ಮುಂದಿನ ವರ್ಷ ಯುವ ಬಜೆಟ್ ಮಂಡನೆ: ಸಿಎಂ ಬೊಮ್ಮಾಯಿ

author img

By

Published : Aug 4, 2022, 10:18 PM IST

ಸಿಎಂ

ದೇಶದ ಶೇ. 46 ರಷ್ಟು ಜನಸಂಖ್ಯೆಯಲ್ಲಿ ಯುವಕರಿದ್ದಾರೆ. ಇವರನ್ನು ದೇಶ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೆಂಗಳೂರು: ಕರಡು ಯುವ ನೀತಿಯನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಶೀಘ್ರದಲ್ಲಿಯೇ ಯುವ ನೀತಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ಮುಂದಿನ ವರ್ಷ ಯುವ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಡಾ.ಆರ್.ಬಾಲಸುಬ್ರಹ್ಮಣ್ಯ ಸಮಿತಿ ಇಂದು ಕರಡು ಯುವ ನೀತಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ದೇಶದ ಶೇ. 46 ರಷ್ಟು ಜನಸಂಖ್ಯೆಯಲ್ಲಿ ಯುವಕರಿದ್ದಾರೆ. ಇವರನ್ನು ದೇಶ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಆರ್ಥಿಕ ಅಭಿವೃದ್ಧಿಯ ಮೂಲಕ ಯುವ ಸಬಲೀಕರಣವಾಗಬೇಕಾಗಿದೆ. ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣವೂ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಯವ್ಯಯದಲ್ಲಿ ಯುವ ಬಜೆಟ್​ ರೂಪಿಸಲಾಗುವುದು ಎಂದರು.

ಯುವ ನೀತಿಯ ಕರಡನ್ನು ಕೂಡಲೇ ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡು ನೀತಿಯನ್ನು ಜಾರಿಗೊಳಿಸಲಾಗುವುದು. ಈ ಕರಡು ಯುವ ನೀತಿಯ ಮುಖ್ಯಾಂಶಗಳನ್ನು ಉಲ್ಲೇಖಿಸಿದ ಡಾ.ಬಾಲಸುಬ್ರಹ್ಮಣ್ಯ ಅವರು ನೀತಿಯು ಯುವ ಕೇಂದ್ರಿತವಾಗಿದ್ದು, ನೀತಿಯ ಅನುಷ್ಠಾನಕ್ಕೆ ಕಾರ್ಯತಂತ್ರ, ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನದ ಅಂಶಗಳನ್ನೂ ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿ ಗುರಿಯೊಂದಿಗೂ ಸಂಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ರಾಜ್ಯದಲ್ಲೂ ಸ್ಕ್ರ್ಯಾಪ್ ನೀತಿ ಜಾರಿ: 15 ವರ್ಷಕ್ಕಿಂತ ಹಳೆಯ ವಾಹನಗಳಿನ್ನು ಗುಜರಿಗೆ

ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ: ಆಯವ್ಯಯದಲ್ಲಿ ಯುವಕರು ಸ್ವ ಉದ್ಯೋಗ ಕೈಗೊಳ್ಳಲು ರೂಪಿಸಿರುವ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ, ಯುವಕರ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಲು ಆಂಕರ್ ಬ್ಯಾಂಕ್ ಆಗಿ ನೇಮಕಗೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಈ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಯಿತು. ರಾಜ್ಯದ ಪ್ರತಿ ಗ್ರಾಮದಲ್ಲಿ ಯುವ ಸ್ವಸಹಾಯ ಸಂಘಗಳನ್ನು ರಚಿಸಿ, ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ, ಬೀಜಧನ ಹಾಗೂ ಮಾರುಕಟ್ಟೆ ಅವಕಾಶ ಕಲ್ಪಿಸುವ ಮೂಲಕ ಯುವಕರ ಆರ್ಥಿಕ ಸಬಲೀಕರಣ ಸಾಧಿಸುವ ಗುರಿಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.