆ ಬನ್ನಿ ಎನ್ನುತ್ತಾರೆ. ಚೆನ್ನಮ್ಮನ ವಂಶಜರು ಅಂತಾ ತುಂಬಾ ಹೆಮ್ಮೆಯಿದೆ. ಆದರೆ ಸರ್ಕಾರದಿಂದ ಯಾವುದೇ ರೀತಿ ಗೌರವ ಮತ್ತು ಅನುದಾನ ಸಿಗುತ್ತಿಲ್ಲ. ನಮಗೆ ವಿಶೇಷ ಪರಿಹಾರ ನೀಡಬೇಕು. ಇಲ್ಲವಾದರೆ ನಮ್ಮ ಕೋಟೆ ನಮಗೆ ಬಿಟ್ಟು ಕೊಡಬೇಕು. ಈ ಸಂಬಂಧ ಕಾನೂನು ಸಮರಕ್ಕೂ ನಾವು ಸಿದ್ಧ" ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ: ಅಕ್ಕನ ಮಗನಿಗೆ ಪಟ್ಟ ಕಟ್ಟಿ, ಸ್ವಂತ ಮಗನಿಗೆ ಭೈರವಿ ಕಂಕಣ ತೊಡಿಸಿದ ಮಹಾತ್ಯಾಗಿ ಕಿತ್ತೂರು ರಾಣಿ ಚೆನ್ನಮ್ಮ!

ಬಳಿಕ ಸೋಮಶೇಖರ ದೇಸಾಯಿ ಮಾತನಾಡಿ, "ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ದೇಶಕ್ಕೆ ಹೆಮ್ಮೆ ತಂದು ಕೊಟ್ಟ ಕಿತ್ತೂರು ಸಂಸ್ಥಾನದ ವಂಶಜರಿಗೆ ವಿಶೇಷ ಗೌರವ, ಪ್ರಾತಿನಿಧ್ಯ ಸಿಗುತ್ತಿಲ್ಲ. ಅನೇಕ ಬಾರಿ ಮನವಿ ಮಾಡಿಕೊಂಡರೂ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಕೂಡ ಹಾಕುವುದಿಲ್ಲ. ನಮ್ಮ ಬೀಗರಾದ ವಂಟಮೂರಿ ದೇಸಾಯಿ, ತೋಲಗಿ ಗೌಡರು ನಮ್ಮನ್ನು ಸಾಕಿ‌ ಸಲುಹಿದ್ದಾರೆ. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ಸಂಸ್ಥಾನವನ್ನೇ ಕಳೆದುಕೊಂಡ ನಮ್ಮನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದು ಯಾಕೆ? ಎಂದು ಕೊಂಚ ಖಾರವಾಗಿ ಪ್ರಶ್ನಿಸಿದರು.

"ಕಿತ್ತೂರು ನಾಡು ಕಟ್ಟಿದ ಪ್ರಭುಗಳಾದ ಮುದಿಮಲ್ಲಪ್ಪ, ವೀರಪ್ಪ ದೇಸಾಯಿ ಅವರ ಸಮಾಧಿಗಳು ಶಿಥಿಲಾವಸ್ಥೆಯಲ್ಲಿದ್ದು, ಕುಡುಕರ ಅಡ್ಡೆಯಾಗಿವೆ. ಯಾವುದೇ ರೀತಿ ಸ್ವಚ್ಛತೆ ಇಲ್ಲ. ಇನ್ನು‌ ಧಾರವಾಡದಲ್ಲಿ ಥ್ಯಾಕರೆ ಸಮಾಧಿ ಇರುವ ಪಾರ್ಕ್​​ನಲ್ಲಿ ಚೆನ್ನಮ್ಮಾಜಿ ಪುತ್ಥಳಿ ನಿರ್ಮಾಣ ಮಾಡುವಂತೆ ಒತ್ತಾಯಿಸಿದರೂ ಯಾರೂ ಲಕ್ಷ ವಹಿಸುತ್ತಿಲ್ಲ. ಹಾಗಿದ್ರೆ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದೆ ತಪ್ಪಾಯ್ತಾ? ಯಾಕಿಷ್ಟು ನಮ್ಮ ಬಗ್ಗೆ ನಿರ್ಲಕ್ಷ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, "ವಿಶೇಷವಾಗಿ ಕಿತ್ತೂರು ಉತ್ಸವದಲ್ಲಿ ಗೌರವ ಕೊಡುವುದು ಹಿಂದಿನಿಂದಲೂ ಪರಂಪರೆಯಿದೆ. ಹಾಗಾಗಿ, ಇನ್ನೂ ಸಮಯವಿದ್ದು ಅವರಿಗೆ ಸಿಗಬೇಕಾದ ಗೌರವ ಕೊಡಿಸುತ್ತೇವೆ. ಮೈಸೂರು ರಾಜರ ವಂಶಜರಿಗೆ ಸಿಗುವ ಮರ್ಯಾದೆ ಇವರಿಗೂ ಸಿಗಬೇಕು" ಎಂದರು‌.

ತೀರಾ ಸಾಮಾನ್ಯರಂತೆ ಜೀವಿಸುತ್ತಿರುವ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ವಂಶಜರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಮಾಡಬೇಕಿದೆ. ಚೆನ್ನಮ್ಮಾಜಿ ವಂಶಜರಿಗೆ ಸಿಗಬೇಕಾದ ರಾಜ ಮರ್ಯಾದೆ ಇನ್ನಾದರೂ ಸಿಗಲಿ. ಅವರ ಬೇಡಿಕೆಗಳಿಗೆ ಸರ್ಕಾರ ಶೀಘ್ರವೇ ಸ್ಪಂದಿಸುವಂತಾಗಲಿ.

ಇದನ್ನೂ ಓದಿ: ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್​ ಸ್ವಾಭಿಮಾನದ ಹೋರಾಟ ನಮ್ಮೆಲ್ಲರಿಗೆ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated : Oct 22, 2023, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.