ETV Bharat / state

ಸವದಿ ಅವರನ್ನು ಕಡೆಗಣಿಸಿಲ್ಲ.. ಮನವೊಲಿಕೆ ಮಾಡುತ್ತೇವೆ: ಶೋಭಾ ಕರಂದ್ಲಾಜೆ

author img

By

Published : Apr 12, 2023, 8:23 AM IST

ಲಕ್ಷ್ಮಣ್​ ಸವದಿ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಈಗಲೂ ಕೂಡ ಅವರು ವಿಧಾನ ಪರಿಷತ್ತಿನ ಸದಸ್ಯರು. ಹಾಗಾಗಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಲು ಅವರು ಶ್ರಮಿಸಲಿದ್ದಾರೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Union Minister Shobha Karandlaje
ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ..

ಬೆಂಗಳೂರು: ಲಕ್ಷ್ಮಣ್​ ಸವದಿ ಅವರನ್ನು ಪಕ್ಷ ಕಡೆಗಣಿಸಿಲ್ಲ, ದೂರವೂ ಇಟ್ಟಿಲ್ಲ. ಕೊಟ್ಟ ಮಾತಿನಂತೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಾಗಿದೆ. ಸವದಿ ಅವರ ಮನವೊಲಿಕೆ ಮಾಡಲಾಗುತ್ತಿದೆ. ನಮ್ಮ ಅಭ್ಯರ್ಥಿ ಗೆಲುವಿಗೆ ಸವದಿ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಂಚಾಲಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಎಲ್ಲಾ ನಾಯಕರು ಲಕ್ಷ್ಮಣ್​ ಸವದಿ ಅವರ ಜತೆ ಮಾತುಕತೆ ನಡಿಸಿದ್ದಾರೆ. ಅವರಿಗೆ ಎಲ್ಲಾ ಅವಕಾಶ ಕೊಡಲಾಗಿದೆ. ಸಚಿವರಾಗಿದ್ದರು, ಹಲವಾರು ಖಾತೆಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದರು. ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಈಗಲೂ ಕೂಡ ಅವರು ವಿಧಾನ ಪರಿಷತ್ತಿನ ಸದಸ್ಯರು. ಹಾಗಾಗಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಲು ಅವರು ತಮ್ಮ ಶ್ರಮ ಹಾಕಲಿದ್ದಾರೆ. ಆ ರೀತಿ ಮನವೊಲಿಕೆ ಮಾಡುವ ಕೆಲಸವನ್ನು ನಮ್ಮ ಕೇಂದ್ರದ ನಾಯಕರು ಮಾಡುತ್ತಿದ್ದಾರೆ ಎಂದರು.

ಮಹೇಶ್ ಕುಮಟಳ್ಳಿ ಸೇರ್ಪಡೆ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂತು. ಅಂದು ನಾವು ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡುವ ಭರವಸೆ ಕೊಟ್ಟಿದ್ದೆವು. ಹಾಗಾಗಿ ಲಕ್ಷ್ಮಣ್​ ಸವದಿಯವರನ್ನ ಎಂಎಲ್​ಸಿ ಮಾಡಿ ಉಪ ಮುಖ್ಯಮಂತ್ರಿ ಮಾಡಲಾಗಿತ್ತು. ನಾವು ಯಾರನ್ನು ಕಡೆಗಣಿಸಿಲ್ಲ, ಯಾರನ್ನು ದೂರ ಇಟ್ಟಿಲ್ಲ. ಲಕ್ಷ್ಮಣ್​ ಸವದಿ ಸೋತಿದ್ದರು ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ರಾಜ್ಯದ ಮಂತ್ರಿಯನ್ನಾಗಿ ಮಾಡುವ ಅವಕಾಶ ಕೊಡಲಾಗಿತ್ತು ಎಂದರು.

ಹಿರಿಯರ ಮಾರ್ಗದರ್ಶನ: ಸೋಮಣ್ಣ ಮತ್ತು ಅಶೋಕ್ ಅವರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಟ್ಟಿದ್ದಾರೆ. ನಮ್ಮೆಲ್ಲ ಹಿರಿಯರು ಅವರ ಮಾರ್ಗದರ್ಶನದಲ್ಲಿ ಎಲ್ಲಾ ಹೊಸ ಹೊಸಬರನ್ನ ಗೆಲ್ಲಿಸುವ ಪ್ರಯತ್ನ ಮಾಡಲಿದ್ದಾರೆ. ನಮ್ಮ ನಾಯಕರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತರಲ್ಲ ಅವರು ಇಡೀ ರಾಜ್ಯದಲ್ಲಿ ಓಡಾಡಬೇಕು. ಇದು ನಮ್ಮ ಅಪೇಕ್ಷೆ. ಹಾಗಾಗಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಇಂತಹ ಎಲ್ಲ ನಾಯಕರು ರಾಜ್ಯಾದ್ಯಂತ ನಮ್ಮ ಎಲ್ಲಾ ಅಭ್ಯರ್ಥಿಗಳ ಗೆಲ್ಲಿಸಲು ಓಡಾಟ ಮಾಡಲಿದ್ದಾರೆ. ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ. ಬಿಜೆಪಿ ಈ ಬಾರಿ ಬಹುಮತದ ಸರ್ಕಾರದೊಂದಿಗೆ ಅಧಿಕಾರಕ್ಕೆ ಬರಬೇಕು. ಮತ್ತೆ ರಾಜ್ಯದ ಜನತೆಯ ಸೇವೆ ಮಾಡಬೇಕು. ಡಬಲ್ ಇಂಜಿನ್ ಸರ್ಕಾರಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು. ನರೇಂದ್ರ ಮೋದಿಗೆ ಮತ್ತಷ್ಟು ಶಕ್ತಿ ತುಂಬಲು ನಮ್ಮೆಲ್ಲ ಹಿರಿಯರು ರಾಜ್ಯ ಪ್ರವಾಸ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದರು.

ಹೊಸಬರು ವಿಧಾನಸೌಧಕ್ಕೆ ಬರಬೇಕು: ಈಗ 189 ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನು 35 ಕ್ಷೇತ್ರಗಳು ಮಾತ್ರ ಬಾಕಿ ಉಳಿದಿವೆ. ಇನ್ನು ಎರಡು ದಿನದಲ್ಲಿ ನಮ್ಮ ನಾಯಕರು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಈಗ ಪಟ್ಟಿಯಲ್ಲಿರುವ 189 ಅಭ್ಯರ್ಥಿಗಳನ್ನು ಅಭಿನಂದಿಸುತ್ತೇವೆ. ನೀವೆಲ್ಲರೂ ಗೆದ್ದು ವಿಧಾನಸೌಧಕ್ಕೆ ಬರಬೇಕು. ನರೇಂದ್ರ ಮೋದಿ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರೆ ನೀಡಿದರು.

ಅಪೇಕ್ಷೆಯಂತೆ ಪುತ್ರರಿಗೆ ಟಿಕೆಟ್: ಸಚಿವ ಆನಂದ್ ಸಿಂಗ್ ಸ್ವಯಿಚ್ಛೆಯಿಂದ ಮಗನಿಗೆ ಟಿಕೆಟ್ ಕೊಡಬೇಕು ಎಂದು ವಿನಂತಿ ಮಾಡಿದ್ದರು. ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದ ವೇಳೆ ಪುತ್ರನನ್ನು ಕರೆದುಕೊಂಡು ಬಂದು ನಮ್ಮ ಹಳೆ ತಲೆಮಾರು ಸಾಕು. ನಾನು ವಿಶ್ರಾಂತಿ ಪಡೆಯುತ್ತೇನೆ. ನನ್ನ ಪುತ್ರ ಚಟುವಟಿಕೆಯಿಂದ ಇದ್ದಾನೆ. ಹಳ್ಳಿ ಹಳ್ಳಿಗಳಿಗೆ ತಿರುಗಾಟ ನಡೆಸಿದ್ದಾನೆ. ಅವನಿಗೆ ಈ ಬಾರಿ ಟಿಕೆಟ್ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದರು. ಅದರಂತೆ ಅವರ ಬೇಡಿಕೆಯನ್ನು ಪಕ್ಷ ಪರಿಗಣಿಸಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸ್ಪರ್ಧೆ ಮಾಡಲ್ಲ ಎಂದಿದ್ದರು. ಅವರ ಅಪೇಕ್ಷೆಯಂತೆ ಮತ್ತೊಬ್ಬರಿಗೆ ಟಿಕೆಟ್ ನೀಡಿದ್ದೇವೆ ಎಂದು ತಿಳಿಸಿದರು.

2 ಕ್ಷೇತ್ರದ ಟಿಕೆಟ್ ತಂತ್ರಗಾರಿಕೆ: ಸೋಮಣ್ಣ ಮತ್ತು ಅಶೋಕ್ ಅವರಿಗೆ ಎರಡು ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದು ಬಿಜೆಪಿಯ ತಂತ್ರಗಾರಿಕೆ. ಕಳೆದ ಬಾರಿ ಶ್ರೀರಾಮುಲು ಮೊಳಕಾಲ್ಮೂರು ಮತ್ತು ಬಾದಾಮಿಯಲ್ಲಿ ಚುನಾವಣೆಗೆ ನಿಂತಿದ್ದರು. ಆದರೆ ಬಹಳ ಕಡಿಮೆ ಅಂತರದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಲನುಭವಿಸಿದ್ದರು. ಈ ಬಾರಿ ನಮಗೆ ವಿಶ್ವಾಸವಿದೆ. ವರುಣದಲ್ಲಿ ಬಹುಮತದಿಂದ ಸೋಮಣ್ಣ ಅವರು ಗೆಲ್ಲಲಿದ್ದಾರೆ. ಒಬ್ಬ ಒಳ್ಳೆಯ ಸಚಿವ, ಕ್ರಿಯಾಶೀಲ ವ್ಯಕ್ತಿ, ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿರುವ ಎಂಬ ಹೆಗ್ಗಳಿಕೆ ಸೋಮಣ್ಣ ಅವರಿಗಿದೆ. ಹಾಗಾಗಿ ವರುಣಾದ ಜನ ಸೋಮಣ್ಣ ಅವರಿಗೆ ಗೆಲುವಿನ ಮಾಲೆಯನ್ನು ಹಾಕಲಿದ್ದಾರೆ ಎಂದು ಕೇಂದ್ರ ಸಚಿವೆ ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್ ವಂಚಿತ ಹಿರಿಯರ ಸೇವೆ ಅಗತ್ಯ: ನಮ್ಮ ಎಲ್ಲ ಶಾಸಕರು ಬಿಜೆಪಿಯ ವಿಚಾರಕ್ಕೆ ಬದ್ಧರಾಗಿದ್ದಾರೆ. ಬಿಜೆಪಿ ಹಿರಿಯರನ್ನ ಎಂದೂ ಕಡೆಗಣಿಸಿಲ್ಲ. ಯಾರಿಗೆಲ್ಲ ಟಿಕೆಟ್ ಸಿಕ್ಕಿಲ್ಲವೋ ಅವರಿಗೆಲ್ಲ ಬೇರೆ ಬೇರೆ ಜವಾಬ್ದಾರಿ ಕೊಟ್ಟು ರಾಜ್ಯಾದ್ಯಂತ ಪ್ರವಾಸ ಮಾಡಿಸುತ್ತೇವೆ. ಅವರ ಸೇವೆಯನ್ನ ಪಡೆದುಕೊಳ್ಳುತ್ತೇವೆ. ನಮ್ಮದು ವಿಶಾಲವಾದ ಪಕ್ಷ‌. ಇಲ್ಲಿ ಸಾಕಷ್ಟುಗಳು ಅವಕಾಶಗಳಿವೆ. ಬರುವ ದಿನಗಳಲ್ಲಿ ಅವರಿಗೆ ಅವಕಾಶ ಇದೆ. ಹಾಗಾಗಿ ಪಕ್ಷದಲ್ಲಿ ಕೆಲಸ ಮಾಡಲು ಅವಕಾಶವಿದೆ. ಎಲ್ಲರನ್ನೂ ಸೇವೆ ಬಿಜೆಪಿಗೆ ಅಗತ್ಯವಿದೆ ಎಂದರು.

ಕನಕಪುರ, ವರುಣದಲ್ಲಿ ಪ್ರಚಾರ: ಸಂಸದ ತೇಜಸ್ವಿ ಸೂರ್ಯ ಮಾತನಾಡಿ 2023 ಅಸೆಂಬ್ಲಿ ಮೊದಲ ಲಿಸ್ಟ್ ಅನ್ನು ಪಕ್ಷ ಬಿಡುಗಡೆ ಮಾಡಿದೆ. ನಮ್ಮ ಪಕ್ಷದ ಹಿರಿಯರು ಹೊಸತನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ಪಕ್ಷ ಅಂದರೆ ಅದು ಬಿಜೆಪಿ. ಪಕ್ಷವನ್ನು ಬೆಳೆಸಿರುವ ನಾಯಕ ಬಿ.ಎಸ್ ಯಡಿಯೂರಪ್ಪ ಸೇರಿ ನಮ್ಮ ಪಕ್ಷದ ಹಿರಿಯರು ಹಿಂದೆ ಸರಿದಿದ್ದು, 52 ಜನ ಯುವ ಕಾರ್ಯಕರ್ತರಿಗೆ ಟಿಕೆಟ್ ಸಿಕ್ಕಿದೆ. ಹಾಗಾಗಿ ಪಕ್ಷದ ಹಿರಿಯರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

ಬೆಂಗಳೂರು ದಕ್ಷಿಣ ಸಂಸತ್ ಕ್ಷೇತ್ರ ವ್ಯಾಪ್ತಿಯ ಪದ್ಮನಾಭನಗರ ಕ್ಷೇತ್ರದ ಆರ್. ಅಶೋಕ್ ಮತ್ತು ಗೋವಿಂದರಾಜ ನಗರದ ವಿ.ಸೋಮಣ್ಣ ಅವರಿಗೆ ಎರಡು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಕನಕಪುರದಲ್ಲಿ ಆರ್. ಅಶೋಕ್ ಅವರು ಡಿ.ಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾಡಿದರೆ, ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಸ್ಪರ್ಧಿಸಲಿದ್ದಾರೆ. ನಾವೆಲ್ಲ ಹೋಗಿ ಪ್ರಚಾರ ಮಾಡಿ ಅವರನ್ನು ಗೆಲ್ಲಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಇದನ್ನೂ ಓದಿ: ಶೆಟ್ಟರ್​​​ಗೆ ಹೈಕಮಾಂಡ್ ಬುಲಾವ್.. ಈಶ್ವರಪ್ಪ, ಸವದಿಗೆ ಬಿಎಸ್​ವೈ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.