ETV Bharat / state

ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಕನಿಷ್ಠ ಉಷ್ಣಾಂಶ ದಾಖಲು: ನಾಲ್ಕು ಜಿಲ್ಲೆಗಳಿಗೆ ಶೀತ ಮಾರುತಗಳ ಎಚ್ಚರಿಕೆ

author img

By

Published : Jan 14, 2023, 6:55 PM IST

ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಹೆಚ್ಚಿದ ಚಳಿಯ ವಾತಾವರಣ - ಬಾಗಲಕೋಟೆಯಲ್ಲಿ ಅತೀ ಕನಿಷ್ಠ ಉಷ್ಣಾಂಶ ದಾಖಲು - ವಿಜಯಪುರದಲ್ಲಿ 9.8 ಸೆಲ್ಸಿಯಸ್ ಪತ್ತೆ.

weather-report-of-karnataka
ಸಾಮಾನ್ಯಕ್ಕಿಂತ ಕನಿಷ್ಠ ಉಷ್ಣಾಂಶ ದಾಖಲು

ಬೆಂಗಳೂರು: ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಸಾಮಾನ್ಯಕ್ಕಿಂತ ಹೆಚ್ಚೇ ಚಳಿಯ ವಾತಾವರಣವಿದ್ದು, ಈ ಬಾರಿಯ ಚಳಿಗಾಲ ತೀವ್ರವಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 8.2 ಡಿಗ್ರಿ ಸೆಲ್ಸಿಯಸ್ ಬಾಗಲಕೋಟೆಯಲ್ಲಿ ದಾಖಲಾಗಿದೆ. ಚಿಂತಾಮಣಿಯಲ್ಲಿ 9.3, ಮೈಸೂರಲ್ಲಿ 9.4, ವಿಜಯಪುರದಲ್ಲಿ 9.8 ಡಿಗ್ರಿ ಸೆಲ್ಸಿಯಸ್ ಪತ್ತೆಯಾಗಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ತಿಳಿಸಿದರು. ನಿನ್ನೆ ಬಿಜಾಪುರ, ಬಾಗಲಕೋಟೆ ಮೈಸೂರಿನಲ್ಲಿ ಶೀತ ಅಲೆ ಮುಂದುವರೆದಿತ್ತು.

ಶೀತ ಮಾರುತಗಳ ಎಚ್ಚರಿಕೆ: ಉತ್ತರ ಒಳನಾಡಿನ ಬಿಜಾಪುರ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಮೈಸೂರು, ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಶೀತ ಮಾರುತಗಳು ಬೀಸುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ. ಕನಿಷ್ಠ ಉಷ್ಣಾಂಶವು ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 5 ರಿಂದ 7 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳ ಅಲರ್ಟ್: ಕನಿಷ್ಠ ಉಷ್ಣಾಂಶವು ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ. ಮುಂದಿನ ದಿನಗಳಲ್ಲಿ ಶೀತ ಮಾರುತಗಳ ಪ್ರಭಾವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಕಡಿಮೆ ಸಾಂದ್ರತೆ ದಟ್ಟಮಂಜು, ಮಂಜುವಿನಿಂದ ಮದ್ಯಮ ಸಾಂದ್ರತೆ ದಟ್ಟಮಂಜು, ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೀದರ್​ನಲ್ಲೂ ಮೈ ಕೊರೆಯುವ ಚಳಿ: ಗಡಿ ಜಿಲ್ಲೆ ಬೀದರ್​ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಜನವರಿ 9ರಂದು ಜಿಲ್ಲೆಯಲ್ಲಿ 5.5 ಡಿಗ್ರಿ ಸೆಲ್ಸಿಯಸ್‍ ಅತ್ಯಂತ ಕಡಿಮೆ ತಾಪಮಾನ ದಾಖಲಾದರೆ, ಗುರುವಾರದಂದು ತಾಪಮಾನ 8 ಡಿಗ್ರಿ ಸೆಲ್ಸಿಯಸ್‍ಗೆ ಇಳಿದಿದೆ. ಇದರಿಂದ ಜನರು ಮನೆ ಬಿಟ್ಟು ಹೊರ ಬಾರದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ಬಗ್ಗೆ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಮುಂದಿನ ಎರಡು ದಿನಗಳಲ್ಲಿ ತಾಪಮಾನ 6 - 12 ಡಿಗ್ರಿ ಸೆಲ್ಸಿಯಸ್​ವರೆಗೆ ಇರಲಿದ್ದು ಜನರು ಮುಂಜಾಗೃತ ಕ್ರಮಗಳನ್ನು ವಹಿಸುವಂತೆ ಸೂಚಿಸಿದೆ.

ಕೈಗವಸ ಸ್ವೆಟರ್‌ಗಳು ಧರಿಸಿ: ಹೊರಗಡೆ ತಿರುಗಾಡುವ ಸಮಯದಲ್ಲಿ ಜನರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಕೈಗವಸು ಮುಖಗವಸುಗಳನ್ನು ಬಳಸಬೇಕು. ಅಲ್ಲದೇ ಮನೆಯೊಳಗೆ ಇರುವಾಗ ಕೂಡ ಆದಷ್ಟು ಸ್ವೆಟರ್‌ಗಳು ಧರಿಸುವುದು ಒಳ್ಳೆಯದು. ದೀರ್ಘ ಸಮಯಗಳವರೆಗೆ ಜನರು ತೀವ್ರ ಚಳಿ ಗಾಳಿಯಲ್ಲಿ ಓಡಾಡಿದಲ್ಲಿ ಮೂಗಿನಲ್ಲಿ ರಕ್ತ, ಅಸ್ತಮಾದಲ್ಲಿ ಏರುಪೇರು, ಜ್ವರದ ಲಕ್ಷಣಗಳು ಹಾಗೂ ತ್ವಚೆಯಲ್ಲಿ ತುರಿಕೆ ಕಂಡುಬರುವ ಲಕ್ಷಣಗಳಿರುತ್ತವೆ. ಇದರಿಂದ ರಕ್ಷಣೆ ಪಡೆದುಕೊಳ್ಳಲು ಹೊರಗೆ ಓಡಾಡುವಾಗ ಉಣ್ಣೆಯ ಟೋಪಿಗಳನ್ನು ಧರಿಸಬೇಕು. ಆದಷ್ಟು ಮನೆಯೊಳಗೆ ಇದ್ದು ಚಪ್ಪಲಿಗಳನ್ನು ಧರಿಸಿ ಓಡಾಡಬೇಕು. ಚಳಿಗಾಲ ಮುಗಿಯುವ ವರೆಗೂ ಚಹಾ, ಕಾಫಿ, ಬಿಸಿಯಾದ ಪಾನೀಯಗಳನ್ನು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ದೆಹಲಿಯಲ್ಲೂ ಹದಗೆಟ್ಟ ವಾತಾವರಣ: ದೆಹಲಿಯಲ್ಲಿ ಚಳಿಯ ಪರಿಣಾಮ ಪ್ರತೀ ವರ್ಷದಂತೆ ವಾಯುಗುಣ ಮಟ್ಟ ಕುಸಿದಿದೆ. ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ವರದಿಗಳಾಗಿವೆ.

ಇದನ್ನೂ ಓದಿ: ಬೀದರ್: ದಾಖಲೆ ಪ್ರಮಾಣದಲ್ಲಿ ತಾಪಮಾನ ಇಳಿಕೆ; 5.5 ಡಿಗ್ರಿ ಸೆಲ್ಸಿಯಸ್‍ಗೆ ನಡುಗಿದ ಜನರು

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳಿಂದ ಯಾವ ರೀತಿ ರಕ್ಷಣೆ ಪಡೆಯಬಹುದು: ಇಲ್ಲಿದೆ ಡಾಕ್ಟರ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.