ETV Bharat / state

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾವಲು‌ ನಾಯಿಯಾಗಿ ಕೆಲಸ ಮಾಡುತ್ತದೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

author img

By

Published : Jun 23, 2023, 6:37 PM IST

Updated : Jun 23, 2023, 7:04 PM IST

ಕೇಂದ್ರದಲ್ಲಿ 9 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಾಧನೆಯನ್ನು ಮೆಲುಕು ಹಾಕಲು ಬಿಜೆಪಿಯಿಂದ ತಿಂಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

Rajya Sabha member Eranna Kadadi spoke at the press conference.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು.

ಬೆಳಗಾವಿ: ನಾವು ಕರ್ನಾಟಕದ ಪರ ಕೇಂದ್ರದಿಂದ ಏನೇನು ಕೇಳಬೇಕಾಗಿದೆಯೋ ಅದನ್ನು ಕೇಳುತ್ತೇವೆ. ನೀವು ಬೇಕಾಬಿಟ್ಟಿ, ಪ್ಲಾನ್ ಇಲ್ಲದೇ ಘೋಷಣೆ ಮಾಡಿದ್ದೀರಲ್ಲ, ಅದಕ್ಕೆ ನೀವೇ ಹೊಣೆಗಾರರು. ಜವಾಬ್ದಾರಿ ಹೊತ್ತಿರುವ ನೀವು ಅದನ್ನು ನಿಭಾಯಿಸಬೇಕೆಂದು ರಾಜ್ಯ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.

ಬೆಳಗಾವಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ಕರ್ನಾಟಕ ಮುಖ್ಯವಲ್ಲ ಎಂಬ ನಳೀನ್ ಕುಮಾರ್​ ಕಟೀಲ್ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯಲ್ಲಿದೆ. ದೇಶದ ಎಲ್ಲ ರಾಜ್ಯಗಳ ಬಗ್ಗೆಯೂ ಸಮಾನಾಂತರವಾಗಿ ಅಧಿಕಾರ ನಡೆಸಬೇಕಾಗುತ್ತದೆ. ಸೌಲತ್ತುಗಳನ್ನು ನೀಡಬೇಕಾಗುತ್ತದೆ. ಈ ರಾಜ್ಯದಲ್ಲಿ ಅಕ್ಕಿ ಘೋಷಣೆ ಮಾಡುವ ಮುನ್ನ ಅವರು ಯೋಚಿಸಬೇಕಿತ್ತು. ಅಕ್ಕಿಯನ್ನು ಎಲ್ಲಿಂದ ತರಬೇಕು? ಯಾರ ಜೊತೆ ಮಾತಾಡಬೇಕೆಂದು ಯೋಚನೆ ಮಾಡದೇ, ಪೂರ್ವಾಪರ ತಯಾರಿ ಇಲ್ಲದೇ, ಈಗ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಕ್ರಮ ತಪ್ಪು ಎಂದು ಕಿಡಿಕಾರಿದರು.

ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಆಯಾ ರಾಜ್ಯದವರು ತಮಗೆ ಬೇಕಾದ ಹಾಗೆ ಅಕ್ಕಿ ಕೊಡುತ್ತೇವೆಂದು ಘೋಷಣೆ ಮಾಡಿ, ಕೇಂದ್ರಕ್ಕೆ ಬಂದು ನೀವು ಕೊಡಲಿಲ್ಲ ಎಂದು ಯಾಕೆ ಹೇಳುತ್ತಾರೆ?, ಅದಕ್ಕೆ ಬೇಕಾದ ಸಿದ್ಧತೆಯನ್ನು ಅವರು ಮಾಡಿಕೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದ ಈರಣ್ಣ ಕಡಾಡಿ, ಕರ್ನಾಟಕ ಜನತೆ ಹಕ್ಕು ಚ್ಯುತಿ ಆದಾಗ ನಾವು ಮಾತನಾಡುತ್ತೇವೆ. ಕಳೆದ ಎರಡ್ಮೂರು ವರ್ಷಗಳಿಂದ ದೇಶದಲ್ಲಿ ಈಗಾಗಲೇ 80 ಕೋಟಿ ಜನರಿಗೆ ಉಚಿತವಾಗಿ ನಾವು ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ‌. ಅಂತ್ಯೋದಯ ಅನ್ನ ಯೋಜನೆಯಡಿ 35 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಹೀಗಾಗಿ ನೀವು ಹತ್ತು ಕೆಜಿ ಕೊಡುತ್ತೇವೆ ಎಂದಿದ್ದಿರಿ, ಎಲ್ಲ ಸೇರಿ ಹದಿನೈದು ಕೆಜಿ ಅಕ್ಕಿ‌ ಕೊಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಸ್ಥಾ‌ನ ಸಿಗದಿರುವುದು ದುರಂತ ಎಂಬ ಮಾಧ್ಯಮಗಳ ಪ್ರಶ್ನೆಗೆ, ಪಾಪ ಅವರು ಏನು ಘೋಷಣೆ ಮಾಡಿದ್ದಾರಲ್ಲ. ಐದು ಯೋಜನೆಗಳನ್ನು ಕೊಡುವಾಗ ಪ್ರಾರಂಭದಲ್ಲೇ ಮುಗ್ಗರಿಸಿ ಬಿದ್ದಿದ್ದಾರೆ. ಅದರಿಂದ ಮೊದಲು ಎದ್ದು ಬರಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದ ಕಡಾಡಿ, ಸರ್ಕಾರ ಅಲುಗಾಡದಂತೆ ನಾವು ಮಾಡುತ್ತೇವೆ. ಕಾಂಗ್ರೆಸ್ ಕೊಟ್ಟಿರುವ ವಾಗ್ದಾನ್​ಗಳನ್ನು ಈಡೇರಿಸುವವರೆಗೂ ನಾವು ಬಿಡೋದಿಲ್ಲ. ಕಾಂಗ್ರೆಸ್ ಜನರಿಗೆ ನೀಡಿದ ಭರವಸೆ ಈಡೇರಿಸುವವರೆಗೂ ವಿರೋಧ ಪಕ್ಷವಾಗಿ ಕಾವಲು ನಾಯಿಯಾಗಿ ಅವರನ್ನು ಕಾಯುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.

25ರಿಂದ ಬಿಜೆಪಿ ವಿಶೇಷ ಕಾರ್ಯಕ್ರಮ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ರಚನೆಯಾಗಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಮೆಲುಕು ಹಾಕಲು ಒಂದು ತಿಂಗಳ ಕಾಲ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದೇ 25ರಂದು ಬೆಳಗಾವಿ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ಸಚಿವರಿಬ್ಬರೂ ಆಗಮಿಸುವರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೀಡಿದ್ದ ಭರವಸೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಬದ್ರೀನಾಥ, ಕೇದಾರನಾಥ, ಉಜ್ಜಯಿನಿಯಲ್ಲಿ ಮಾಡಿರುವ ಕಾರಿಡಾರ್, ನೂತನ ಸಂಸತ್ತ ಕಟ್ಟಡದ ಲೋಕಾರ್ಪಣೆ, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದು, ತ್ರಿವಳಿ ತಲಾಖ್ ನಿಷೇಧ, ನಾಗರಿಕ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇವೆ ಎಂದು ಈರಣ್ಣ ಕಡಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಅನಿಲ್ ಬೆನಕೆ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:ಸಂಘಟನೆ, ಸಾಧನೆ ಮತ್ತು ನಾಯಕತ್ವದ ಮೂಲಕ ಲೋಕಸಭೆ ಚುನಾವಣೆ ಎದುರಿಸುತ್ತೇವೆ: ಕೆ.ಎಸ್.ಈಶ್ವರಪ್ಪ

Last Updated : Jun 23, 2023, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.