ETV Bharat / state

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಭಾಷಾಧಾರಿತವೋ? ಪಕ್ಷಾಧಾರಿತವೋ?..ಇಲ್ಲಿದೆ ಮಾಹಿತಿ

author img

By

Published : Aug 17, 2021, 5:32 PM IST

ನಗರದಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ಶಾಸಕ ಸತೀಶ್​ ಜಾರಕಿಹೊಳಿ, ಅಭಯ ಪಾಟೀಲ ಹಾಗೂ ಅನಿಲ್ ಬೆನಕೆ ಒಂದಾಗಿ ಶ್ರಮ ವಹಿಸಿದರೆ ಮಾತ್ರ ಎಂಇಎಸ್ ಧೂಳಿಪಟ ಆಗಲಿದೆ. ಆ ಮೂಲಕ ಚೊಚ್ಚಲ ಬಾರಿಗೆ ಪಾಲಿಕೆಯಲ್ಲಿ ಕನ್ನಡ ಭಾಷಿಕರು ಬಹುಮತ ಸಾಧಿಸಲು ಸಾಧ್ಯ. ಪಕ್ಷಬೇಧ ಮರೆತು ಸತೀಶ್​ ಹಾಗೂ ಅಭಯ ಒಂದಾಗುವರೇ ಎಂಬುದೇ ಸದ್ಯದ ಕುತೂಹಲವಾಗಿದೆ.

belagavi-municipality-corporation-
ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ: ಎರಡು ಸಲ ಸೂಪರ್​ ಸೀಡ್ ಆಗುವ ಮೂಲಕ ವಿವಾದದಿಂದಲೇ ರಾಜ್ಯದ ಗಮನ ಸೆಳೆದಿರುವ ಬೆಳಗಾವಿಯ ಮಹಾನಗರ ಪಾಲಿಕೆಗೆ ಸೋಮವಾರವಷ್ಟೇ ಚುನಾವಣೆ ಘೋಷಣೆ ಆಗಿದೆ. ಚುನಾವಣೆ ಆಯೋಗದ ಈ ದಿಢೀರ್ ನಿರ್ಧಾರ ಅಭ್ಯರ್ಥಿಗಳಲ್ಲಿ ಅಚ್ಚರಿ ಜೊತೆಗೆ ಶಾಕ್ ಕೂಡ ಆಗಿದೆ. ಈವರೆಗೆ ಒಮ್ಮೆಯೂ ಬಹುಮತ ಸಾಧಿಸದ ಕನ್ನಡ ಭಾಷಿಕರು ಈ ಬಾರಿಯಾದರೂ ಗದ್ದುಗೆ ಏರುತ್ತಾರಾ? ನಾಡದ್ರೋಹಿ ಎಂಇಎಸ್ ಮಣಿಸಲು ಈ ಸಲವಾದರೂ ಸ್ಥಳೀಯ ರಾಜಕೀಯ ನಾಯಕರು ಒಂದಾಗುವರೆ ಎಂಬುವುದೇ ಸದ್ಯದ ಕುತೂಹಲ.

ಎರಡೂವರೆ ವರ್ಷಗಳ ಕಾಲ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಮೂಲಕ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ. ಸ್ಮಾರ್ಟ್‍ಸಿಟಿ, ಅಮೃತ್ ಸಿಟಿಯಂಥ ಮಹತ್ವದ ಯೋಜನೆಗಳು ಪಾಲಿಕೆ ಸದಸ್ಯರಿಲ್ಲದೇ ಅಧಿಕಾರಿಗಳೇ ಜಾರಿಗೊಳಿಸುತ್ತಿದ್ದಾರೆ. ಹೀಗಾಗಿ, ನಗರದಲ್ಲಿ ಎಲ್ಲ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಹೀಗಾಗಿ, ಜನರು ಕೂಡ ಹೈರಾಣಾಗಿದ್ದಾರೆ.

ಭಾಷಾಧಾರಿತವೋ? ಪಕ್ಷಾಧಾರಿತವೋ?

ರಾಜ್ಯದ ಇತರ 8 ಮಹಾನಗರ ಪಾಲಿಕೆಗೆ ಹೋಲಿಸಿದರೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ತುಸು ಭಿನ್ನ. ಎಲ್ಲೆಡೆ ಪಕ್ಷಾಧಾರಿತವಾಗಿ ಚುನಾವಣೆ ನಡೆದರೆ ಬೆಳಗಾವಿಯಲ್ಲಿ ಮಾತ್ರ ಭಾಷಾಧಾರಿತವಾಗಿ ಚುನಾವಣೆ ನಡೆದುಕೊಂಡು ಬಂದಿವೆ. ಎಂಇಎಸ್-ಶಿವಸೇನೆ ಒಂದೆಡೆ ಆದರೆ ಕನ್ನಡ ಸೇರಿ ಇನ್ನುಳಿದ ಭಾಷೆಯ ಸದಸ್ಯರು ಒಂದಾಗಿ ಚುನಾವಣೆ ಎದುರಿಸುತ್ತಾರೆ.

ಈವರೆಗೆ ಒಮ್ಮೆಯೂ ಇಲ್ಲಿ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆದಿಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಒಮ್ಮೆಯೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಎಂಇಎಸ್ ಮಣಿಸಲು ಮೂರು ಪಕ್ಷಗಳು ಕನ್ನಡ ಭಾಷಿಕ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿವೆ.

sathish jarakiholi
ಶಾಸಕ ಸತೀಶ್​ ಜಾರಕಿಹೊಳಿ

ಈ ಬಾರಿ ಪಕ್ಷಾಧಾರಿತವಾಗಿ ಚುನಾವಣೆ ನಡೆಸಲು ಕಾಂಗ್ರೆಸ್ ಹಾಗೂ ಬಿಜೆಪಿ ನಿರ್ಧರಿಸಿವೆ. ತಕ್ಷಣವೇ ಚುನಾವಣೆ ಘೋಷಣೆ ಆಗಿರುವುದರಿಂದ ರಾಜಕೀಯ ಪಕ್ಷಗಳು ಕೂಡ ಇನ್ನೂ ತಯಾರಿ ಮಾಡಿಕೊಂಡಿಲ್ಲ. ದಿಢೀರ್ ಚುನಾವಣೆ ಘೋಷಣೆಯಿಂದ ಅಭ್ಯರ್ಥಿಗಳ ಜೊತೆಗೆ ರಾಜಕೀಯ ಪಕ್ಷಗಳು ಸಹ ಶಾಕ್‍ಗೆ ಒಳಗಾಗಿವೆ.

ಎಂಇಎಸ್-ಶಿವಸೇನೆ ಪ್ರತ್ಯೇಕ ಸ್ಪರ್ಧೆ..

ಬಹುಭಾಷಿಕರು ನೆಲೆಸಿರುವ ಬೆಳಗಾವಿಯಲ್ಲಿ ಮೊದಲಿನಿಂದಲೂ ಎಂಇಎಸ್ ಮುಖಂಡರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಲವಾರು ಕುತಂತ್ರಗಳನ್ನು ಮಾಡುತ್ತಿದ್ದಾರೆ. ಕಳೆದ ಲೋಕಸಭೆ ಉಪಚುನಾವಣೆಯಿಂದಲೂ ಎಂಇಎಸ್ ಮುಖಂಡರು ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಪಾಲಿಕೆ ಚುನಾವಣೆ ಗಮನದಲ್ಲಿಟ್ಟುಕೊಂಡೆ ಪ್ರತಿಸಲದಂತೆ ಈ ಸಲವೂ ಎಂಇಎಸ್ ಗಡಿವಿವಾದ ಸೇರಿದಂತೆ ಹಲವು ವಿಷಯಗಳನ್ನು ಮತ್ತೆ ಮುನ್ನಲೆಗೆ ತಂದಿವೆ.

ರಾಜ್ಯ ಸರ್ಕಾರದಿಂದ ಇಲ್ಲಿನ ಮರಾಠಿ ಭಾಷಿಕರಿಗೆ ಅನ್ಯಾಯವಾಗುತ್ತಿದೆ ಎಂದು ಬಿಂಬಿಸುವ ಹುನ್ನಾರ ಮಾಡುತ್ತಿದ್ದಾರೆ. ಈ ಸಲ ಎಂಇಎಸ್ ಜೊತೆಗೆ ಶಿವಸೇನೆ ಕೂಡ ಈ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಎಂಇಎಸ್ ಹಾಗೂ ಶಿವಸೇನೆಯ ಲಾಭವನ್ನು ಕನ್ನಡ ಭಾಷಿಕ ಅಭ್ಯರ್ಥಿಗಳು ಯಾವ ರೀತಿ ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದನೋಡಬೇಕಿದೆ.

Abhay Patil
ಅಭಯ್​ ಪಾಟೀಲ್

ಒಂದಾಗುವರೇ ಕೈ-ಕಮಲ, ದಳಪತಿಗಳು?

ಐದು ದಶಕಗಳ ಅವಧಿಯಲ್ಲಿ ಬೆಳಗಾವಿ ಮಹಾನಗರಕ್ಕೆ ಕೇವಲ ನಾಲ್ವರು ಮಾತ್ರ ಕನ್ನಡ ಭಾಷಿಕರು ಮೇಯರ್ ಆಗಿದ್ದಾರೆ. ಆದರೆ, ಒಮ್ಮೆಯೂ ಕನ್ನಡ ಭಾಷಿಕರು ಇಲ್ಲಿ ಬಹುಮತ ಸಾಧಿಸಿಲ್ಲ. 58 ವಾರ್ಡ್‍ಗಳನ್ನು ಹೊಂದಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್-ಶಿವಸೇನೆ ಮಣಿಸಿ ಕನ್ನಡದ ಛಾಪು ಮೂಡಿಸಬೇಕಾದರೆ ಕೈ-ಕಮಲ ಹಾಗೂ ಜೆಡಿಎಸ್ ನಾಯಕರು ಒಂದಾಗಬೇಕಿದೆ.

ನಗರದಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ಶಾಸಕ ಸತೀಶ್​ ಜಾರಕಿಹೊಳಿ, ಅಭಯ್​ ಪಾಟೀಲ್​ ಹಾಗೂ ಅನಿಲ್ ಬೆನಕೆ ಒಂದಾಗಿ ಶ್ರಮವಹಿಸಿದರೆ ಮಾತ್ರ ಎಂಇಎಸ್ ಧೂಳಿಪಟ ಆಗಲಿದೆ. ಆ ಮೂಲಕ ಚೊಚ್ಚಲ ಬಾರಿಗೆ ಪಾಲಿಕೆಯಲ್ಲಿ ಕನ್ನಡ ಭಾಷಿಕರು ಬಹುಮತ ಸಾಧಿಸಲು ಸಾಧ್ಯ. ಪಕ್ಷಬೇಧ ಮರೆತು ಸತೀಶ್​ ಹಾಗೂ ಅಭಯ ಒಂದಾಗುವರೇ ಎಂಬುದೇ ಸದ್ಯದ ಕುತೂಹಲ.

ಓದಿ: ಆಗಸ್ಟ್ 19 ರಿಂದ ಶುರುವಾಗಲಿದೆ ದ್ವಿತೀಯ ಪಿಯುಸಿ ಪರೀಕ್ಷೆ; ಆ ಭಾಗದಿಂದ ಬರೋರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ..‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.