ETV Bharat / state

ವೀರಶೈವ ಲಿಂಗಾಯತ ಸಮುದಾಯದ ನೂತನ ಶಾಸಕರು, ಸಚಿವರಿಗೆ ಸನ್ಮಾನ

author img

By

Published : Jul 5, 2023, 10:57 PM IST

ರೇಣುಕ ವೀರ ಸೋಮೇಶ್ವರ ಶ್ರೀಗಳ ಸಮ್ಮುಖದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು.

ವೀರಶೈವ ಲಿಂಗಾಯತ ಸಮುದಾಯದ ನೂತನ ಶಾಸಕರಿಗೆ ಸನ್ಮಾನ
ವೀರಶೈವ ಲಿಂಗಾಯತ ಸಮುದಾಯದ ನೂತನ ಶಾಸಕರಿಗೆ ಸನ್ಮಾನ

ಬೆಂಗಳೂರು : ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜದ ನೂತನ ಶಾಸಕರು ಹಾಗೂ ಸಚಿವರಿಗೆ ಸನ್ಮಾನ ಮಾಡಲಾಯಿತು. ಬಾಳೆಹೊನ್ನೂರು ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶ್ರೀಗಳ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚುನಾವಣೆಯ ನಂತರ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನೆ ಮಾಡುವುದು ಸಂಪ್ರದಾಯ. ಅದು ಪರಮ ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವುದು ಇನ್ನೂ ಸಂತಸ ತಂದಿದೆ. ಈ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹಲವಾರು ಸವಾಲುಗಳನ್ನು ಎದುರಿಸಿದೆ. ಸವಾಲನ್ನು ಎದುರಿಸುವವರು ನಾಯಕರಾಗುತ್ತಾರೆ. ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ ಎಂದು ಹೇಳಿದರು.

ಬಾಳೆಹೊನ್ನೂರು ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶ್ರೀಗಳಿಗೆ ಸನ್ಮಾನ
ಬಾಳೆಹೊನ್ನೂರು ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶ್ರೀಗಳಿಗೆ ಸನ್ಮಾನ

ನಾವು ಒಂದು ಕಡೆ ಸೇರಿ ಪರಮಪೂಜ್ಯರ ನೇತೃತ್ವದಲ್ಲಿ ಸನ್ಮಾನಕ್ಕೆ ಒಳಪಡುವುದರ ಸಂದೇಶ ಏನೆಂದರೆ ಪರಮಪೂಜ್ಯರ ಹಾಗೂ ಸಮಾಜದ ರಕ್ಷಾ ಕವಚ ಮತ್ತು ಜವಾಬ್ದಾರಿಯ ಮಾಲೆ ಅಂತ ನನ್ನ ಭಾವನೆ. ರಾಜಕಾರಣಿ ಗಳಿಗೆ ಹಲವಾರು ಸವಾಲುಗಳಿವೆ. ಕೇವಲ ಚುನಾವಣೆ ಒಂದೆ ಸವಾಲಲ್ಲ. ಸವಾಲುಗಳನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ. ನಾವು ವಿಶ್ವಗುರು ಬಸವಣ್ಣನವರ ಅವರ ಕಾಯಕವೇ ಕೈಲಾಸ ತತ್ವ ಪಾಲಿಸಬೇಕು. ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಅನ್ನುವುದನ್ನು ಪಾಲಿಸಿದರೆ ಸಾಕು ಎಂದು ಮಾಜಿ ಸಿಎಂ ಕಿವಿ ಮಾತು ಹೇಳಿದರು.

ನಮಗೆ ಚರಿತ್ರೆ ಇದೆ‌. ಚಾರಿತ್ರ್ಯ ಬೇಕಿದೆ. ಆಚಾರ್ಯರಿದ್ದಾರೆ ಆಚರಣೆ ಬೇಕಿದೆ. ಚಾರಿತ್ರ್ಯ ಪರಮಪೂಜ್ಯರ ಆಶೀರ್ವಾದದಿಂದ ದೊರೆಯುತ್ತದೆ. ಒಬ್ಬ ನಾಯಕರು ಮಠಗಳನ್ನು ವಿರೋಧ ಮಾಡಿದ್ದರು. ಕೊಳ್ಳೆಗಾಲದಿಂದ ಹಿಡಿದು ಬೀದರವರೆಗೂ ನಮ್ಮ ಸಮಾಜ ಸಾವಿರಾರು ವರ್ಷಗಳಿಂದ ಮಠಗಳು ಶಿಕ್ಷಣ, ದಾಸೋಹ ಮಾಡಿಕೊಂಡು ಬಂದಿವೆ. ಸರ್ಕಾರ ಇಲ್ಲದ ಸಂದರ್ಭದಲ್ಲಿ ಶಿಕ್ಷಣ ನೀಡುತ್ತ ಬಂದಿವೆ. ಒಗ್ಗಟ್ಟಿನಲ್ಲಿ ಬಲ ಇದೆ. ರಾಜಕೀಯ ಮೀರಿ ಒಗ್ಗಟ್ಟಾದರೆ ನಮ್ಮ ಮುಂದಿನ ಪೀಳಿಗೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ವೀರಶೈವ ಲಿಂಗಾಯತ ಸಮುದಾಯಕ್ಕೆ ಬೊಮ್ಮಾಯಿ ಕರೆ ಕೊಟ್ಟರು.

ಶಿಕ್ಷಣ, ಉದ್ಯೋಗದಲ್ಲಿ ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ಅಗತ್ಯ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಸಮುದಾಯದ ನೂತನ ಸಚಿವರಿಗೆ ಹಾಗೂ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ವೀರಶೈವರು, ಲಿಂಗಾಯತರು ನಾವೆಲ್ಲರೂ ಕೂಡಿ ಹೋರಾಟ ಮಾಡಿ ನಮ್ಮ ಸಮುದಾಯದ ಯುವ ಪೀಳಿಗೆಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಬೇಕಾಗಿದೆ. ಹೀಗಾಗಿ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ ಸ್ವಾಮೀಜಿಯವರು ಈ ಹೋರಾಟದ ನೇತೃತ್ವ ವಹಿಸಬೇಕು ಎಂದು ಕೋರಿದರು.

ಅನುಭವ ಮಂಟಪ, ದಾಸೋಹ, ಕಾಯಕ ಇಂತಹ ಮಹಾನ್ ಪರಿಕಲ್ಪನೆಗಳನ್ನು ಸಮಾಜಕ್ಕೆ ಕೊಟ್ಟ ಶ್ರೇಷ್ಠ ಸಂಸ್ಕೃತಿ ನಮ್ಮದಾಗಿದೆ. ಕುಂಬಾರರು, ಕಮ್ಮಾರರು ಸೇರಿದಂತೆ ಹಲವಾರು ಕಾಯಕ ವರ್ಗಗಳು ಸೇರಿರುವ ಸಮುದಾಯವು ಜಾತಿರಹಿತ ಸಮುದಾಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ನಮ್ಮ ಸಮಾಜದ ಹಲವರು ದೊಡ್ಡಮಟ್ಟದಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಂಡು ನಾವು ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಪಾಟೀಲ್ ಅಭಿಪ್ರಾಯಪಟ್ಟರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಈ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಹೊಸದಾಗಿ ಆಯ್ಕೆಯಾದ ಸಮುದಾಯದ ಶಾಸಕರಿಗೆ ಹಾಗೂ ಸಚಿವರಿಗೆ ತಮ್ಮ ಜವಾಬ್ದಾರಿಯ ಮಹತ್ವವನ್ನು ನೆನಪಿಸುವ ಕಾರ್ಯ ಮಾಡಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ನೂತನವಾಗಿ ಆಯ್ಕೆಯಾದ ವೀರಶೈವ ಲಿಂಗಾಯತ ಸಮುದಾಯದ ಸಚಿವರು ಹಾಗೂ ಶಾಸಕರು ಹಾಜರಿದ್ದರು.

ಇದನ್ನೂ ಓದಿ : ಸ್ವಾತಂತ್ರ್ಯ ಬಂದ 75 ವರ್ಷ ಬಳಿಕವೂ ಬಡತನ ಜೀವಂತ ಆಗಿರುವುದು ದುರಂತ: ತೇಜಸ್ವಿನಿ ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.