ETV Bharat / state

ಪ್ರತ್ಯೇಕ ಎರಡು ಅಪಘಾತ : ಓರ್ವ ಸಾವು, ಟ್ರಾಫಿಕ್‌ ಎಎಸ್ಐಗೆ ಗಂಭೀರ ಗಾಯ

author img

By

Published : Feb 26, 2023, 10:40 PM IST

ಬೆಂಗಳೂರಿನ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸ್ಕಾರ್ಪಿಯೋ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

ಎಎಸ್‌ಐ ನಾಗರಾಜ್
ಎಎಸ್‌ಐ ನಾಗರಾಜ್

ಬೆಂಗಳೂರು: ಕಾರೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರಣ್ಯಪುರ ನಿವಾಸಿ ವಿಕ್ರಮ್ ಮೃತರು ಎಂದು ತಿಳಿದುಬಂದಿದೆ.

ಸಿಸಿ ಕ್ಯಾಮರಾಗಳ ಅಳವಡಿಕೆ ಕೆಲಸ ಮಾಡುವ ವಿಕ್ರಮ್, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ವಿದ್ಯಾರಣ್ಯಪುರ ಕಡೆಯಿಂದ ಬ್ಯಾಲಕೆರೆ ರಸ್ತೆಯ ವೀರಸಾಗರದ ಕಡೆ ಹೋಗುತ್ತಿದ್ದರು. ಅದೇ ವೇಳೆ ಎದುರುಗಡೆಯಿಂದ ಬಂದ ಕಾರು ವಿಕ್ರಮ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಕ್ರಮ್‌ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಎಸ್​ಐಗೆ ಡಿಕ್ಕಿ: ವೇಗವಾಗಿ ಬಂದ ಆಟೋ ಚಾಲಕನೊಬ್ಬ ಕರ್ತವ್ಯನಿರತ ಎಎಸ್‌ಐಗೆ ಡಿಕ್ಕಿ ಹೊಡೆದಿರುವ ಘಟನೆ ಹೈಗ್ರೌಂಡ್ಸ್ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಹೈಗ್ರೌಂಡ್ ಸಂಚಾರ ಠಾಣೆಯ ಎಎಸ್‌ಐ ನಾಗರಾಜ್ ಗಾಯಗೊಂಡವರು. ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಆಟೋ ಚಾಲಕ ಶಿವಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ಆಟೋ ಚಾಲಕ ಶಿವಕುಮಾರ್
ಆಟೋ ಚಾಲಕ ಶಿವಕುಮಾರ್

ಎಎಸ್‌ಐ ನಾಗರಾಜ್ ಭಾನುವಾರ ಚಾಲುಕ್ಯ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಸಂಜೆ 4 ಗಂಟೆ ಸುಮಾರಿಗೆ ಅರಮನೆ ರಸ್ತೆಯಲ್ಲಿ ಸಿಐಡಿ ಕಚೇರಿ ಕಡೆಯಿಂದ ಚಾಲುಕ್ಯ ವೃತ್ತಕ್ಕೆ ವೇಗವಾಗಿ ಬಂದ ಆಟೋರಿಕ್ಷಾ ಏಕಾಏಕಿ ನಾಗರಾಜ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಗರಾಜ್ ಏಳೆಂಟು ಅಡಿ ಮುಂದಕ್ಕೆ ಹಾರಿ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ಎಎಸ್‌ಐ ನಾಗರಾಜ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಬಳಿಕ ಚಾಲಕ ಶಿವಕುಮಾರ್ ಆಟೋ ಸಹಿತ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಹಿಂಬಾಲಿಸಿ ಆರೋಪಿಯನ್ನು ವಿಂಡ್ಸರ್ ಮ್ಯಾನರ್ ಹೋಟೆಲ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಘಾತಕ್ಕೆ ಚಾಲಕನ ಅತೀವೇಗದ ಚಾಲನೆ ಮತ್ತು ನಿರ್ಲಕ್ಷ್ಯವೇ ಕಾರಣ ಎಂಬುದು ಗೊತ್ತಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.

ಹೆಡ್​ಕಾನ್ಸ್​​ಸ್ಟೇಬಲ್​ ಮೃತ: ಇನ್ನೊಂದೆಡೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಬಳಿ ಕಳೆದ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಹೆಡ್​ಕಾನ್ಸ್‌ಟೇಬಲ್ ಒಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮುಂಡರಗಿ ಠಾಣೆಯ ಕೊಟ್ರೆಪ್ಪ ಬಂಡಗಾರ (59) ಮೃತ ಪೊಲೀಸ್ ಹೆಡ್​​ಕಾನ್ಸ್‌ಟೇಬಲ್ ಎಂಬುದು ತಿಳಿದು ಬಂದಿದೆ. ಕೊಟ್ರೆಪ್ಪ ಅವರು ಮುಂಡರಗಿ ತಾಲೂಕಿನ ಡಂಬಳದಲ್ಲಿ ಕರ್ತವ್ಯದ ಮೇಲೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 12 ಗಂಟೆಯ ಬಳಿಕ ಮನೆಗೆ ತೆರಳುತ್ತಿದ್ದರು. ಡಂಬಳದಿಂದ ಮುಂಡರಗಿ ಕಡೆಗೆ ಹೊರಟಿದ್ದ ವೇಳೆ ಅಪರಿಚಿತ ಟ್ರ್ಯಾಕ್ಟರ್​ವೊಂದು ಹಿಟ್ ಅಂಡ್ ರನ್ ಮಾಡಿದೆ ಪೊಲೀಸ್​ ಇಲಾಖೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಗದಗದಲ್ಲಿ ಭೀಕರ ರಸ್ತೆ ಅಪಘಾತ.. ಪೊಲೀಸ್ ಹೆಡ್​ ಕಾನ್ಸ್​ಸ್ಟೇಬಲ್ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.