ETV Bharat / state

ಸ್ವಾಭಿಮಾನ ಬದಿಗಿಟ್ಟು ಬಿಜೆಪಿ ಜೆಡಿಎಸ್ ಮೈತ್ರಿ, ಬಿಎಸ್​ವೈ ಜೈಲಿಗೆ ಹೋಗಲು ಎಚ್ ಡಿ ಕುಮಾರಸ್ವಾಮಿ ಕಾರಣ: ಶಾಸಕ ಸವದಿ

author img

By ETV Bharat Karnataka Team

Published : Sep 30, 2023, 4:19 PM IST

Updated : Sep 30, 2023, 4:45 PM IST

ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂಬ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಹಿಂದೆ ಬೇರೆ ವಿಚಾರವಿದೆ. ಬಿಜೆಪಿ ಜೆಡಿಎಸ್ ಮೈತ್ರಿಗೆ ಹಲವು ಶಾಸಕರು ಆಕ್ಷೇಪ ಎತ್ತಿದ್ದಾರೆ. ಮೈತ್ರಿ ವಿಚಾರ ಖಂಡಿಸಿ ಜೆಡಿಎಸ್ ಪಕ್ಷದ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಸದ್ಯ ಕವಲು ದಾರಿಯಲಿ ನಿಂತಿದ್ದಾರೆ. ಅವರನ್ನು ರಕ್ಷಿಸಿಕೊಳ್ಳಲು ಕುಮಾರಸ್ವಾಮಿ ಈ ಹೊಸ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ಆರೋಪಿಸಿದರು.

mla laxman savadi
ಅಥಣಿ ಶಾಸಕ ಲಕ್ಷ್ಮಣ್ ಸವದಿ

ಶಾಸಕ ಲಕ್ಷ್ಮಣ್ ಸವದಿ ಮಾಧ್ಯಮದವರ ಜೊತೆ ಮಾತನಾಡಿದರು.

ಚಿಕ್ಕೋಡಿ: ಮಾಜಿ ಸಿಎಂ ಕುಮಾರಸ್ವಾಮಿ ವಚನ ಭ್ರಷ್ಟರು ಎಂದು ಆರೋಪ ಮಾಡಿ ದ್ವೇಷ ಸಾಧಿಸಲು ಯಡಿಯೂರಪ್ಪ ಹೋಗಿದ್ದವರು. ಅದೇ ಕುಮಾರಸ್ವಾಮಿ ಅವರು ಬಿಎಸ್​ವೈ ಅವರನ್ನು ಭ್ರಷ್ಟಾಚಾರ ಸುಳಿಯಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದರು. ಆದರೆ, ಇವತ್ತು ಅಧಿಕಾರಿಗೋಸ್ಕರ ಇಬ್ಬರು ನಾಯಕರು ಸ್ವಾಭಿಮಾನ ಬದಿಗೆ ಒತ್ತಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಬ್ಬರು ನಾಲ್ಕು ಸಾರಿ ಮುಖ್ಯಮಂತ್ರಿ ಆದವರು ಮತ್ತು ಇನ್ನೊಬ್ಬರು ಎರಡು ಸಲ ಮುಖ್ಯಮಂತ್ರಿ ಆದವರು, ಹಿಂದೆ ಇಬ್ಬರು ಸೇರಿಕೊಂಡು 20/20 ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು. ಅಧಿಕಾರ ಹಂಚಿಕೆಯಲ್ಲಿ ಕುಮಾಸ್ವಾಮಿ ಅವರು ಬಿಜೆಪಿಗೆ ಕೈಕೊಟ್ಟರು. ಅಂದು ಕುಮಾರಸ್ವಾಮಿ ಅವರು ವಚನ ಭ್ರಷ್ಟರು ಎಂಬುದನ್ನೂ ಯಡಿಯೂರಪ್ಪ ಆರೋಪಿಸಿ ದ್ವೇಷ ಸಾಧಿಸಿದ್ದರು.

ಅವತ್ತು ಅದೇ ಕುಮಾರಣ್ಣ ಅವರು ಭ್ರಷ್ಟಾಚಾರ ಸುಳಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಸಿಲುಕಿಸಿ ಜೈಲಿಗೆ ಕಳುಹಿಸಿರುವುದು ಇಡೀ ರಾಜ್ಯದ ಜನರಿಗೆ ಗೊತ್ತಿರುವ ವಿಚಾರ. ಆದರೆ, ಇವತ್ತು ಇಬ್ಬರು ನಾಯಕರು ಅಧಿಕಾರ ದಾಹಕ್ಕಾಗಿ ತಮ್ಮ ಸ್ವಾಭಿಮಾನ ಬದಿಗೆ ಇಟ್ಟಿದ್ದಾರೆ. ಅಧಿಕಾರ ಇದ್ದರೆ ಮಾತ್ರ ನಾವು ಬದುಕುತ್ತೇವೆ ಎನ್ನುವ ಈ ಇಬ್ಬರ ನಾಯಕರ ನಡೆಯನ್ನು ನೋಡಿ ಜನರು ನಗುತ್ತಿದ್ದಾರೆ.

ಇವರು ಅಧಿಕಾರಗೋಸ್ಕರ ಏನೇನೋ ಮಾಡಲಿಕ್ಕೆ ಹೊರಟಿದ್ದಾರೆ ಎಂದು ಗ್ರಾಮೀಣ ಪ್ರದೇಶದ ಜನರು ಕಟ್ಟೆಯ ಮೇಲೆ ಕುಳಿತು ಚರ್ಚಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರ ಮಾತುಗಳು ಅವರಿಗೆ ಹೋಗಿ ಮುಟ್ಟುವುದಿಲ್ಲ. ನಾನು ಗ್ರಾಮೀಣ ಭಾಗದಲ್ಲಿ ಇರುವುದರಿಂದ ಮಾಧ್ಯಮ ಮುಖಾಂತರ ಜನರ ಅಭಿಪ್ರಾಯ ತಿಳಿಸುತ್ತಿದ್ದೇನೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಭದ್ರ ಸರ್ಕಾರ ನೀಡಿದ ಜನ: ರಾಜ್ಯದ ಜನರು 135 ಶಾಸಕ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಭದ್ರವಾದ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ಸುಭದ್ರ ಸರ್ಕಾರ ಇರಬೇಕು, ಒಳ್ಳೆಯ ಆಡಳಿತವನ್ನು ಕೊಡಬೇಕು. ಈ ರಾಜ್ಯದಲ್ಲಿ ಉತ್ತಮ ರೀತಿ ಆಡಳಿತ ಇರಬೇಕೆಂದು ಎಲ್ಲ ಪಕ್ಷಗಳನ್ನು ಬದಿಗೊತ್ತಿ ಸಂಪೂರ್ಣ ಬಹುಮತವನ್ನು ರಾಜ್ಯದ ಜನರು ನೀಡಿದ್ದಾರೆ.

ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ ಎಚ್​ಡಿಕೆ ಹೇಳಿಕೆಗೆ ಆಕ್ಷೇಪ: ಆದರೆ, ಎಚ್ ಡಿ ಕುಮಾರಸ್ವಾಮಿ ಅವರು ಆರು ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂಬ ಹೇಳಿಕೆ ಹಿಂದೆ ಬೇರೆಯದ್ದೇ ವಿಚಾರವಿದೆ. ಬಿಜೆಪಿ ಜೆಡಿಎಸ್ ಮೈತ್ರಿಗೆ ಹಲವು ಶಾಸಕರು ಈಗಾಗಲೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ಮೈತ್ರಿ ವಿಚಾರವನ್ನು ಖಂಡಿಸಿ ಜೆಡಿಎಸ್ ಪಕ್ಷದ ಕೆಲವು ಮಾಜಿ ಶಾಸಕರು ಮತ್ತು ಹಾಲಿ ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಸದ್ಯ ಕವಲು ದಾರಿಯಲಿ ನಿಂತಿದ್ದಾರೆ. ಅವರನ್ನು ರಕ್ಷಿಸಿಕೊಳ್ಳಲು ಕುಮಾರಸ್ವಾಮಿ ಅವರು ಈ ಹೊಸ ಹೇಳಿಕೆಗಳನ್ನು ನೀಡುತ್ತಿದ್ದಾರೆ ವಿನಹ, ಆದರೆ ಕಾಂಗ್ರೆಸ್ ಸರ್ಕಾರ ಪತನ ಸಾಧ್ಯವಿಲ್ಲ. ಇನ್ನೂ ಐದು ವರ್ಷ ಈ ಸರ್ಕಾರ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂಓದಿ:ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ: ಶಾಸಕ ಶಾಮನೂರು ಶಿವಶಂಕರಪ್ಪ ಅತೃಪ್ತಿ

Last Updated : Sep 30, 2023, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.