ETV Bharat / state

ರಾಜ್ಯದಲ್ಲಿ ಬಿಜೆಪಿ ಪರ ಸ್ಪಷ್ಟ ಅಲೆ ಇದೆ: ಎ.ನಾರಾಯಣಸ್ವಾಮಿ

author img

By

Published : May 8, 2023, 1:11 PM IST

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸಚಿವ ಎ ನಾರಾಯಣಸ್ವಾಮಿ
ಕೇಂದ್ರ ಸಚಿವ ಎ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯದ 16-17 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಬಿಜೆಪಿ ಪರ ಸ್ಪಷ್ಟವಾದ ಅಲೆ ಇದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2 ತಿಂಗಳ ಮೊದಲು ಮುಖ್ಯಮಂತ್ರಿ ವಿಚಾರದಲ್ಲಿ ಖರ್ಗೆ, ದಲಿತ ನಾಯಕರ ಹೆಸರು ಪ್ರಸ್ತಾಪ ಆಗುತ್ತಿರಲಿಲ್ಲ. ದಲಿತ ಪದ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದಕ್ಕೆ ಹತಾಶೆಯೇ ಕಾರಣ.

ಛತ್ತೀಸಗಡದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕನ ಮನೆ ಮೇಲೆ ಐಟಿ ದಾಳಿ ನಡೆದಾಗ 2 ಸಾವಿರ ಕೋಟಿ ಹಣ ಸಿಕ್ಕಿದ್ದು, ರಮೇಶ್‍ಕುಮಾರ್ ಅವರ ಮೂರು ತಲೆಮಾರಿಗೆ ಆಗುವಷ್ಟು ಹಣ ಇದೆ ಎಂದಿರುವುದು ಕಾಂಗ್ರೆಸ್ಸಿನ ಭ್ರಷ್ಟತೆಗೆ ಸ್ಪಷ್ಟ ಸಾಕ್ಷಿ. ಲೂಟಿಗಾಗಿ ಅಧಿಕಾರಕ್ಕೆ ಬರುವುದು, ದೆಹಲಿಗೆ ಸೂಟ್‍ಕೇಸ್ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷ ಅಧಿಕಾರ ಬಯಸುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಸಚಿವ ಎಲ್.ಮುರುಗನ್ ಮಾತನಾಡಿ, ಮೀಸಲಾತಿಯು ತಳಮಟ್ಟದ ಸಮಾಜಕ್ಕೆ ತಲುಪಬೇಕೆಂಬುದು ದೀನದಯಾಳ ಉಪಾಧ್ಯಾಯರ ಆಶಯವಾಗಿತ್ತು. ಅದರ ನಿಟ್ಟಿನಲ್ಲಿ ಬೊಮ್ಮಾಯಿಯವರ ಸರಕಾರವು ಒಳ ಮೀಸಲಾತಿ ಅನುಷ್ಠಾನಕ್ಕೆ ತಂದಿದೆ. ಇದೊಂದು ಚಾರಿತ್ರಿಕ ನಿರ್ಧಾರ. ಸದಾಶಿವ ಆಯೋಗದ ವರದಿ, ಸಚಿವ ಸಂಪುಟದ ಸಮಿತಿ ಶಿಫಾರಸಿನ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಇದರಿಂದ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ ಎಂದು ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ: ನಿನ್ನೆ ಬೈಕ್‌ನಲ್ಲಿ ಸಂಚಾರ, ಇಂದು ಬಿಎಂಟಿಸಿ ಬಸ್​ ಏರಿದ ರಾಹುಲ್ ಗಾಂಧಿ: ಗ್ಯಾರಂಟಿಗಳ ಚರ್ಚೆ

ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಮಾತನಾಡಿ, ರಾಜ್ಯದ ಮಾದಿಗರೆಲ್ಲರೂ ಬಿಜೆಪಿಗೆ ಮತ ಕೊಡಲು ಮಾದಿಗ ದಂಡೋರ ರಾಜ್ಯ- ರಾಷ್ಟ್ರ ಸಮಿತಿ ತೀರ್ಮಾನ ಮಾಡಿದೆ. ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಲಿಲ್ಲ. ಬಿಜೆಪಿಗೆ ಮತ ಕೊಟ್ಟರೆ ಮಾದಿಗರ ಅಭಿವೃದ್ಧಿ ಖಚಿತ. ಕಾಂಗ್ರೆಸ್ಸಿಗೆ ಮತ ಕೊಟ್ಟರೆ ಪ್ರಯೋಜನವಿಲ್ಲ. ಮಾದಿಗರು ಕಾಂಗ್ರೆಸ್ಸಿಗೆ ಮತ ಕೊಟ್ಟು ಮೋಸ ಹೋಗದಿರಿ. ನಷ್ಟ ಮಾಡಿಕೊಳ್ಳದಿರಿ.

ಆಕಸ್ಮಿಕವಾಗಿ ಈ ನಿರ್ಣಯ ಮಾಡಿಲ್ಲ. ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯ, ಬಸವರಾಜ ಬೊಮ್ಮಾಯಿಯವರ ಕಾರ್ಯ, ಯೋಜನೆಗಳನ್ನು ಗಮನಿಸಿ ಈ ನಿರ್ಧಾರ ಮಾಡಿದ್ದೇವೆ. ಕೇಂದ್ರ ಸರಕಾರವು ಗರಿಷ್ಠ ಸಚಿವ ಸ್ಥಾನಗಳನ್ನು ಎಸ್‍ಸಿ, ಎಸ್‍ಟಿ, ಒಬಿಸಿ ಸಮುದಾಯಕ್ಕೆ ನೀಡಿದೆ. ಇದು ನೈಜ ಸಾಮಾಜಿಕ ನ್ಯಾಯದ ಪ್ರತೀಕ. ಕಾಂಗ್ರೆಸ್ ಪಕ್ಷವು ಕೇವಲ ಮಾತಿನಲ್ಲಿ ಸಾಮಾಜಿಕ ನ್ಯಾಯದ ವಿಚಾರವನ್ನು ತರುತ್ತಿದೆ. ಆದರೆ, ಬಿಜೆಪಿ ಅದನ್ನು ಜಾರಿಗೊಳಿಸಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ 130 ರಿಂದ 135 ಸ್ಥಾನ ಗೆಲ್ಲಲಿದೆ: ಬಿ.ಎಸ್.ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.