ದೇವನಹಳ್ಳಿ (ಬೆಂಗಳೂರು): ಯುವ ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾದ ಬಳಿಕ ಇಂದು ಮೊದಲ ಬೆಂಗಳೂರಿಗೆ ಮರಳಿದ್ದಾರೆ. ಈ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಸದ ಮುನಿಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಅವರನ್ನ ಸ್ವಾಗತಿಸಿದರು.
ತೇಜಸ್ವಿ ಸೂರ್ಯ ಆಗಮಿಸುತ್ತಿದ್ದಂತೆ ಜೈಕಾರ ಕೂಗಿದ ಕಾರ್ಯಕರ್ತರು, ಹೂಮಾಲೆ ಅರ್ಪಿಸಿ ಅಭಿನಂದಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಅಬ್ಬರದಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದರು. ದೈಹಿಕ ಅಂತರ ಮರೆತು ಒಟ್ಟಾಗಿ ಸೇರಿದ್ದರು. ಅಲ್ಲದೆ ಸಾದಹಳ್ಳಿ ಟೋಲ್ ಬಳಿಯಿಂದ ಬೆಂಗಳೂರಿನ ಬಿಜೆಪಿ ಕಚೇರಿವರೆಗೂ ರ್ಯಾಲಿ ಆಯೋಜಿಸಲಾಗಿತ್ತು.
ಆದರೆ, ಬಿಜೆಪಿ ಕಾರ್ಯಕರ್ತರ ದಟ್ಟನೆಯಿಂದ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ತೇಜಸ್ವಿ ಸೂರ್ಯ, ‘ಯಾರು ಧರ್ಮವನ್ನು ರಕ್ಷಿಸುತ್ತಾರೂ ಅವರನ್ನು ಧರ್ಮ ಕಾಪಾಡುತ್ತದೆ, ನ್ಯಾಯಕ್ಕೆ ಇಂದು ಜಯಸಿಕ್ಕಿದೆ, ಇಂದು ದೇಶವೇ ಸಂಭ್ರಮಾಚರಣೆ ಆಚರಿಸುತ್ತಿದೆ’ ಎಂದರು.