ETV Bharat / state

ಆಜಾದಿ ಕಾ ಅಮೃತ ಮಹೋತ್ಸವ.. ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

author img

By

Published : Aug 9, 2022, 5:54 PM IST

ರಾಣಿ ಕಿತ್ತೂರು ಚೆನ್ನಮ್ಮನ ಬಂಟ ರಾಯಣ್ಣರ ಹೆಸರು ಕೇಳುತ್ತಿದ್ದರೆ ಬ್ರಿಟಿಷರ ಸದ್ದಡಗುತ್ತಿತ್ತು. ಇಂತಹ ವೀರನ ಹುಟ್ಟೂರು ಬೆಳಗಾವಿ ಜಿಲ್ಲೆ ಎಂಬುದೇ ಕನ್ನಡಿಗರಿಗೆ ಹೆಮ್ಮೆಯ ವಿಷಯ.

freedom fighter Sangolli Rayannaabbakka and chennamma
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬೆಳಗಾವಿ: ಶೌರ್ಯ, ಪರಾಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಚಿಲುಮೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾ ದೇಶಪ್ರೇಮಿ‌. ಭಾರತ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಈ ಸಂಭ್ರಮಕ್ಕೆ ಕಾರಣರಾದವರು ಲೆಕ್ಕವಿಲ್ಲದಷ್ಟು ಸ್ವಾತಂತ್ರ್ಯ ಹೋರಾಟಗಾರರು. ಇಂತಹ ವೀರಪುತ್ರರ ಪೈಕಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೂಡ ಪ್ರಮುಖರು.

ರಾಯಣ್ಣನ ತಂದೆಯೂ ಪರಾಕ್ರಮಿ: ರಾಯಣ್ಣರ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿರುವ ಮಲಪ್ರಭಾ ನದಿಯ ದಡದಲ್ಲಿರುವ ಹಳ್ಳಿ. ಭರಮಪ್ಪ-ಕೆಂಚವ್ವ ದಂಪತಿ ಪುತ್ರನಾಗಿ 1798ರ ಆಗಸ್ಟ್ 15ರಂದು ರಾಯಣ್ಣ ಜನಿಸಿದ್ದರು. ರಾಯಣ್ಣರ ತಂದೆಯೂ ಪರಾಕ್ರಮದ ಮೂಲಕವೇ ಕಿತ್ತೂರು ರಾಜ ಮಲ್ಲಸರ್ಜನ ಪ್ರೀತಿಗೆ ಪಾತ್ರರಾಗಿದ್ದರು‌.

ಕಿತ್ತೂರು ಮೊದಲಿನಿಂದಲೂ ಸಂಪತ್ತಿನಿಂದ ಕೂಡಿದ್ದ ಸಿರಿವಂತ ಸಂಸ್ಥಾನವಾಗಿತ್ತು. ಇಂತಹ ಊರಿನ ಮೇಲೂ ಬ್ರಿಟಿಷರ ಕೆಂಗಣ್ಣು ಬಿದ್ದಿತ್ತು. ಕಿತ್ತೂರನ್ನು ಕಬಳಿಸುವ ಹುನ್ನಾರ ಮಾಡಿದ್ದ ಆಂಗ್ಲರಲ್ಲಿ ರಾಯಣ್ಣ ನಡುಕ ಹುಟ್ಟಿಸಿದ್ದರು. ಕಿತ್ತೂರು ಸಾಮ್ರಾಜ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ರಾಂತಿವೀರ ರಾಯಣ್ಣ ತೊಡೆತಟ್ಟಿದ್ದರು. ಹೀಗಿರುವಾಗಲೇ ರಾಯಣ್ಣ ಮೋಸದ ಬಲೆಗೆ ಬಿದ್ದು, ನೇಣುಗಂಬ ಏರಬೇಕಾಯಿತು. ನೇಣುಗಂಬ ಏರಿದ ನಂದಗಡ ಇದೀಗ ಪುಣ್ಯ ಸ್ಥಳವಾಗಿದೆ.

freedom fighter Sangolli Rayanna
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬ್ರಿಟಿಷರನ್ನು ಕಾಡಿದ ರಾಯಣ್ಣ: ದೇಶದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯಕ್ಕಾಗಿ ಕಹಳೆ ಮೊಳಗಿದಾಗ, ದೊಡ್ಡ ದೊಡ್ಡ ರಾಜರುಗಳೇ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಗದೇ ಕಪ್ಪ ಕಾಣಿಕೆ ಕೊಟ್ಟು ಸುಮ್ಮನಾಗಿದ್ದರು. ಆದರೆ ಸಂಗೊಳ್ಳಿ ರಾಯಣ್ಣ ತಮ್ಮ ಸ್ನೇಹಿತರ ಜೊತೆ ಸೇರಿ ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ್ದರು. ಗೆರಿಲ್ಲಾ ಯುದ್ಧ ತಂತ್ರ ಅರಿತಿದ್ದ ಶೂರ ರಾಯಣ್ಣರನ್ನು ನೇಣಿಗೇರಿಸಲಾಯಿತು. ನಂದಗಡವೀಗ ಶೌರ್ಯ, ತ್ಯಾಗದ ಪ್ರತೀಕವಾಗಿದೆ.

ವಿಶೇಷ ದಿನಗಳು: ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಾವಿರಾರು ಜನ ಪಾದಯಾತ್ರೆಯ ಮೂಲಕ ಇಲ್ಲಿಗೆ ಆಗಮಿಸುತ್ತಾರೆ. ರಾಯಣ್ಣನ ಹುಟ್ಟುಹಬ್ಬದ ದಿನದಂದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಜನವರಿ 26 ರಾಯಣ್ಣ ನೇಣಿಗೇರಿದ ಪುಣ್ಯಸ್ಮರಣೆಯ ದಿನದಂದೇ ಗಣರಾಜ್ಯೋತ್ಸವವಾಗಿದೆ. ಹೀಗಾಗಿಯೇ ಈ ಎರಡೂ ಆಚರಣೆಗಳು ವಿಶೇಷ ಎನಿಸಿದೆ. ರಾಯಣ್ಣರ ಸ್ವಾಮಿನಿಷ್ಠೆ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟ ಇಂದಿಗೂ ಮಾದರಿಯಾಗಿದೆ.

ದಬ್ಬಾಳಿಕೆ ವಿರುದ್ಧ ಸಿಡಿದೆದ್ದ ರಾಯಣ್ಣ: ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಆಂಗ್ಲ ದೊರೆಗಳ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದರು. ಅವರ ಜಮೀನನ್ನು ಕೂಡ ಕಿತ್ತುಕೊಳ್ಳಲಾಗಿತ್ತು. ಇದರಿಂದ ಕೈಕಟ್ಟಿ ಕುಳಿತುಕೊಳ್ಳದ ಸಂಗೊಳ್ಳಿ ರಾಯಣ್ಣ ತನ್ನದೇ ಒಂದು ಸಮರ್ಥ ತಂಡವನ್ನು ಕಟ್ಟಿದರು. ಆಂಗ್ಲರ ದಬ್ಬಾಳಿಕೆಯ ವಿರುದ್ಧ, ಆಂಗ್ಲರ ಜೊತೆ ಕೈಜೋಡಿಸಿದ್ದ ಭೂಮಾಲೀಕರ ವಿರುದ್ಧ ತಿರುಗಿ ನಿಂತರು. ಗೆರಿಲ್ಲಾ ತಂತ್ರಗಾರಿಕೆ ಬಳಸಿ ಭೂಮಾಲಿಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡರು. ಅಲ್ಲದೇ ಅವರಿಂದ ಕಿತ್ತುಕೊಂಡ ಹಣವನ್ನೂ ಬಡವರಿಗೆ ಹಂಚಿದರು.

ದಂಡೆತ್ತಿ ಬಂದವರ ಹಿಮ್ಮೆಟ್ಟಿಸಿದ ಪಡೆ: ಕಪ್ಪ ಸಿಗದೇ ಕೋಪಗೊಂಡಿದ್ದ ಬ್ರಿಟಿಷರು ಅಕ್ಟೋಬರ್ 21, 1824ರಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ವೀರ ರಾಣಿ ಚೆನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟರು. ದೊಡ್ಡ ಕಾಳಗವೇ ನಡೆದು ಹೋಯಿತು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನಿಕರು ಮುನ್ನುಗ್ಗಿದ್ದರು. ಬಾಳಪ್ಪನ ಕೋವಿಯಿಂದ ಹಾರಿದ ಗುಂಡು ಬ್ರಿಟಿಷ್​​ ಕಲೆಕ್ಟರ್ ಥ್ಯಾಕರೆಯ ರುಂಡ ಉರುಳಿಸಿತು. ಸೈನಿಕನೊಬ್ಬ ಇದನ್ನು ತನ್ನ ಕತ್ತಿಗೆ ಸಿಕ್ಕಿಸಿ ಗೆಲುವಿನ ಚಿಹ್ನೆಯಂತೆ ಮೇಲೆತ್ತಿ ಹಿಡಿದ. ಹೆದರಿದ ಆಂಗ್ಲರ ಪಡೆ ಹಿಮ್ಮೆಟ್ಟಿತ್ತು. ರಾಯಣ್ಣ ಈ ಕಾಳಗದಲ್ಲಿ ತನ್ನ ಪರಾಕ್ರಮ ಮೆರೆದಿದ್ದರು.

ಕೆಲ ಸಮಯದ ಬಳಿಕ ಕಿತ್ತೂರು ಚೆನ್ನಮ್ಮ ಆಂಗ್ಲರ ಸೆರೆಯಾದರು. ರಾಯಣ್ಣ, ಚೆನ್ನಬಸವಣ್ಣನವರನ್ನು ಕೆಲಹೊತ್ತು ಸೆರೆಮನೆಯಲ್ಲಿಟ್ಟು, ನಂತರ ಬಿಡುಗಡೆಗೊಳಿಸಿದರು. ಆದರೆ ರಾಣಿ ಮಾತ್ರ ಸೆರೆಮನೆಯಲ್ಲೇ ಕೊನೆಯುಸಿರೆಳೆದರು. ಈ ನಡುವೆ ರಾಯಣ್ಣ ಹೆಸರುವಾಸಿಯಾಗುವುದನ್ನು ಕಂಡು, ರಾಯಣ್ಣನನ್ನು ಮೆಟ್ಟಿನಿಲ್ಲಬೇಕೆಂದು ನಿರ್ಧರಿಸಿದ ಆಂಗ್ಲ ಅಧಿಕಾರಿಗಳು ಸಂಚು ಹೂಡಿ, ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಸಂಬಂಧಿಯಿಂದಲೇ ಮೋಸ: ಇದಕ್ಕಾಗಿ ಅವರು ಬಳಸಿಕೊಂಡಿದ್ದು ರಾಯಣ್ಣನ ಸಂಬಂಧಿ ಲಕ್ಷ್ಮಣನನ್ನು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಆಂಗ್ಲ ಸೈನಿಕರು ಆಕ್ರಮಣ ಮಾಡಿದಾಗ ರಾಯಣ್ಣನ ಖಡ್ಗ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ನೀಡೆಂದು ಕೇಳಿದರೂ ಲಕ್ಷ್ಮಣ ಕೊಡದೇ ಮೋಸ ಮಾಡಿದ್ದ. ವಿಧಿಯಿಲ್ಲದೇ ರಾಯಣ್ಣ ಆಂಗ್ಲರ ಕೈವಶವಾಗಬೇಕಾಯಿತು. ಕೊನೆಗೆ 1831ರ ಜನವರಿ 26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ರಾಯಣ್ಣನನ್ನು ಆಲದ ಮರಕ್ಕೆ ನೇಣಿಗೇರಿಸಿದರು. ಗಲ್ಲಿಗೇರಿಸುವ ಮುನ್ನ ಆಂಗ್ಲ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ, 'ಭಾರತದಲ್ಲಿಯೇ ಮತ್ತೆ ಹುಟ್ಟಿ ಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು' ಎಂದು ಸಿಂಹದಂತೆ ಘರ್ಜಿಸಿದ್ದರು.

ಇದನ್ನೂ ಓದಿ: ಕರುನಾಡ ವೀರ ರಾಣಿಯರು ದಾಸ್ಯಮುಕ್ತಿಗಾಗಿ ಹೋರಾಡಿದ ಧೀರೋದಾತ್ತ ಪರಂಪರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.