ಬೆಂಗಳೂರು: ಇಡೀ ದೇಶದ ಸಾರಿಗೆ ನಿಗಮಗಳಲ್ಲಿಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಳಿದೆಲ್ಲವುಗಳಿಗಿಂತ ಮುಂಚೂಣಿಯಲ್ಲಿದೆ. ಇದೀಗ ಮತ್ತೆರಡು ಹೊಸ ಸರಣಿಯ ಬಸ್ಗಳನ್ನು ಕರಾರ ಸಾರಿಗೆ ಸಂಸ್ಥೆ ರಸ್ತೆಗಿಳಿಸುತ್ತಿದ್ದು, ಹೊಸ ಬಸ್ಗಳಿಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಮತ್ತು ಗ್ರಾಫಿಕ್ ಡಿಸೈನ್ ಸ್ಪರ್ಧೆ ಆಯೋಜಿಸಿದೆ. ಈ ಸ್ಫರ್ಧೆಯಲ್ಲಿ ಆಯ್ಕೆಯಾದವರಿಗೆ ನಗದು ಪುರಸ್ಕಾರದ ಘೋಷಣೆಯನ್ನೂ ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಪ್ರಯಾಣಿಕರಿಗೆ ಅತ್ಯುನ್ನತ ಶ್ರೇಣಿಯ ಪ್ರವಾಸದ ಅನುಭವವನ್ನು ನೀಡಲು ನೂತನ ಶ್ರೇಣಿಯ ವಾಹನಗಳ ಸೇವೆಯನ್ನು ಪರಿಚಯಿಸುತ್ತಿದೆ. ಹೊಸ ಬಿಎಸ್ VI-9600 ಮಲ್ಟಿ ಆಕ್ಸಲ್ ವೋಲ್ವೋ ಬಸ್ ಹಾಗೂ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ನ್ನು ಪರಿಚಯಿಸುತ್ತಿದ್ದು, ಈ ಎರಡು ಬಸ್ಗಳಿಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಮತ್ತು ಗ್ರಾಫಿಕ್ ಡಿಸೈನ್ ಮಾಡಿಕೊಡುವಂತೆ ಆಹ್ವಾನ ನೀಡಲಾಗಿದ್ದು, ಪ್ರಯಾಣಿಕರು, ಜನತೆ ತಮ್ಮ ಬ್ರಾಂಡ್ ಐಡಿಯಾಗಳನ್ನು ಇಮೇಲ್ cpro@ksrtc.org ಗೆ ಡಿಸೆಂಬರ್ 5 ರ ಒಳಗೆ ಕಳುಹಿಸುವಂತೆ ಸೂಚಿಸಿದೆ.
ಉತ್ತಮ ಟ್ಯಾಗ್ ಲೈನ್ ನೊಂದಿಗೆ ಬ್ರಾಂಡ್ ಹೆಸರನ್ನು ಸೂಚಿಸಿದವರಿಗೆ ಪ್ರತಿ ಮಾದರಿ ಬಸ್ಗೆ 10 ಸಾವಿರ ನಗದು ಬಹುಮಾನ ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ 25 ಸಾವಿರ ನಗದು ಬಹುಮಾನ ನೀಡುವ ಘೋಷಣೆ ಮಾಡಿದೆ. ಆಯ್ಕೆಯಾದ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಮತ್ತು ಗ್ರಾಫಿಕ್ ಡಿಸೈನ್ ವಿಜೇತರು ಸಾರಿಗೆ ನಿಗಮದ ನಗದು ಪುರಸ್ಕಾರ ಪಡೆದುಕೊಂಡು ಇವುಗಳ ಹಕ್ಕುಗಳನ್ನು ಸಾರಿಗೆ ನಿಗಮಕ್ಕೆ ಬಿಟ್ಟುಕೊಡಬೇಕಾಗಲಿದೆ ಎಂದು ತಿಳಿಸಿದೆ.
ಈ ಹಿಂದೆ ದಸರಾ ಸಂದರ್ಭದಲ್ಲಿ ಮೈಸೂರು ಹಾಗೂ ಮಂಗಳೂರು ವಿಭಾಗದಿಂದ ವಿಶೇಷ ಪ್ಯಾಕೇಜ್ ಪ್ರವಾಸ ಏರ್ಪಡಿಸಿ ಪ್ರಯಾಣಿಕರಿಗೆ ಆಯೋಜಿಸಿದ್ದ ನಮ್ಮೊಡನೆ ನಿಮ್ಮ ಪ್ರವಾಸ ಪ್ರಯಾಣದ ವಿಡಿಯೋ ಹಂಚಿಕೊಳ್ಳುವ ಸ್ಪರ್ಧೆಯಲ್ಲಿ ಫೇಸ್ ಬುಕ್ನಲ್ಲಿ ಅತ್ಯುತ್ತಮ ಪ್ರಯಾಣದ ವೀಡಿಯೋ ಹಂಚಿಕೊಂಡಿದ್ದ ಮೂವರು ಮತ್ತು ಟ್ವಿಟರ್ನಲ್ಲಿ ಪ್ರಯಾಣದ ಅತ್ಯುತ್ತಮ ವಿಡಿಯೋ ಹಂಚಿಕೊಂಡಿದ್ದ ಇಬ್ಬರಿಗೆ ಬಹುಮಾನ ಘೋಷಣೆ ಮಾಡಿತ್ತು.
ಈ ಹಿಂದೆ ಪ್ಲಾಸ್ಟಿಕ್ ನಿಷೇಧ ಮಾಡಿದ್ದ ವೇಳೆ ಮೈ ಓನ್ ವಾಟರ್ ಬಾಟಲ್ ಸ್ಪರ್ಧೆ ಆಯೋಜನೆ ಮಾಡಿತ್ತು. ಇದೀಗ ಹೊಸ ಬಸ್ಗಳಿಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಮತ್ತು ಗ್ರಾಫಿಕ್ ಡಿಸೈನ್ ಸ್ಪರ್ಧೆ ಆಯೋಜಿಸಿದೆ.
ಇದನ್ನೂ ಓದಿ:ಸಂಭ್ರಮದ ಜೊತೆ ದೈವಭಕ್ತಿಯಿಂದ ನೆರವೇರಿದ ಕುಕ್ಕೆ ಚಂಪಾಷಷ್ಠಿ ಉತ್ಸವ