ETV Bharat / state

ಪಂಚಮಸಾಲಿ ಹೆಸರಲ್ಲಿ ರಾಜಕೀಯ ಲಾಭಕ್ಕಾಗಿ ಸ್ವಾಮೀಜಿಗಳ ಮಧ್ಯೆ ಜಗಳ ಹಚ್ಚಿದ್ದಾರೆ: ಯತ್ನಾಳ್ ಕಿಡಿ

author img

By

Published : May 5, 2022, 7:02 PM IST

ಪಂಚಮಸಾಲಿ ಮೀಸಲಾತಿ ವಿಚಾರವಾಗಿ ನಾನು ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದಾಗ ಬೇರೆ ಶಾಸಕರು ನನ್ನ ಬೆಂಬಲಕ್ಕೆ ನಿಂತು ಬಾವಿಗಿಳಿದರು. ಆದರೆ, ಬಹುತೇಕ ಲಿಂಗಾಯತ ಶಾಸಕರು ನನ್ನ ನೆರವಿಗೆ ಬರಲಿಲ್ಲ. ಟಿಕೆಟ್ ಪಡೆಯಲು, ಮಂತ್ರಿ ಆಗಲಷ್ಟೇ ಲಿಂಗಾಯತ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಯತ್ನಾಳ್​ ಕಿಡಿಕಾರಿದರು.

Yatnal demands reservation for Panchamasali
ಶಾಸಕ ಬಸವಗೌಡ ಪಾಟೀಲ್​ ಯತ್ನಾಳ

ಬೆಳಗಾವಿ: ಪಂಚಮಸಾಲಿ ಸಮಾಜದ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಸ್ವಾಮೀಜಿಗಳ ಮಧ್ಯೆಯೇ ಜಗಳ ಹಚ್ಚಿ ಕೆಲವರು ಕೆತ್ತ್ಯೆಬಜೆ ಮಾಡುತ್ತಿದ್ದಾರೆ ಎಂದು ಶಾಸಕ ಬಸವಗೌಡ ಪಾಟೀಲ್​ ಯತ್ನಾಳ ಅವರು ಸಚಿವ ಮುರಗೇಶ ನಿರಾಣಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಪಂಚಮಸಾಲಿ ಸಮಾಜದ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆಯುತ್ತಿರುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಸಮಯದಲ್ಲೂ ಮೀಸಲಾತಿ ಚರ್ಚೆಗೆ ಬಂತು. ಸಿದ್ದರಾಮಯ್ಯ, ನಾನು ಸೇರಿ ಹಲವು ಶಾಸಕರು ಮೀಸಲಾತಿ ಸಂಬಂಧ ಧ್ವನಿ ಎತ್ತಿದ್ದೆವು ಎಂದರು.

ಶಾಸಕ ಬಸವಗೌಡ ಪಾಟೀಲ್​ ಯತ್ನಾಳ

ಇನ್ನೂ ಎರಡು ವಾರ ತಡೆಯುವಂತೆ ಸಿಎಂ ಬೊಮ್ಮಾಯಿ ನನ್ನಲ್ಲಿ ಕೋರಿದರು. ಮೀಸಲಾತಿ ಸಂಬಂಧ ಈ ಮೊದಲು ಯಾವ ಶಾಸಕರು ವಿಧಾನಸಭೆಯಲ್ಲಿ ಮಾತನಾಡುತ್ತಿರಲಿಲ್ಲ. ಅನ್ಯ ಜಾತಿಯ ಮತಗಳು ಕೈತಪ್ಪುವ ಭೀತಿ ಅವರಲ್ಲಿತ್ತು. ಆದರೆ, ನಾನು ಮೀಸಲಾತಿ ಬಗ್ಗೆ ಧ್ವನಿ ಎತ್ತಿದಾಗ ನನ್ನ ನೆರವಿಗೆ ಯಾವ ಶಾಸಕರೂ ಬರಲಿಲ್ಲ. ನಾನ್ನೊಬ್ಬನೇ ಹೋಗಿ ಬಾವಿಗಿಳಿದು ಪ್ರತಿಭಟನೆ ಮಾಡಲು ಆರಂಭಿಸಿದೆ ಎಂದರು.

ನಂತರ ಬೇರೆ ಶಾಸಕರು ನನ್ನ ಬೆಂಬಲಕ್ಕೆ ನಿಂತು ಬಾವಿಗಿಳಿದರು. ಮಹಾದೇವಣ್ಣ ಚಹ್ವಾಣ್, ಬಂಡೆಪ್ಪ ಕಾಂಶಪುರ, ಡಾ. ಯತೀಂದ್ರ, ಅಮರೇಗೌಡ ಬಯ್ಯಾಪುರ ನೆರವಿಗೆ ನಿಂತರು. ಆದರೆ, ಬಹುತೇಕ ಲಿಂಗಾಯತ ಶಾಸಕರು ನನ್ನ ನೆರವಿಗೆ ಬರಲಿಲ್ಲ. ಟಿಕೆಟ್ ಪಡೆಯಲು, ಮಂತ್ರಿ ಆಗಲಷ್ಟೇ ಲಿಂಗಾಯತ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರಗೇಶ ನಿರಾಣಿಗೆ ಟಾಂಗ್ ಕೊಟ್ಟರು.

ಟೀಂ​... ಟೀಂ​.. ಸಚಿವರು: ಮಂತ್ರಿ ಆದ ಬಳಿಕ ಮುಗಿತು, ಧರ್ಮದ ಬಗ್ಗೆ ಕಾಳಜಿಯನ್ನೇ ಮರೆಯುತ್ತಾರೆ. ‘ಶೀಘ್ರವೇ ಮೀಸಲಾತಿ’ ಸಿಗಲಿದೆ ಎನ್ನುತ್ತಾರೆ. ರಾಮದುರ್ಗಕ್ಕೆ ಟೀಂ.. ಟೀಂ.. ಸಚಿವರು ಬಂದರು, ಮೀಸಲಾತಿ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು. ಶೀಘ್ರವೇ ಸಿಎಂ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ನೀವು ಮನೆಯಲ್ಲಿ ಮಲಗಿಕೊಳ್ಳಿ, ನಾವು ಮಜಾ ಮಾಡುತ್ತೇವೆ ಎಂಬಂತೆ ಇವರ ವರ್ತನೆ ಇದೆ ಎಂದು ಯತ್ನಾಳ ಬೇಸರ ವ್ಯಕ್ತಪಡಿಸಿದರು.

ಆಜುಬಾಜು ಕ್ಷೇತ್ರದಲ್ಲಿ ಅಣ್ತಮ್ಮಂದಿರನ್ನು ಚುನಾವಣೆಗೆ ನಿಲ್ಲಿಸುತ್ತೇವೆ. ನೀವು ಕುರಿಹಂಗೆ ನಮ್ಮ ಅಣ್ತಮ್ಮರಿಗೆ ಮತ ಹಾಕಿ ಎನ್ನುತ್ತಾರೆ. ಮನೆಯಲ್ಲಿ ನಾಲ್ಕೈದು ಜನ ಎಂಎಲ್‌ಎ, ಎಂಎಲ್‌ಸಿ ಆಗುತ್ತೇವೆ. ಲೋಕಸಭೆ, ರಾಜ್ಯಸಭೆ ಸದಸ್ಯರಾಗುತ್ತೇವೆ. ಎಲ್ಲವೂ ನಮಗೆ ಇರಲಿ ಅಂತಾರೆ. ಬಳಿಕ ಪಂಚಮಸಾಲಿ ಒಂದು ಪೀಠ, 2 ಪೀಠ, 3 ಪೀಠ ಮಾಡುತ್ತಾರೆ. ಸ್ವಾಮೀಜಿಗಳ ಮಧ್ಯೆ ಜಗಳ ಹಚ್ಚಿ ಕೆತ್ತ್ಯೆಬಜೆ ಮಾಡುತ್ತಾರೆ ಎಂದು ಟೀಕಿಸಿದರು.

ಸಮಾಜದ ಉಪಯೋಗ ತೆಗೆದುಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಪಂಚಮಸಾಲಿ ಸಮಾಜ 10 ಲಕ್ಷ ಜನ ಬೆಂಗಳೂರಿನಲ್ಲಿ ಸೇರಿದ್ದರು. ವೀರಶೈವ ಮಹಾಸಭಾದಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ. ಇಷ್ಟು ಜನರನ್ನು ಸೇರಿಸಲು ಅವರಿಂದ ಆಗಿಲ್ಲ ಎಂದರು.

ಇದನ್ನೂ ಓದಿ: ರಾಮನಗರ ಒಕ್ಕಲಿಗ ನಾಯಕತ್ವಕ್ಕಾಗಿ ಅಶ್ವತ್ಥನಾರಾಯಣ್ ವಿರುದ್ಧ ಆರೋಪ: ಎಸ್.ಟಿ. ಸೋಮಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.