ETV Bharat / state

ಚುನಾವಣೆ ಹೊಸ್ತಿಲಲ್ಲಿ ಸಾಲು ಸಾಲು ಪ್ರತಿಮೆಗಳ ಅನಾವರಣ.. ವಿವಿಧ ಸಮುದಾಯದ ಮತಬೇಟೆಗೆ ಬಿಜೆಪಿ ತಂತ್ರ

author img

By

Published : Mar 19, 2023, 4:02 PM IST

ಬಿಜೆಪಿ ಸರ್ಕಾರ ಪ್ರತಿಮೆಗಳ ಅನಾವರಣ ಮೂಲಕ ಮತಫ್ರಭುಗಳ ಮತಬೇಟೆಗೆ ಇಳಿದಿದೆ.

Unveiling of statues by BJP is politics
ಬಜೆಪಿಯಿಂದ ಪ್ರತಿಮೆಗಳ ಅನಾವರಣ ಪಾಲಿಟಿಕ್ಸ್

ಬೆಂಗಳೂರು :ರಾಜ್ಯದಲ್ಲಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಬಿಜೆಪಿ ಸರ್ಕಾರ ತನ್ನ ಹಲವು ಚುನಾವಣಾ ರಾಜಕೀಯ ಪೈಕಿ ಇದೀಗ ಪ್ರತಿಮೆಗಳ ಅನಾವರಣ ಪಾಲಿಟಿಕ್ಸ್ ಮೂಲಕ ಮತಬೇಟೆಗೆ ಇಳಿದಿದೆ.

ಚುನಾವಣೆ ಬಂತೆಂದರೆ ಸಾಕು ಅಧಿಕಾರದಲ್ಲಿರುವ ಸರ್ಕಾರ ನಾನಾ ಯೋಜನೆಗಳನ್ನು ತರಾತುರಿಯಲ್ಲಿ ಮುಗಿಸಿ ಉದ್ಘಾಟನೆ ಮಾಡುತ್ತೆ. ಆ ಮೂಲಕ ಆ ಕ್ಷೇತ್ರದ, ಪ್ರದೇಶದ ಜನರ ಮತ ಸೆಳೆಯಲು ಮುಂದಾಗುತ್ತದೆ. ರಾಜಕೀಯ ಪಕ್ಷಗಳು ಮತಪ್ರಭುಗಳ ಓಲೈಕೆಗಾಗಿ ಹತ್ತು ಹಲವು ತಂತ್ರಗಾರಿಕೆಗಳನ್ನು ನಡೆಸುತ್ತವೆ. ರಾಜ್ಯದಲ್ಲೂ ಇದೀಗ ರಾಜಕೀಯ ಪಕ್ಷಗಳ ಮತದಾರರನ್ನು ಸೆಳೆಯಲು ಕ್ರಿಯಾತ್ಮಕ, ನಾನಾ ಕಸರತ್ತು ಪ್ರಾರಂಭಿಸಿವೆ. ಇತ್ತ ಬಿಜೆಪಿ ಸರ್ಕಾರ ನೀತಿ ಸಂಹಿತೆ ಜಾರಿಯಾಗುವ ಮುನ್ನ ವಿವಿಧ ಯೋಜನೆಗಳ ಉದ್ಘಾಟನೆಗಳ ಮೊರೆ ಹೋಗಿದೆ.

ಸರ್ಕಾರದಿಂದ ಸಾಲು ಸಾಲು ಪ್ರತಿಮೆ ಅನಾವರಣ : ಮತದಾರರನ್ನು ತನ್ನ ಕಡೆಗೆ ಸೆಳೆಯುವ ಪರಿಣಾಮಕಾರಿ ಚುನಾವಣಾ ತಂತ್ರಗಾರಿಕೆ ನಡೆಸುತ್ತಿದೆ. ಅದುವೇ ಪ್ರತಿಮೆಗಳ ಅನಾವರಣ ಪಾಲಿಟಿಕ್ಸ್. ಕಳೆದ ಎರಡು ಮೂರು ತಿಂಗಳಿಂದ ಬಿಜೆಪಿ ಸರ್ಕಾರ ಒಂದರ ಮೇಲೊಂದರಂತೆ ಪ್ರತಿಮೆಗಳ ಅನಾವರಣ ಮಾಡುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಇತಿಹಾಸ ಪುರಷರ, ಸಮಾಜ ಸುಧಾರಕರ, ಹೋರಾಟಗಾರರ ಹಾಗೂ ಸಮುದಾಯದ ಆರಾಧ್ಯ ವ್ಯಕ್ತಿಗಳ ಬೃಹತ್ ಪ್ರತಿಮೆಗಳನ್ನು ಅನಾವರಣ ಮಾಡುವ ಮೂಲಕ ಸಮುದಾಯದ ಮತ್ತು ಪ್ರದೇಶವಾರು ಮತಬೇಟೆಗೆ ಇಳಿದಿದ್ದಾರೆ. ಈವರೆಗೆ ಸುಮಾರು 13ಕ್ಕೂ ಹೆಚ್ಚು ಪ್ರತಿಮೆ ಅನಾವರಣವನ್ನು ಸಿಎಂ ಬೊಮ್ಮಾಯಿ ನೆರವೇರಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಪ್ರತಿಮೆ : ಕಳೆದ ವರ್ಷ ನವೆಂವರ್​ನಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ಪ್ರತಿಮೆ ಅನಾವರಣ ಸರಣಿಗೆ ಮುಂದಡಿ ಇಟ್ಟಿತು. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು. ಆ ಮೂಲಕ ಬೆಂಗಳೂರು ಹಾಗೂ ಹಳೆ ಮೈಸೂರು ಪ್ರದೇಶದಲ್ಲಿನ ಒಕ್ಕಲಿಗ ಸಮುದಾಯದವರನ್ನು ತಮ್ಮತ್ತ ಸೆಳೆಯುವ ತಂತ್ರ ರೂಪಿಸಿತು. ಅಲ್ಲಿಂದ ಬಿಜೆಪಿ ಸರ್ಕಾರದ ಪ್ರತಿಮೆ ಅನಾವರಣ ಪೊಲಿಟಿಕ್ಸ್ ತೀವ್ರವಾಯಿತು.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ : ಇತ್ತ ಬೆಳಗಾವಿಯ ಮರಾಠಿ ಮತದಾರರ ಓಲೈಕೆಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 36 ಅಡಿ ಎತ್ತರದ ಪ್ರತಿಮೆಯನ್ನು ಮಾ.2 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅನಾವರಣ ಗೊಳಿಸಿದ್ದರು. ರಾಜಕೀಯವಾಗಿ ಮಹತ್ವದ್ದೆನಿಸಿದ ಈ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡುವ ಮೂಲಕ ಬಿಜೆಪಿ ಜಿಲ್ಲೆಯ ಮರಾಠ ಮತದಾರರ ಓಲೈಕೆಗೆ ಮುಂದಾಗಿತ್ತು.‌ ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆದು ಮತ್ತೆ ಅದೇ ಶಿವಾಜಿ ಪ್ರತಿಮೆಯನ್ನು ಕಾಂಗ್ರೆಸ್ ನಾಯಕರ ಕೈಯಿಂದ ಅದ್ಧೂರಿಯಾಗಿ ಮರು ಅನಾವರಣಗೊಳಿಸಿದ್ದರು.

ಕರಾವಳಿ ಭಾಗದಲ್ಲೂ ಪ್ರತಿಮೆ ಅನಾವರಣ : ತುಳುನಾಡಿನ ಸೃಷ್ಟಿಕರ್ತ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕಾರ್ಕಳ ತಾಲ್ಲೂಕಿನ ಬೈಲೂರು ಯರ್ಲಪಾಡಿಯ ಉಮಿಕಲ್‌ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಆಕರ್ಷಣೀಯ ಕೇಂದ್ರವನ್ನು ಭೂಮಟ್ಟದಿಂದ 400 ಅಡಿ ಎತ್ತರದಲ್ಲಿ ರೂಪಿಸಲಾಗಿದೆ. ಉಮಿಕಲ್ ಬೆಟ್ಟದ ತುದಿಯಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿರುವ ಕೊಡಲಿ ಹಿಡಿದ ಪರಶುರಾಮರ ಪ್ರತಿಮೆಯನ್ನು ಜ.27ರಂದು ಸಿಎಂ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದ್ದರು. ಆ ಮೂಲಕ ಕರಾವಳಿ ಭಾಗದ ಜನರ ನಂಬಿಕೆ, ಇತಿಹಾಸದ ಮಹತ್ವವವನ್ನು ಮುಂದಿಟ್ಟುಕೊಂಡು ಮತಗಳ ಮೇಲೆ ಕಣ್ಣಿಟ್ಟಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ಸ್ವಾತಂತ್ರ್ಯ ಸಮರ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ 22 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು. ಬ್ರಿಟಿಷರ ಧ್ವಜ ಕಿತ್ತೆಸೆದು, ಭಾರತದ ಬಾವುಟವನ್ನು ಹಾರಿಸಿದ ಇಂದಿನ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ ನಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ಗೌರವ ಸಲ್ಲಿಸುವ ಹಿನ್ನಲೆಯಲ್ಲಿ ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಸುಳ್ಯದಿಂದ ರೈತರ ಸೈನ್ಯ ಕಟ್ಟಿಕೊಂಡು ಮಂಗಳೂರುವರೆಗೂ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ರಾಮಯ್ಯಗೌಡರ ಪ್ರತಿಮೆಯನ್ನು ಅನಾವರಣ ಮಾಡಿ ಸ್ಥಳೀಯ ಜನರ ಮತಬೇಟೆಗೆ ಇಳಿದಿದೆ.

ಮಲೆ ಮಹದೇಶ್ವರ, ಶಿವಶರಣೆಯ ಪ್ರತಿಮೆ ಅನಾವರಣ : ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ 108 ಅಡಿಯ ಶ್ರೀ ಮಲೆ ಮಹದೇಶ್ವರರ ಪ್ರತಿಮೆಯನ್ನು ಸಿಎಂ ಬೊಮ್ಮಾಯಿ‌ ಮೊನ್ನೆಯಷ್ಟೇ ಲೋಕಾರ್ಪಣೆಗೊಳಿಸಿದ್ದರು. ಕ್ಷೇತ್ರದಲ್ಲಿ ಎಷ್ಟೇ ದೂರದಲ್ಲಿ ನಿಂತರು ಕಾಣಿಸುವಂತಹ ಪ್ರತಿಮೆಯನ್ನು ನಿರ್ಮಾಣ ಮಾಡಿ ಕ್ಷೇತ್ರದ ಮಹತ್ವವನ್ನು ಎತ್ತಿ ಹಿಡಿಯುವ ಈ ಪ್ರತಿಮೆ ಮೂಲಕ ಕ್ಷೇತ್ರದ ಅಸಂಖ್ಯಾತ ಭಕ್ತರ ಮನವೊಲಿಕೆಗೆ ಬಿಜೆಪಿ ರಾಜಕೀಯ ತಂತ್ರ ರೂಪಿಸಿದೆ.

ಇನ್ನು 12ನೇ ಶತಮಾನದ ವಚನ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶಿವಶರಣೆ ಅಕ್ಕಮಹಾದೇವಿಯ 51 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಆಕೆಯ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಸಿಎಂ ಬೊಮ್ಮಾಯಿ ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿ ಹಲವು ಸ್ಥಳೀಯ ಕಮಲ‌ ನಾಯಕರು ಪಾಲ್ಗೊಂಡಿದ್ದರು. ಆ ಮೂಲಕ ಬಿಜೆಪಿ ಪ್ರದೇಶದ ಜನರ ಮತಬೇಟೆಗೆ ಇಳಿದಿದೆ.

ವಿಧಾನಸೌಧದಲ್ಲಿ ಬಸವಣ್ಣ, ಕೆಂಪೇಗೌಡರ ಪ್ರತಿಮೆ ಅನಾವರಣ : ಮಾರ್ಚ್ 24 ಅಥವಾ 25 ರಂದು ವಿಧಾನಸೌಧದ ಮುಂಭಾಗ ಬಹು ನಿರೀಕ್ಷಿತ ಬಸವಣ್ಣ ಹಾಗೂ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂಲಕ ಶ್ರೇಷ್ಠ ಪುರುಷರ ಪ್ರತಿಮೆ ಅನಾವರಣಗೊಳಿಸಲು ಬಿಜೆಪಿ ಚಿಂತನೆ ನಡೆಸಿದೆ. ರಾಜ್ಯದ ಶಕ್ತಿ ಕೇಂದ್ರದಲ್ಲಿ ಮಹಾಪುರುಷರ ಪ್ರತಿಮೆ ನಿರ್ಮಿಸುವ ಮೂಲಕ ಲಿಂಗಾಯತರು ಹಾಗೂ ಒಕ್ಕಲಿಗರ ಮತ ಸೆಳೆಯುವ ತಂತ್ರಗಾರಿಕೆ ನಡೆಸಿದೆ.

ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸೆಂಬರ್ 29 ರಂದು ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಗುದ್ದಲಿಪೂಜೆ ನೆರವೇರಿಸಿದ್ದರು. ಆ ಮೂಲಕ ಆ ಭಾಗದ ಜನರು, ಸಮಾಜದ ಮತದಾರರ ಓಲೈಕೆಗೆ ಬಿಜೆಪಿ ಮುಂದಾಗಿದೆ. ಈ ಹಿಂದೆ 74ನೇ ಗಣರಾಜ್ಯೋತ್ಸವ ಸಂದರ್ಭ ಮಾತನಾಡಿದ್ದ ಸಿಎಂ ಬೊಮ್ಮಾಯಿ ಅವರು ರಾಜ್ಯದ ಪ್ರತಿ ಸರ್ಕಾರಿ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳನ್ನು ಸ್ಥಾಪಿಸಲು ನಿರ್ದೇಶನ ನೀಡುವುದಾಗಿ ಹೇಳಿದ್ದರು.

ಅದೇ ರೀತಿ ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಬಸವಣ್ಣ ಪ್ರತಿಮೆ ಸ್ಥಾಪಿಸುವುದಾಗಿ ಇದೇ ಮಾ.15ರಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಆ ಮೂಲಕ ಮಹಾಪುರುಷರು, ಸಮಾಜದ ಮೇರು ವ್ಯಕ್ತಿಗಳ ಪ್ರತಿಮೆಗಳನ್ನು ಅನಾವರಣಗೊಳಿಸುವ ಮೂಲಕ ಬಿಜೆಪಿ ಸರ್ಕಾರ ವಿವಿಧ ಸಮಯದಾಯಗಳ ಮತಬೇಟೆಗೆ ಇಳಿದಿದೆ.

ಇದನ್ನೂ ಓದಿ :ಪ್ರತಿಮೆ ಮೂಲಕ ಮಾದಪ್ಪನ ಹಿರಿಮೆ-ಗರಿಮೆ ಹೆಚ್ಚಳ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.