ETV Bharat / state

ಬೊಮ್ಮಾಯಿ, ಕಟೀಲ್ ನೇತೃತ್ವದಲ್ಲಿ ಚುನಾವಣಾ ನೀತಿ ರೂಪಿಸಿ ಗೆಲ್ಲುತ್ತೇವೆ: ಪ್ರಹ್ಲಾದ್ ಜೋಶಿ

author img

By

Published : Mar 14, 2022, 9:01 AM IST

union minister pralhad joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಪಂಚರಾಜ್ಯ ಚುನಾವಣೆಯಲ್ಲಿ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಅವರಿಗೆ ನಿನ್ನೆ (ಭಾನುವಾರ) ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಸನ್ಮಾನಿಸಲಾಯಿತು.

ಬೆಂಗಳೂರು: ನಮ್ಮ ಅಭಿವೃದ್ಧಿ ಕಾರ್ಯಗಳ ಫಲವಾಗಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರಕ್ಕೆ ಮರಳಿದ್ದು, ರಾಜ್ಯದ ಚುನಾವಣೆಯ ಕಾರ್ಯತಂತ್ರವನ್ನು ನಾವೇ ರೂಪಿಸಬೇಕು. ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ನೇತೃತ್ವದಲ್ಲಿ ನಾವೇ ಚುನಾವಣೆಗೆ ಯೋಜನೆ ರೂಪಿಸಿ ಇಲ್ಲಿಯೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

union minister pralhad joshi
ಪಂಚರಾಜ್ಯ ಚುನಾವಣಾ ಉಸ್ತುವಾರಿಗಳಿಗೆ ಸನ್ಮಾನ

ಪಂಚರಾಜ್ಯ ಚುನಾವಣೆಯಲ್ಲಿ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಅವರಿಗೆ ನಿನ್ನೆ (ಭಾನುವಾರ) ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಹಿಂದೆ ಅಧಿಕಾರ ಮಾಡಿದವರು ಜನರಿಗೆ ನೀರು ಕುಡಿಸಿ ಹೋಗಿದ್ದರು. ನಾವು 'ಜಲ ಜೀವನ್ ಮಿಷನ್' ಅಡಿ ನೀರು ಕೊಟ್ಟಿದ್ದೇವೆ. ‌ನಮ್ಮ ಕಾರ್ಯಕರ್ತರು ಏಯ್ ಅಂದ್ರೆ ಕೇಳಲ್ಲ. ಅವರ ಮನವೊಲಿಸಬೇಕು. ಬೇರೆ ಪಕ್ಷದ ತರ ನಮ್ಮ ಪಕ್ಷ ಅಲ್ಲ. ನಮ್ಮ ಕಾರ್ಯಕರ್ತರು ಪೇಯ್ಡ್ ವರ್ಕರ್ಸ್ ಅಲ್ಲ. ನಮ್ಮ ಕಾರ್ಯಕರ್ತರು ಪಕ್ಷದ ಜತೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಪಕ್ಷ ನಿಮ್ಮ ಜೊತೆ ಎನ್ನುವ ಸಂದೇಶ ನೀಡಿ, ಅದರಲ್ಲಿ ಸಫಲರಾಗಿದ್ದೇವೆ ಎಂದರು.

ಪ್ರಧಾನಿಯವರ ತಾಕತ್ತು,ದೂರದೃಷ್ಟಿ: ಉತ್ತರಾಖಂಡ ರಾಜ್ಯವನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ರಚಿಸಲಾಯಿತು. 2001ರಲ್ಲಿ ರಾಜ್ಯ ರಚನೆಯಾದರೂ, 2002ರಲ್ಲಿ ನಾವು ಸೋತೆವು. ಅಧಿಕಾರ ಬದಲಾವಣೆ ಆಗುತ್ತಿತ್ತು. ಈ ಬಾರಿ ಕಾಂಗ್ರೆಸ್ ಬರಲಿದೆ ಎಂಬ ಭಾವನೆ ಜನರಲ್ಲಿತ್ತು. ಆ ಭಾವನೆಯನ್ನು ಬದಲಾಯಿಸಿದ್ದು, ಮೋದಿಯವರ ತಾಕತ್ತು ಮತ್ತು ದೂರದೃಷ್ಟಿ. ನಾವೂ ಕೆಲಸ ಮಾಡಿದ್ದೇವೆ. ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರ ಮಾರ್ಗದರ್ಶನ ಸಿಕ್ಕಿತು. ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ಮಾತುಕತೆ ಮಾಡಿ ವಿಶ್ವಾಸ ಮೂಡಿಸಲಾಗಿದೆ. ಅದರ ಫಲವಾಗಿ ಈ ಫಲಿತಾಂಶ ಲಭಿಸಿದೆ ಎಂದರು.

ಅಭಿವೃದ್ಧಿ ಎಂಬುದು ಅಜೆಂಡಾ: ಮೋದಿ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಎಂಬುದು ಅಜೆಂಡಾ ಆಗಿದೆ. ಅದರ ಪರಿಣಾಮವಾಗಿ ಬಿಜೆಪಿ ಪರ ಫಲಿತಾಂಶ ಬಂದಿದೆ. ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಮುಖ್ಯಮಂತ್ರಿ ಕೂಡ ಐದು ವರ್ಷ ಮುಗಿಸಿ ಎರಡನೇ ಬಾರಿ ಸಿಎಂ ಆಗಿಲ್ಲ. ಯೋಗಿಯವರ ನೇತೃತ್ವದಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ ಎರಡನೇ ಬಾರಿ ಸಿಎಂ ಆಗಿರುವುದು ದಾಖಲೆ. ಇಷ್ಟು ವರ್ಷ ಬೇರೆ ಪಕ್ಷಗಳ ಹೊಂದಾಣಿಕೆ ರಾಜಕೀಯ ನಡೆಯುತ್ತಿತ್ತು. ಈಗ ಅಭಿವೃದ್ಧಿ ರಾಜಕೀಯ ನಡೆಯುತ್ತಿದೆ‌. ಈ ಚುನಾವಣೆಯಲ್ಲಿ ಜನ ಸಾಧನೆ ನೋಡಿ ಜನ ಮತ‌ ನೀಡಿದ್ದಾರೆ ಎಂದರು.

ಪರೋಕ್ಷವಾಗಿ ರಾಜ್ಯದ ಸಚಿವರಿಗೂ ಎಚ್ಚರಿಕೆ‌: ಉತ್ತರಾಖಂಡ ಬಿಜೆಪಿಯೊಳಗಿನ ಆಂತರಿಕ ವಿಚಾರ ಬಿಚ್ಚಿಟ್ಟ ಜೋಶಿ, ಉತ್ತರಾಖಂಡದಲ್ಲಿ ಬಿಜೆಪಿ ಗೆಲ್ಲೋದೇ ಇಲ್ಲ ಎನ್ನುವ ಮಾತಿತ್ತು. ಐದು ಬಾರಿ ಗೆದ್ದಿದ್ದ ಮತ್ತು ಎಲ್ಲೇ ನಿಂತರೂ ಗೆಲ್ಲುವ ಸಾಮರ್ಥ್ಯ ಇದ್ದ ಒಬ್ಬ ಮಂತ್ರಿಯನ್ನು ರಾತ್ರೋರಾತ್ರಿ ಅಮಾನತು ಮಾಡಿದೆವು. ಅವರು ಮಾಧ್ಯಮಗಳಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು. ಅಲ್ಲದೇ ಅವರು ಕೋರ್ ಕಮಿಟಿ‌ ಸಭೆಯನ್ನು ತಪ್ಪಿಸಿದರು.

ಆ ಮಂತ್ರಿ ತಾವು ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ತೀನಿ ಅನ್ನೋ ಹಮ್ಮಿನಲ್ಲಿದ್ರು. ನನ್ನನ್ನು ನಿರಾಕರಿಸಲು ಆಗಲ್ಲ ಅನ್ನೋ ವಿಶ್ವಾಸದಲ್ಲಿದ್ದರು. ಅವರ ಜತೆ ಕೆಲವರು ಶಾಸಕರು ಟಿಕೆಟ್ ಕೊಡದಿದ್ರೆ ರೆಬೆಲ್​​ ಆಗಿ ನಿಲ್ತೀವಿ ಅಂತಾ ಹೆದರಿಸಿದ್ದರು. ಆ ಮಂತ್ರಿ ನಡವಳಿಕೆ ಬಗ್ಗೆ ನಾನು ನಡ್ಡಾ ಅವರ ಬಳಿ ಹೇಳಿದೆ. ಒಂದು ದಿನ ಆ ಮಂತ್ರಿಯನ್ನು ಸಂಪುಟದಿಂದ ಕೆಳಗಿಳಿಸಿಯೇ ಬಿಟ್ಟರು. ಮೋದಿ ಸೇರಿ ಎಲ್ರೂ ಈ ನಡೆಗೆ ಶಾಕ್ ಆದರು. ಉತ್ತರಾಖಂಡ ಮಂತ್ರಿಯೊಬ್ಬರನ್ನು ವಜಾ ಮಾಡಿದ ಬಗ್ಗೆ ಹೇಳಿದ ಜೋಶಿ ಆ ಮೂಲಕ‌‌ ಪರೋಕ್ಷವಾಗಿ ರಾಜ್ಯದ ಸಚಿವರಿಗೂ ಎಚ್ಚರಿಕೆ‌ಯ ಸಂದೇಶ ರವಾನಿಸಿದರು.

ಅದ್ಭುತ ಬಜೆಟ್: ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯ ಇದೆ. ಬೊಮ್ಮಾಯಿ‌ ಅದ್ಭುತ ಬಜೆಟ್ ಕೊಟ್ಟಿದ್ದಾರೆ. ಕಂದಾಯ ಇಲಾಖೆಯ ಮನೆ ಬಾಗಿಲಿಗೆ ದಾಖಲೆ‌ ತಲುಪಿಸುವ ಯೋಜನೆ ಅದ್ಭುತವಾಗಿದೆ ಎಂದು ಸಿಎಂ ಬೊಮ್ಮಾಯಿ ಆಡಳಿತವನ್ನು ಹೊಗಳಿದರು.

ಇನ್ನು ರಾಜ್ಯದಲ್ಲಿ ಮುಂಬರಲಿರು ಚುನಾವಣೆಗೆ ಕಾರ್ಯತಂತ್ರ ರೂಪಿಸೋಣ. ಬಜೆಟ್ ಅಂಶಗಳನ್ನು ಜನರ‌ ಬಳಿಗೆ ಕೊಂಡೊಯ್ಯಿರಿ. ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಏನೆಲ್ಲ ಕೆಲಸ ಆಗಿದೆ ಅದನ್ನು ಜನರಿಗೆ ತಲುಪಿಸಬೇಕು. ಇಲ್ಲಿಯೂ ನಾವು ಗೆದ್ದು ತೋರಿಸೋಣ ಎಂದು ಬೊಮ್ಮಾಯಿ ಹಾಗೂ ಕಟೀಲ್ ಅವರಿಗೆ ಜೋಶಿ ಸಲಹೆ ನೀಡಿದರು.

ಸಿಎಂಗೆ ತಮಾಶೆಯಾಗಿ ಕಾಲೆಳೆದ ಜೋಶಿ: ಭಾಷಣದ ವೇಳೆ ಕೇಂದ್ರ ಸಚಿವ ಜೋಶಿ, ಸಿಎಂ ಈಗ ಸಿನಿಮಾಗೆ ಹೋಗಬೇಕು. ಹಾಗಾಗಿ ಈ ಕಾರ್ಯಕ್ರಮ ಪಟ ಪಟ ಅಂತಾ ಹೋಗುತ್ತಿದೆ ಎಂದರು. ಇದಕ್ಕೆ ಪ್ರತಿಯಾಗಿ ನಾನು ಪಕ್ಷದ ಸೂಚನೆ ಮೇರೆಗೆ ಸಿನಿಮಾಗೆ ಹೋಗುತ್ತಿರುವುದು ಎಂದು ಸಿಎಂ ತಿರುಗುತ್ತರ ನೀಡಿದರು. ತಕ್ಷಣವೇ ಮಾತು ಮುಂದುವರೆಸಿದ ಜೋಶಿ, ನೀವು ಇತ್ತೀಚೆಗೆ ಪಕ್ಷದ ಸೂಚನೆಗಳನ್ನು ಹೆಚ್ಚು ಹೆಚ್ಚು ಪಾಲಿಸ್ತಿದೀರ ಅದಕ್ಕಾಗಿ ಅಭಿನಂದನೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ,‌ ಇದೇ ಮೊದಲ ಬಾರಿ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಲ್ಲಿ ಚುನಾವಣೆ ನಡೆದಿದೆ‌. ಅಭಿವೃದ್ಧಿ ವಿಚಾರದಲ್ಲಿ ನಾವು ಚುನಾವಣೆ ಮಾಡಿ ಗೆದ್ದಿದ್ದೇವೆ. ರಾಜ್ಯದಲ್ಲಿನ ಡಕಾಯಿತಿ ವ್ಯವಸ್ಥೆ ಬದಲಿಸಿ ಕಾನೂನು ಸುವ್ಯವಸ್ಥೆ ತಹಬದಿಗೆ ತಂದಿದ್ದನ್ನೂ ಜನ ಪುರಸ್ಕರಿಸಿದ್ದಾರೆ ಎಂದರು.

ಉತ್ತರ ಪ್ರದೇಶದಲ್ಲಿ ಆರು ವಿಭಾಗದಲ್ಲಿ ಪಕ್ಷ ಸಂಘಟನೆ ಇದೆ. ಆರು ವಿಭಾಗಕ್ಕೆ ಪ್ರತ್ಯೇಕ ಆರು ರಾಜ್ಯಾಧ್ಯಕ್ಷರು ಇದ್ದಾರೆ. ಅಲ್ಲಿಗೆ ಹೋಲಿಕೆ ಮಾಡಿದರೆ ರಾಜ್ಯದ ಸಂಘಟನೆ ಉತ್ತಮವಾಗಿದೆ. ಆರು ತಿಂಗಳು ನಾನು ಅಲ್ಲಿ ಕೆಲಸ ಮಾಡಿದೆ. ಮೂರು ತಿಂಗಳು ಅಲ್ಲೆ ವಾಸ್ತವ್ಯ ಹೂಡಿದ್ದೆ. ಪಕ್ಷದ ಸೂಚನೆ ಕೂಡ ಇತ್ತು ಎಂದರು.

ಹಿಂದೆ ಧರ್ಮ ಆಧಾರದಲ್ಲಿ ಚುನಾವಣೆ ನಡೆಯುತ್ತಿತ್ತು. ಸಮಾಜವಾದಿ ಪಕ್ಷ, ಕಾಂಗ್ರೆಸ್ ಜಾತಿ ರಾಜಕೀಯ ಮಾಡುತ್ತಾ ಬರುತ್ತಿದ್ದವು. ಹಿಂದೆ ನಮಗೆ ರಾಮ ಮಂದಿರ ವಿಚಾರ ಇತ್ತು. ಈಗ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಹಾಗಾಗಿ ಅದರಲ್ಲಿ ಮತ ಕೇಳುವ ಪ್ರಶ್ನೆ ಇಲ್ಲ. ನಾವು ಯಾವತ್ತು ಜಾತಿ ಆಧಾರದಲ್ಲಿ ಚುನಾವಣೆ ಮಾಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಾವು ಚುನಾವಣೆ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಯೋಗಿ ಬಂದ ಮೇಲೆ ಸರಿಯಾಗಿದೆ ಎಂದರು.

ಮುಸ್ಲಿಂ ಹೆಣ್ಣುಮಕ್ಕಳು ಸಹ ನಮಗೆ ಮತ ಹಾಕಿದ್ದಾರೆ. ಕೇಂದ್ರದ ಬಹುತೇಕ ಎಲ್ಲ ಯೋಜನೆ ಯುಪಿಗೆ ತಲುಪಿದೆ. ಹೆಚ್ಚು ಮುಸ್ಲಿಂರಿಗೆ ಯೋಜನೆ ತಲುಪಿದೆ. ಅಲ್ಲಿಯ ಜನ ಮೋದಿ - ಯೋಗಿ ಉಪ್ಪು ತಿಂದಿದ್ದೇವೆ ಎನ್ನುತ್ತಿದ್ದರು. ಕೊರೊನಾ ಸಮಯದಲ್ಲಿ ಯೋಗಿ ಆದಿತ್ಯನಾಥ್ ಹೆಚ್ಚುವರಿ ಪಡಿತರ ನೀಡಿದ್ದರು. ಎಲ್ಲವೂ ಸಹ ಪಕ್ಷದ ಕೈ ಹಿಡಿಯಿತು ಎಂದರು.

ತುಕಡೆ ಗ್ಯಾಂಗ್ ತಲೆ ಎತ್ತದಂತೆ ಮಾಡಿದ್ದೇವೆ: ಪಂಚ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸುವ ಮೂಲಕ ತುಕಡೆ ಗ್ಯಾಂಗ್ ತಲೆ ಎತ್ತದಂತೆ ಮಾಡಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

CT Ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

35 ವರ್ಷದ ಹಿಂದೆ ನಾನು ಸಾಮಾನ್ಯ ಕಾರ್ಯಕರ್ತ. ಈಗ ಹೊರ ರಾಜ್ಯದ ಉಸ್ತುವಾರಿ. ಆ ರೀತಿ ಬೆಳೆಸುವ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ನೀತಿ ನಿಯತ್ತು ನೇತೃತ್ವ ಇರುವ ಕಡೆ ಗೆಲುವು ಸಿಗದೇ ಇರುತ್ತಾ?. ನಮಗೆ ವಿಶ್ವಮಾನ್ಯ ನಾಯಕತ್ವ ಸಿಕ್ಕಿದೆ. ನಿಯತ್ತಿನ ಕೆಲಸ ಮಾಡಿದ್ದೇವೆ. ಮೋದಿ ನಾಯಕತ್ವದ ಹೆಸರಲ್ಲೇ ಚುನಾವಣೆ ನಡೆದಿದೆ. ಹೂವಿನ ಜತೆ ನಾರು ಸ್ವರ್ಗ ಸೇರಿದಂತೆ, ನಾವು ಕೂಡ ಚುನಾವಣೆಯಲ್ಲಿ ಮೋದಿ ಜತೆ ನಾರಿನಂತೆ ಸ್ವರ್ಗ ಸೇರಿದ್ದೇವೆ.

ಕಾರ್ಯಕರ್ತರಂತೆ ನಾವು ಕೆಲಸ ಮಾಡಿದ್ದೇವೆ. ನಾಲ್ಕೂ ಕಡೆ ಗೆದ್ದು, ತುಕಡೆ ಗ್ಯಾಂಗ್ ಎದ್ದು ನಿಲ್ಲದಂತೆ ಮಾಡಿದ್ದೇವೆ. ಒಂದು ವೇಳೆ ನಾವು ಸೋತಿದ್ದರೆ ಕೇವಲ ಭಾರತದ ಪತ್ರಿಕೆಗಳು ಮಾತ್ರವಲ್ಲ, ಜಗತ್ತಿನ ಪತ್ರಿಗಳು ಬರೆಯುತ್ತಿದ್ದವು. ಒಂದು ಟಿವಿ ಚಾನಲ್​​ಗೆ ನಮ್ಮ ಗೆಲುವನ್ನು ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ ವ್ಯಂಗ್ಯವಾಡಿದರು.

ಮುಂದಿನ ಕಾರ್ಯಗಳಿಗೆ ಈ ಗೆಲುವು ವೇಗ ಕೊಟ್ಟಿದೆ. ನಾವು ಚುನಾವಣಾ ಹಿಂದೂಗಳಲ್ಲ. ಚುನಾವಣಾ ಸಮಯದಲ್ಲಿ ಕೆಲವರು ಹಿಂದೂಗಳು ಆಗ್ತಾ ಇರುತ್ತಾರೆ. ನಾವು ಆ ಹಿಂದೂಗಳು ಅಲ್ಲ. ನಾವು ಹಿಂದುತ್ವದ ಮೇಲೆ ನಂಬಿಕೆ ಇಟ್ಟ‌ ಹಿಂದೂಗಳು. ಕೆಲವರು ಚುನಾವಣಾ ಸಮಯದಲ್ಲಿ ಉದ್ದ ಅಡ್ಡ ಎಲ್ಲ ನಾಮ ಎಳೆದುಕೊಂಡಿದ್ದರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದೇನು?: ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಲಿದೆ. ರಾಷ್ಟ್ರೀಯ ನಾಯಕತ್ವ ಕರ್ನಾಟಕದ ಕಾರ್ಯಕರ್ತರ ಮೇಲೆ ವಿಶ್ವಾಸ ಹೊಂದಿದೆ. ದಿಗ್ವಿಜಯ ಯಾತ್ರೆ ಮುಗಿಸಿ ಬಂದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.

BJP President Nalin Kumar Katil
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

ಕೆಪಿಸಿಸಿ ಎಂದರೆ ಅದು ಕನಕಪುರ ಕಾಂಗ್ರೆಸ್ ಆಗಲಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕವೇ ಆಗಿಲ್ಲ ಎಂದು ಅವರು ತಿಳಿಸಿದ್ದಾಗಿ ಕಟೀಲ್​​ ಹೇಳಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಲಿ ಎಂಬುದು ನನ್ನಂತಹ ಲಕ್ಷಾಂತರ ಕಾರ್ಯಕರ್ತರ ಆಶಯ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.