ETV Bharat / state

ಬೆಂಗಳೂರಿನಲ್ಲಿ ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ : ₹2.25 ಕೋಟಿ ಮೌಲ್ಯದ ಚಿನ್ನ ಜಪ್ತಿ

author img

By

Published : Jan 2, 2021, 1:46 PM IST

Updated : Jan 2, 2021, 2:35 PM IST

ಒಂದು ವೇಳೆ ಬಾಗಿಲು ತೆರೆಯದಿದ್ದರೆ ಮನೆಯಲ್ಲಿ ಯಾರಿಲ್ಲ ಎಂದು ಭಾವಿಸಿಕೊಂಡು ಬೀಗ ಮುರಿದು ಕ್ಷಣಾರ್ಧದಲ್ಲಿ ಚಿನ್ನಾಭರಣ ದೋಚಿ ಕಾರಿನಲ್ಲಿ ಎಸ್ಕೇಪ್ ಆಗುತ್ತಿದ್ದರು. ಬಂದ ಹಣವನ್ನು ಆರೋಪಿಗಳು ಸರಿಸಮನಾಗಿ ಹಂಚಿಕೊಂಡು ಮೋಜು, ಮಸ್ತಿ ಮಾಡುತ್ತಿದ್ದರು..

bangalore
ಬೆಂಗಳೂರಿನಲ್ಲಿ ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

ಬೆಂಗಳೂರು : ಯಾವುದೇ ಅಪರಾಧವಾಗಲಿ,‌ ಅದು‌ ಎಲ್ಲಿಯೇ ನಡೆದಿರಲಿ. ಪೊಲೀಸರಿಗೆ ಒಂದು ಸಣ್ಣ ಸುಳಿವು ಸಿಕ್ಕರೆ ಸಾಕು ಇಡೀ ಪ್ರಕರಣ ಬೇಧಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಸಿನಿ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹2.25 ಕೋಟಿ ಮೌಲ್ಯದ 4 ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ.

ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ : ₹2.25 ಕೋಟಿ ಮೌಲ್ಯದ ಚಿನ್ನ ಜಪ್ತಿ

ಉತ್ತರಪ್ರದೇಶದ ಮುರಾದಬಾದ್ ಮೂಲದ ಫಯುಮ್ ಹಾಗೂ ಮುರಸಲೀಂ ಮೊಹಮ್ಮದ್ ಬಂಧಿತ ಆರೋಪಿಗಳು. ಇವರ ಬಂಧನದಿಂದ ಸಂಜಯನಗರ, ಅನ್ನಪೂರ್ಣೇಶ್ವರಿನಗರ, ಬ್ಯಾಡರಹಳ್ಳಿ ಸೇರಿದಂತೆ ಒಟ್ಟು 35 ಅಪರಾಧ ಪ್ರಕರಣ ಬೇಧಿಸಲಾಗಿದೆ‌‌ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಫಯುಮ್ ಆಲಿಯಾಸ್ ಎಟಿಎಂ ಫಯೂಮ್ ಉತ್ತರಪ್ರದೇಶದ ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ಧ ಮನೆಗಳ್ಳತನ, ಕೊಲೆ, ಕೊಲೆ ಯತ್ನ ಸೇರಿದಂತೆ 40ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದವು. 2017ರಲ್ಲಿ ನೋಯ್ದಾ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಯಾಗಿ ಮತ್ತೆ ಹಳೆ ಚಾಳಿ ಮುಂದುವರೆಸುವ ಮೂಲಕ ಉತ್ತರಪ್ರದೇಶ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದ.

ಈತನ ಪತ್ತೆ ಮಾಡಿ ಕೊಟ್ಟರೆ ಅಥವಾ ಸುಳಿವು ಕೊಟ್ಟರೆ ₹10 ಸಾವಿರ ನಗದು ಬಹುಮಾ‌ನ ನೀಡುವುದಾಗಿ ಯುಪಿ ಸರ್ಕಾರ ಘೋಷಿಸಿತ್ತು. ಇದರಿಂದ ಎಚ್ಚೆತ್ತ ಆರೋಪಿ ಹಾಗೂ ಸಹಚರರ ತಂಡ ಉತ್ತರಪ್ರದೇಶದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಕಾರಿನ ಮೂಲಕ ಬಂದು ಸರಣಿ ಕಳ್ಳತನ ಮಾಡುತಿತ್ತು.

ಕಳ್ಳತನ ಹೇಗೆ ಮಾಡುತ್ತಿದ್ದರು ಗೊತ್ತಾ? : ಯುಪಿಯಿಂದ‌ ಕಾರಿನಲ್ಲೇ ಕಳ್ಳತನ ಮಾಡಲು ಬರುತ್ತಿದ್ದ ಈ ಗ್ಯಾಂಗ್, ಸೂಲ್ಕ್ ಬ್ಯಾಗ್ ಧರಿಸಿ ತಲೆಗೆ ಟೋಪಿ ಧರಿಸಿ ಹಗಲಿನಲ್ಲೇ ಮನೆಗಳಿಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದರು. ಮನೆ ಮಾಲೀಕರ ಬಾಗಿಲು ತೆರೆದರೆ ಮಿಕ್ಸಿ ರಿಪೇರಿಗೆ ಬಂದಿರುವುದಾಗಿ ಸುಳ್ಳು ಹೇಳುತ್ತಿದ್ದರು‌.

ಒಂದು ವೇಳೆ ಬಾಗಿಲು ತೆರೆಯದಿದ್ದರೆ ಮನೆಯಲ್ಲಿ ಯಾರಿಲ್ಲ ಎಂದು ಭಾವಿಸಿಕೊಂಡು ಬೀಗ ಮುರಿದು ಕ್ಷಣಾರ್ಧದಲ್ಲಿ ಚಿನ್ನಾಭರಣ ದೋಚಿ ಕಾರಿನಲ್ಲಿ ಎಸ್ಕೇಪ್ ಆಗುತ್ತಿದ್ದರು. ಬಂದ ಹಣವನ್ನು ಆರೋಪಿಗಳು ಸರಿಸಮನಾಗಿ ಹಂಚಿಕೊಂಡು ಮೋಜು, ಮಸ್ತಿ ಮಾಡುತ್ತಿದ್ದರು.

ಫಿಂಗರ್ ಪ್ರಿಂಟ್ ಹೋಲಿಸಿದಾಗ ಆರೋಪಿಗಳ ಜಾತಕ ಬಯಲು : ಗೋವಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ನಗರಗಳನ್ನೇ ಗುರಿಯಾಗಿಸಿಕೊಂಡು ಸರಣಿ ಮನೆಗಳ್ಳತನ ಮಾಡುತ್ತಿದ್ದ ಈ ಗ್ಯಾಂಗ್, ಕೆಲ ತಿಂಗಳ ಹಿಂದೆ ಹೈದರಾಬಾದ್ ಮನೆಯೊಂದರಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದರು.

ಕೂಡಲೇ ಎಚ್ಚೆತ್ತ ಪೊಲೀಸರು ಹೈದರಾಬಾದ್ ಪೊಲೀಸರಿಂದ ಫಿಂಗರ್ ಪ್ರಿಂಟ್ ತರಿಸಿಕೊಂಡು ಹೋಲಿಕೆ ಮಾಡಿದಾಗ ನಗರದಲ್ಲಿ 35 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ‌ಕೂಡಲೇ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಾಡಿ ವಾರೆಂಟ್ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಕಳ್ಳತನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಪೊಲೀಸರಿಗೆ ಯಾಮಾರಿಸಲು ಮುಂದಾಗಿದ್ದ ಈ ಗ್ಯಾಂಗ್ : 14 ದಿನಗಳ ಕಾಲ ಪೊಲೀಸ್ ವಶಕ್ಕೆ‌ ಪಡೆದುಕೊಂಡು ನಗರದಲ್ಲಿ ಎಸಗಿದ ಕಳ್ಳತನದ ಬಗ್ಗೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಕದ್ದ ಚಿನ್ನಾಭರಣಗಳನ್ನು ಹರಿಯಾಣದ ಗುರಗಾಂವ್ ಜೈಲಿನಲ್ಲಿರುವ ಕುಖ್ಯಾತ ರೌಡಿ ಅಶೋಕ್ ಲಾಟಿ ಎಂಬಾತನ ಮುಖಾಂತರ ದೆಹಲಿ, ಯುಪಿ ಸೇರಿದಂತೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.‌

ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಆರೋಪಿಗಳ ಜೊತೆ ಹರಿಯಾಣದ ಗುರಗಾಂವ್‌ಗೆ ಪೊಲೀಸರು ಪ್ರಯಾಣ ಬೆಳೆಸಿದ್ದರು. ಜೈಲಿಗೆ ಹೋಗಿ ರೌಡಿ ಅಶೋಕ್ ಲಾಟಿ ಬಗ್ಗೆ ವಿಚಾರಿಸಿದಾಗ ಒಂದು ವರ್ಷದ ಹಿಂದೆಯೇ ಕೊಲೆಯಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಆಮೇಲೆ ಪೊಲೀಸರ ತನಿಖೆ ಹಾದಿ ತಪ್ಪಿಸಲು ಆರೋಪಿಗಳು ಹೂಡಿದ್ದ ಪ್ಲ್ಯಾನ್ ಇದು ಎಂದು ಗೊತ್ತಾಗಿದೆ.

Last Updated : Jan 2, 2021, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.