ಬೆಂಗಳೂರು: ಹಿಂಸೆಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಹಿಂಸಾಚಾರ ನಡೆಸುವವರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೋ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಅವರದ್ದೇ ಧಾಟಿಯಲ್ಲಿ ಉತ್ತರಕೊಟ್ಟು ಹಿಂಸಾಚಾರವನ್ನು ದಮನ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಮಾರ್ಕ್ಸಿಸ್ಟ್ , ಕಮ್ಯುನಿಷ್ಟ್, ತೃಣಮೂಲ ಕಾಂಗ್ರೆಸ್ ಪಕ್ಷಗಳ ಹಿಪೋಕ್ರಸಿ ರಾಷ್ಟ್ರದ ಜನತೆಗೆ ಗೊತ್ತಾಗುತ್ತದೆ. ಪಾಕಿಸ್ತಾನದ ಇಮ್ರಾನ್ ಖಾನ್ ಆಡುವ ಭಾಷೆಯನ್ನೇ ಇಲ್ಲಿ ರಾಹುಲ್ ಗಾಂಧಿ ಆಡುತ್ತಿದ್ದಾರೆ. ಈ ರಾಷ್ಟ್ರೀಯ ಪೌರತ್ವ ಕಾಯ್ದೆಯಲ್ಲಿ ಮುಸ್ಲಿಂ ಬಾಹುಳ್ಯ ಉಳ್ಳ ಪಾಕಿಸ್ತಾನ, ಆಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ರಕ್ಷಣೆ ಕೊಡುವುದೇ ಹೊರತು, ಭಾರತದ ನಾಗರಿಕರಿಗೂ ಈ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಆದರೂ ಈ ರಾಜಕೀಯ ಪಕ್ಷಗಳು ಭಾರತದ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿದರು.
ಹಿಂದೆ ಮನಮೋಹನಸಿಂಗ್ ಅವರೇ ಬಾಂಗ್ಲಾದೇಶದ ಅಲ್ಪಸಂಖ್ಯಾತರು ಅಂದರೆ, ಹಿಂದೂಗಳು ಅನುಭವಿಸುತ್ತಿರುವ ಹಿಂಸೆಯ ಬಗ್ಗೆ ಏನು ಮಾತನಾಡಿದ್ದರು ಎಂದು ರಾಹುಲ್ ಗಾಂಧಿ ಸ್ಮರಿಸಲಿ, ಅಸ್ಸೋಂ ಸಿಎಂ ಆಗಿದ್ದ ತರುಣ್ ಗೊಗೋಯ್ ಬಾಂಗ್ಲಾದೇಶದ ಹಿಂದುಗಳ ಬಗ್ಗೆ ಏನು ಹೇಳಿದ್ದರು? ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿರುವುದೇಕೆ ಎಂಬುದಕ್ಕೆ ಕಾಂಗ್ರೆಸ್ ನಾಯಕರೇ ಉತ್ತರಕೊಡಬೇಕು. ಬಾಂಗ್ಲಾ ದೇಶದಿಂದ ಬಂದಿರುವ ಹಿಂದು ಅಲ್ಪಸಂಖ್ಯಾತರಿಗೆ ಪೌರತ್ವ ರಕ್ಷಣೆ ಕೊಡಬೇಕೆಂದು ಪ್ರಕಾಶ್ ಕಾರಟ್ ಪತ್ರ ಬರೆದಿದ್ದು ಮರೆತು ಹೋಯ್ತಾ?ಈಗ ಪ್ರಕಾಶ್ ಕಾರಟ್ ಎಲ್ಲಿ ಅಡಗಿದ್ದಾರೆ ಎಂದು ನರಸಿಂಹರಾವ್ ಪ್ರಶ್ನಿಸಿದರು.
ಎನ್ ಆರ್ ಸಿ ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರಿಗೂ ಅತ್ಯಗತ್ಯ. ನಾವು ಈ ರಾಷ್ಟ್ರದ ನಾಗರಿಕರು ಎಂದು ದಾಖಲೆ ತೋರಿಸಲು, ನೋಂದಣಿಯಾಗಲು ಯಾರೂ ಹಿಂಜರಿಯುವುದಿಲ್ಲ. ಆ ಹಿಂಜರಿಕೆಗೂ ಅರ್ಥವೇ ಇಲ್ಲ. ಎನ್ ಆರ್ ಸಿ ಯಾವುದೇ ಒಂದು ಕೋಮನ್ನು ಗುರಿಯಾಗಿಸಿಕೊಂಡಿಲ್ಲ. ಅದು ಸಾಧ್ಯವೂ ಇಲ್ಲ. ದೇಶದಲ್ಲಿ ಅಕ್ರಮವಾಗಿ ನೆಲಸಿರುವವರನ್ನು ಪತ್ತೆ ಹಚ್ಚಲು ಇರುವ ಮಾರ್ಗವೂ ಇದೊಂದೇ ಎಂದು ಅವರು ಸಮರ್ಥಿಸಿಕೊಂಡರು.