ETV Bharat / state

ಬಿಜೆಪಿ ಸದಸ್ಯರ ಧರಣಿ ನಡುವೆಯೇ 5 ವಿಧೇಯಕಗಳಿಗೆ ಅಂಗೀಕಾರ ನೀಡಿದ ವಿಧಾನಸಭೆ

author img

By ETV Bharat Karnataka Team

Published : Dec 11, 2023, 6:56 PM IST

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಧರಣಿಯ ನಡುವೆಯೇ 5 ವಿಧೇಯಕಳಿಗೆ ಅಂಗೀಕಾರ ನೀಡಲಾಗಿದೆ.

5-bills-presented-in-the-assembly-today
ಬಿಜೆಪಿ ಸದಸ್ಯರ ಧರಣಿ ನಡುವೆಯೇ 5 ವಿಧೇಯಕಗಳಿಗೆ ಅಂಗೀಕಾರ ನೀಡಿದ ವಿಧಾನಸಭೆ

ಬಿಜೆಪಿ ಸದಸ್ಯರ ಧರಣಿ ನಡುವೆಯೇ 5 ವಿಧೇಯಕಗಳಿಗೆ ಅಂಗೀಕಾರ ನೀಡಿದ ವಿಧಾನಸಭೆ

ಬೆಳಗಾವಿ/ ಬೆಂಗಳೂರು : ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತೆಲಂಗಾಣ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದ ನಡುವೆಯೇ 5 ವಿಧೇಯಕಗಳನ್ನು ಚರ್ಚೆ ಇಲ್ಲದೇ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಇಂದು ಬೆಳಗ್ಗೆ ಪ್ರಶೋತ್ತರ ಅವಧಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರ ಉತ್ತರವನ್ನು ತಿರಸ್ಕರಿಸುವುದಾಗಿ ಹೇಳಿದ ಬಿಜೆಪಿ ಸದಸ್ಯರು, ವಿವಾದಿತ ಹೇಳಿಕೆ ನೀಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟುಹಿಡಿದರು.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ: ಸರ್ಕಾರ ಬಿಜೆಪಿ ಸದಸ್ಯರ ಬೇಡಿಕೆಗೆ ಸ್ಪಂದಿಸದಿದ್ದಾಗ ಸದನದ ಬಾವಿಗಿಳಿದು ಸದಸ್ಯರು ಧರಣಿ ಆರಂಭಿಸಿದರು. ಇದರ ನಡುವೆಯೇ ಪ್ರಶೋತ್ತರ ಕಲಾಪ ನಡೆಯಿತು. ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಆನ್​ಲೈನ್ ಗೇಮ್​ಗಳನ್ನು ಜಿಎಸ್‌ಟಿ ತೆರಿಗೆ ವ್ಯಾಪ್ತಿಗೊಳಪಡಿಸಲು ವಿಧೇಯಕ ರೂಪಿಸಲಾಗಿದೆ. ಅಷ್ಟು ಮಾತ್ರಕ್ಕೆ ಆನ್‌ಲೈನ್ ಗೇಮ್​ಗಳನ್ನು ಕಾನೂನುಬದ್ದಗೊಳಿಸಲಾಗಿದೆ ಎಂದರ್ಥವಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ಕಾಯ್ದೆಗನುಗುಣವಾಗಿ ರಾಜ್ಯಸರ್ಕಾರ ತಿದ್ದುಪಡಿಯನ್ನು ರೂಪಿಸಿದೆ ಎಂದು ಸಚಿವರು ಹೇಳಿದರು.

ವೈದ್ಯಕೀಯ ಅಭ್ಯರ್ಥಿಗಳ ಕಡ್ಡಾಯ ಸೇವಾ ವಿಧೇಯಕ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, 2023ನೇ ಸಾಲಿನಲ್ಲಿ ಕರ್ನಾಟಕ ವೈದ್ಯಕೀಯ ಕೋರ್ಸ್​ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕದಿಂದ ಸರ್ಕಾರಿ ಆಸತ್ರೆಗಳಲ್ಲಿ ವೈದ್ಯರ ಕೊರತೆ ನೀಗಲಿದೆ ಎಂದು ಹೇಳಿದರು.

ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ : ನಂತರ ಕಂದಾಯ ಇಲಾಖೆಗೆ ಸೇರಿದ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವಿಧೇಯಕ ನೋಂದಣಿ ಸ್ಟಾಂಪ್ ಶುಲ್ಕವನ್ನು ಹೆಚ್ಚಿಸುವುದಲ್ಲ. ಬದಲಾಗಿ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಖರೀದಿಸುವ ಸ್ಟಾಂಪ್‌ಗಳ ದರವನ್ನು ಹೆಚ್ಚಿಸಲಾಗಿದೆ. 5, 10, 20 ರೂ.ಗಳಿದ್ದ ದರವನ್ನು ಕಾಲಕ್ಕನುಗುಣವಾಗಿ ಹೆಚ್ಚಿಸಲಾಗಿದೆ. ಈ ಮೊದಲು 1994 ಮತ್ತು 2002ರಲ್ಲಿ ಮಾತ್ರ ಕೆಲ ಸ್ಟಾಂಪ್ ಗಳ ಮೇಲೆ ದರ ಪರಿಷ್ಕರಣೆಯಾಗಿತ್ತು ಎಂದು ಸದನಕ್ಕೆ ವಿವರಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಸಚಿವ ಕೃಷ್ಣಬೈರೇಗೌಡ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಿದರು. ಮಲೆನಾಡು ಭಾಗದಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವಿಸ್ತೀರ್ಣ ವಿಶಾಲವಾಗಿರುತ್ತದೆ. ಜನಸಂಖ್ಯೆ ಕಡಿಮೆ ಇರುತ್ತದೆ. ಮಲೆನಾಡಿನ ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ತಾಲೂಕುಗಳನ್ನು ಹೊರತುಪಡಿಸಿ ವಿವಿಧ ಮಲೆನಾಡು ಭಾಗದಲ್ಲಿ ಪ್ರತಿ ಕ್ಷೇತ್ರದ ಜನಸಂಖ್ಯೆಯನ್ನು 18 ರಿಂದ 25 ಸಾವಿರಕ್ಕೆ ಮರು ನಿಗದಿ ಮಾಡಲು ಈ ಕಾಯ್ದೆ ಅವಕಾಶ ಕಲ್ಪಿಸಲಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಪ್ರತಿಕ್ಷೇತ್ರದ ಜನಸಂಖ್ಯೆ 35 ರಿಂದ 45 ಸಾವಿರದಷ್ಟಿದೆ ಎಂದು ಸದನಕ್ಕೆ ತಿಳಿಸಿದರು.

ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ : ಈ ವೇಳೆ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂತರ್‌ಗೌಡ ಸೇರಿದಂತೆ ಕೆಲವು ಆಡಳಿತ ಪಕ್ಷದ ಶಾಸಕರು ಮಾತ್ರ ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ನಾಲ್ಕು ವಿಧೇಯಕಗಳು ಯಾವುದೇ ಚರ್ಚೆಯಿಲ್ಲದೇ ಧ್ವನಿ ಮತದ ಮೂಲಕ ಅಂಗೀಕಾರಗೊಂಡವು. ನಂತರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಸುಧಾಕ‌ರ್ ಅವರು, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಮಂಡಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷರು, ಇದೇ ಪ್ರಮುಖ ವಿಚಾರ. ಕರಾವಳಿ ಭಾಗದ ಶಾಸಕರು ಚರ್ಚೆಯಲ್ಲಿ ಭಾಗವಹಿಸುವಂತೆ ಎಂದು ಸಲಹೆ ನೀಡಿದರು. ಆದರೂ ಬಿಜೆಪಿ ವತಿಯಿಂದ ನಡೆಯುತ್ತಿದ್ದ ಧರಣಿ, ಘೋಷಣೆಗಳ ಕೂಗಾಟ ಮುಂದುವರೆದಿತ್ತು. ಹೀಗಾಗಿ ಮತ್ತೊಮ್ಮೆ ಯಾವುದೇ ಚರ್ಚೆಯಿಲ್ಲದೆ ಒಟ್ಟು 5 ವಿಧೇಯಕಗಳು ಅಂಗೀಕಾರಗೊಂಡವು.

ಇದರ ಮಧ್ಯೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಸದನವನ್ನು ಈ ರೀತಿ ನಡೆಸುವುದು ಸರಿಯಲ್ಲ. ಚರ್ಚೆಯಿಲ್ಲದೇ ವಿಧೇಯಕಗಳನ್ನು ಅಂಗೀಕರಿಸುವುದು ಇಷ್ಟವಿಲ್ಲ. ಆದರೆ ಅಂತಹ ಪರಿಸ್ಥಿತಿಯನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಜಮೀರ್ ಹೇಳಿಕೆ ಖಂಡಿಸಿ ವಿಪಕ್ಷಗಳಿಂದ ಧರಣಿ: ಬಿಜೆಪಿಯವರು ಜನ ವಿರೋಧಿಗಳು ಎಂದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.